Asianet Suvarna News Asianet Suvarna News

ಹುಬ್ಬಳ್ಳಿ-ಧಾರವಾಡ: ಕಿರಿದಾಗಲಿದೆ ಬಿಆರ್‌ಟಿಎಸ್‌ ಕಾರಿಡಾರ್‌?

*  ಸಾಮಾನ್ಯ ರಸ್ತೆಯ ಟ್ರಾಫಿಕ್‌ ಜಾಮ್‌ ತಪ್ಪಿಸಲು ಅಗಲೀಕರಣಕ್ಕೆ ಈ ಕ್ರಮ
*  ಚತುಷ್ಪಥದ ಬದಲು ದ್ವಿಪಥವಾಗುತ್ತಾ ಚಿಗರಿ ಪಥ
*  ಚಿಗರಿ ಮತ್ತು ತುರ್ತು ಪರಿಸ್ಥಿತಿಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ 
 

BRTS Corridor Will Be Narrowed in Hubballi Dharwad grg
Author
Bengaluru, First Published Jun 25, 2022, 6:15 AM IST

ಮಯೂರ ಹೆಗಡೆ

ಹುಬ್ಬಳ್ಳಿ(ಜೂ.25):  ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ ಪಥವನ್ನು ಕಿರಿದಾಗಿಸಿ ಇಕ್ಕೆಲದ ಜನಸಂಚಾರ ರಸ್ತೆ ಅಗಲೀಕರಣ ಮಾಡಲು ಚಿಂತನೆ ನಡೆದಿದೆ. ಇದಕ್ಕಾಗಿ ಸುಮಾರು 70 ಕೋಟಿ ವ್ಯಯವಾಗುವ ಅಂದಾಜಿದ್ದು, ಪಾಲಿಕೆ ನಗರ ಸಾರಿಗೆ ಸೆಸ್‌ ಬಳಸಿಕೊಳ್ಳಲು ಪ್ರಾಥಮಿಕವಾಗಿ ಯೋಜಿಸಲಾಗಿದೆ.

ಬಿಆಎರ್‌ಟಿಎಸ್‌ ಜಾರಿಯಾದ ದಿನದಿಂದ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೆ ಇದೆ. ಕಾರಿಡಾರ್‌ ಉದ್ದಕ್ಕೂ ಮಳೆ ನೀರು ನಿಲ್ಲುವುದು. ಇಕ್ಕೆಲದ ಸಾಮಾನ್ಯ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌, ಮಿಶ್ರಪಥದ ಸಮಸ್ಯೆ ಸೇರಿ ಹಲವು ತೊಡಕುಗಳಿವೆ. ಇವುಗಳನ್ನು ನಿವಾರಿಸಲು ಹಾಗೂ ಜನಸಂಚಾರದ ರಸ್ತೆ ಬಳಕೆ ಮತ್ತಷ್ಟುಪರಿಣಾಮಕಾರಿಯಾಗಿಸುವ ಸಲುವಾಗಿ ಬಿಆರ್‌ಟಿಎಸ್‌ ಸ್ವರೂಪ ಬದಲಾವಣೆ ಮಾಡಲು ಮುಂದಾಗಲಾಗಿದೆ.

Hubballi-Dharwad BRTS: ಕ್ಯಾಶ್‌ಲೆಸ್‌ ಸಾರಿಗೆಗೆ ಮುನ್ನುಡಿ..!

ಪಥ ಕಿರಿದಾಗಿಸುವುದು:

ಪ್ರಾಥಮಿಕ ಮಾಹಿತಿ ಪ್ರಕಾರ ಹು-ಧಾ ನಡುವಿನ ಚಿಗರಿ ಪಥದ 44ಮಿ ಅಗಲವನ್ನು ಕಿರಿದಾಗಿಲು ನಿರ್ಧರಿಸಲಾಗಿದೆ. ಉದ್ದಕ್ಕೂ ಇರುವ ಬ್ಯಾರಿಕೇಡ್‌ ತೆಗೆದು ಹಿಂದಕ್ಕೆ ಅಳವಡಿಸುವುದು. ಕೆಲವೆಡೆ ಫ್ಲೈ ಓವರ್‌ಗಳಲ್ಲಿ ಸೀಮಿತ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವುದು. ಅಲ್ಲದೆ, ಕೆಲವೆಡೆ ಚತುಷ್ಪಥದ ಬದಲಾಗಿ ದ್ವಿಪಥವಾಗಿಸಲು ನಿರ್ಧರಿಸಲಾಗಿದೆ. ಈ ಮೂಲಕ ಹೆಚ್ಚಿನ ಜನ ಸಂಚರಿಸುವ ಇಕ್ಕೆಲದ ರಸ್ತೆಗಳ ಅಗಲೀಕರಣ ಮಾಡಲು ಚರ್ಚೆ ನಡೆದಿದೆ.

70 ಕೋಟಿ:

ಈ ಪಥ ಕಿರಿದಾಗಿಸಿ ಸಾರ್ವಜನಿಕ ಸಂಚಾರ ರಸ್ತೆ ಹಿರಿದಾಗಿಸಲು . 70 ಕೋಟಿ ಅಗತ್ಯವಿರುವುದಾಗಿ ಅಂದಾಜಿಸಲಾಗಿದೆ. ಬಿಆರ್‌ಟಿಎಸ್‌ ಅಧಿಕಾರಿಗಳ ಜತೆಗೆ ಈ ಕುರಿತು ಪಾಲಿಕೆಯು ಚರ್ಚೆ ನಡೆಸಿದೆ. ಆದರೆ, ಅಷ್ಟೊಂದು ಮೊತ್ತ ನೀಡಲು ಸಾಧ್ಯವಿಲ್ಲ ಎಂದು ಬಿಆರ್‌ಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪಾಲಿಕೆಯು ತಾನು ಸಂಗ್ರಹಿಸುವ ಶೇ. 2 ನಗರ ಸಾರಿಗೆ ಸೆಸ್‌ನ್ನು ಇದಕ್ಕೆ ಬಳಸುವ ಬಗ್ಗೆ ಯೋಚಿಸಿದೆ. ಜತೆಗೆ ಇನ್ನಾವುದಾದರೂ ಯೋಜನೆಯ ಬಾಕಿ ಮೊತ್ತವನ್ನು ಇದರಲ್ಲಿ ತೊಡಗಿಸಲು ಚಿಂತಿಸಿದೆ.

‘ಮೇಲ್ನೋಟಕ್ಕೆ ಅಂಕಿ ಅಂಶ ನೋಡುವುದಾದರೆ ಬಿಆರ್‌ಟಿಎಸ್‌ ಪಥದಲ್ಲಿ ಸಂಚರಿಸುವ ಐದು ಪಟ್ಟು ಹೆಚ್ಚು ಜನ ನಿತ್ಯ ಮಿಶ್ರಪಥದಲ್ಲಿ ಅಡ್ಡಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಇದ್ದರೆ ಚಿಗರಿ ಪಥ ಖಾಲಿಯಾಗಿರುತ್ತದೆ. ಹೀಗಾಗಿ ಚತುಷ್ಪಥವನ್ನು ದ್ವಿಪಥವಾಗಿಸಿ ಕಿರಿದಾಗಿಸುವ ಕುರಿತು ಬಿಆರ್‌ಟಿಎಸ್‌ ಜತೆಗೆ ಮಾತುಕತೆ ನಡೆಸಿದ್ದೇವೆ. ಆದರೆ, ಅವರು ತಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜತೆಗೂ ಚರ್ಚಿಸಿದ್ದೇವೆ. ಕೆಲವು ಬಿಆರ್‌ಟಿಎಸ್‌ ಜಂಕ್ಷನ್‌ಗಳಲ್ಲಿ ದಿನಕ್ಕೆ 10 ಮಂದಿಯೂ ಏರುವುದಿಲ್ಲ. ಅವನ್ನು ಬೇರೆಡೆ ನಿರ್ಮಿಸುವ ಬಗ್ಗೆ ಯೋಜಿಸಬೇಕಿದೆ ಎಂದು ಕನ್ನಡಪ್ರಭಕ್ಕೆ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ತಿಳಿಸಿದರು.

ಈಗ ಹೇಗಿದೆ

ಬಿಆರ್‌ಟಿಸ್‌ ಬಸ್‌ಗಳ ಸಂಚಾರಕ್ಕಾಗಿ 22.25 ಕಿಮೀ ಪ್ರತ್ಯೇಕ ಮೀಸಲಾದ ಚತುಷ್ಪಥವಿದೆ. ಪ್ರಸ್ತುತ ಒಟ್ಟಾರೆ ಚಿಗರಿ ಪಥ 44 ಮೀಟರ್‌ ಅಗಲವಿದೆ. ಚಿಗರಿ ಮತ್ತು ತುರ್ತು ಪರಿಸ್ಥಿತಿಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ರಸ್ತೆಯ ಮಧ್ಯದಲ್ಲಿ 4ಮೀ ಅಗಲದಲ್ಲಿ ಸಸಿ ನೆಡಲಾಗಿದೆ. ಎರಡೂ ಬದಿಯಲ್ಲಿ ತಲಾ 7 ಮೀಟರ್‌ ಅಗಲದ ಏಕಮುಖ ಸಂಚಾರಿ ರಸ್ತೆಯಿದೆ. ಚಿಗರಿ ಸಂಚಾರಕ್ಕೆ ತೊಂದರೆ ಆಗದಂತೆ ಬಿಆರ್‌ಟಿಎಸ್‌ ಪಥ ಮತ್ತು ಮಿಶ್ರ ಪಥದ ನಡುವಿನ 0.75 ಮೀ. ಜಾಗೆಯಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ.

Hubballi-Dharwad: BRTS ನಿಲ್ದಾಣಗಳಲ್ಲಿ ಲಿಫ್ಟ್‌ ಇವೆಯಂತೆ ಗೊತ್ತಾ?

ಜನ ಸಂಚರಿಸುವ ರಸ್ತೆ ಹೆಚ್ಚು ವಿಸ್ತಾರವಾಗಿರಬೇಕಾದ ಅಗತ್ಯವಿದೆ. ಹೀಗಾಗಿ ಬ್ಯಾರಿಕೇಡ್‌ ಹಿಂದೆ ಸರಿಸಲು ಯೋಚಿಸಿದ್ದೇವೆ. ಪಾಲಿಕೆ ಸಂಗ್ರಹಿಸುವ ಶೇ. 2 ನಗರ ಸಾರಿಗೆ ಸೆಸ್‌ನ್ನು ಬಳಸುವ ಅಥವಾ ಇತರೆ ಯೋಜನೆ ಮೊತ್ತ ಬಳಸಿ ಹಂತ-ಹಂತವಾಗಿ ಕಾಮಗಾರಿ ನಡೆಸಲು ಯೋಜಿಸಿದ್ದೇವೆ ಅಂತ ಹುಧಾ ಮಹಾನಗರ ಪಾಲಿಕೆಹುಧಾ ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ತಿಳಿಸಿದ್ದಾರೆ.  

ಆಂತರಿಕ ಚರ್ಚೆ ಆಗಿರಬಹುದು. ಬಿಆರ್‌ಟಿಎಸ್‌ ಪಥ ಕಿರಿದಾಗಿಸುವ ಬಗ್ಗೆ ಯಾವುದೆ ಪ್ರಸ್ತಾವ ನಮ್ಮೆದುರು ಬಂದಿಲ್ಲ. ಆ ರೀತಿ ಪ್ರಸ್ತಾವ ಬಂದಲ್ಲಿ ಪ್ರಾಧಿಕಾರದ ಜತೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತ ಹುಧಾ ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌ ಹೇಳಿದ್ದಾರೆ.  
 

Follow Us:
Download App:
  • android
  • ios