*  ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರಿ ವಾಹನ ಜಪ್ತಿ*  ಪರಿಹಾರ ಕೊಡಿಸುವಲ್ಲೂ ಎಸಿ ವರ್ಗಾವಣೆ ಪ್ರಮುಖ ಪಾತ್ರ*  ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದ ಮಹಿಳೆ

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಜೂ.25): ಭೂಸ್ವಾಧೀನ ಪಡಿಸಿಕೊಂಡು ರೈತ ಮಹಿಳೆಗೆ ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ ಧಾರವಾಡ ಸರ್ಕಾರಿ ವಾಹನವನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. 

ಏನಿದು ಪ್ರಕರಣ?:

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗವ್ವ ಲಲಿತಾ ಕೇರಿ ಎಂಬುವವರಿಗೆ ಸೇರಿದ್ದ 2 ಎಕರೆ 30 ಗುಂಟೆ ಜಮೀನನ್ನು ಉಪವಿಭಾಗಾಧಿಕಾರಿ ಕಚೇರಿಯಿಂದ ಆಗ ಮಹಿಳೆಗೆ ಕೇವಲ 35 ಲಕ್ಷ ಪರಿಹಾರ ಮಾತ್ರ ನೀಡಲಾಗಿತ್ತು. ಹೆಚ್ಚಿನ ಪರಿಹಾರಕ್ಕಾಗಿ ಮಹಿಳೆ ಮತ್ತೆ ಕೋರ್ಟ್‌ನಲ್ಲಿ ದಾವೇ ಹೂಡಿದ್ದರು. ಈ ಕಡಿಮೆ ಪರಿಹಾರ ನೀಡಿದ್ದನ್ನು ಪ್ರಶ್ನಿಸಿ ಜಮೀನು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಕೂಡ ಜಮೀನು ಮಾಲೀಕರಿಗೆ 1 ಕೋಟಿ 73 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ನ್ಯಾಯಾಲಯ ಆದೇಶ ಹೊರಡಿಸಿ 9 ತಿಂಗಳು ಕಳೆದರೂ ಇನ್ನು ಆ ಮಹಿಳೆಗೆ ಪರಿಹಾರವನ್ನ ಕೊಡಿಸುವಲ್ಲಿ ಎಸಿ ಗಳು ನಿಸ್ಸಾಹಯಕರಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ: ಕಿರಿದಾಗಲಿದೆ ಬಿಆರ್‌ಟಿಎಸ್‌ ಕಾರಿಡಾರ್‌?

ನ್ಯಾಯಾಲಯದ ಆದೇಶವಿದ್ದರೂ ಜಮೀನು ಮಾಲೀಕರಿಗೆ 9 ತಿಂಗಳು ಕಳೆದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಧಾರವಾಡದ ಎರಡನೇ ಅಧಿಕ ಜಿಲ್ಲಾ ನ್ಯಾಯಾಲಯವು ಉಪವಿಭಾಗಧಿಕಾರಿಗಳ ಸರ್ಕಾರಿ ವಾಹನ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. 

ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಶುಕ್ರವಾರ ಉಪವಿಭಾಗಾಧಿಕಾರಿಗಳ ವಾಹನವನ್ನು ಜಪ್ತಿ ಮಾಡಿದ್ದಾರೆ. ಇನ್ನು ಈ ಕುರಿತು ಮಹಿಳೆ ಕೇವಲ ಜಪ್ತಿ ಮಾಡಿದರೆ ಸಾಲದು ನನಗೆ ಬರಬೇಕಾದ ಪರಿಹಾರದ ಮೊತ್ತವನ್ನ ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಪರಿಹಾರ ಕೊಡಿಸುವಲ್ಲೂ ಎಸಿ ವರ್ಗಾವಣೆ ಪ್ರಮುಖ ಪಾತ್ರ:

ಇನ್ನು ಪದೇ ಪದೆ ಉಪವಿಭಾಗಾಧಿಕಾರಿಗಳ ಮೇಲಿಂದ ಮೇಲೆ ಅಧಿಕಾರಿಗಳು ವರ್ಗಾವಣೆ ಆಗುತ್ತಿರುವ ಹಿನ್ನಲೆಯಿಂದ ಎಸಿ ಕಚೇರಿಯಿಂದ ಕೆಲಸಗಳು ಸೂಕ್ತವಾಗಿ ಆಗುತ್ತಿಲ್ಲ. ಇನ್ನು ಒಂದೇ ವರ್ಷದಲ್ಲಿ ಇಬ್ಬರು ಉಪವಿಭಾಗಾಧಿಕಾರಿಗಳು ಕೆಸಲವನ್ನ ಮಾಡದೆ ಇರೋ ಹಿನ್ನಲೆಯಿಂದ ಸೂಕ್ತವಾಗಿ ನ್ಯಾಯವನ್ನ ಕೊಡಲು ಆಗುತ್ತಿಲ್ಲ. ಇದರಿಂದ ನೊಂದ ಮಹಿಳೆಯರು ನಮಗೆ ನ್ಯಾಯ ಕೊಡಿಸಿ ಎಂದು ನ್ಯಾಯಾಲಯಕ್ಕೆ ಕೇಳಿಕೊಂಡಿದ್ದಾರೆ.