ದಕ್ಷಿಣ ಕನ್ನಡದಲ್ಲಿ ಮೇ 15ರ ಬಳಿಕ ಮದುವೆ ಸೇರಿ ಯಾವ ಸಮಾರಂಭಕ್ಕೂ ಇಲ್ಲ ಅವಕಾಶ| ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9 ಗಂಟೆ ವರೆಗೆ ಮಾತ್ರ ಅವಕಾಶ| ಆನ್‌ಲೈನ್‌ ಆಹಾರ ರಾತ್ರಿ 10ರ ತನಕ ಮಾತ್ರ| 

ಮಂಗಳೂರು(ಮೇ.07): ದ.ಕ. ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂ ಮತ್ತಷ್ಟು ಬಿಗಿಗೊಳಿಸಿ ಕಟ್ಟುನಿಟ್ಟಾಗಿ ಇಂದಿನಿಂದ(ಮೇ 7)ರಿಂದಲೇ ಜಾರಿಗೊಳ್ಳಲಿದೆ. ಇದರನ್ವಯ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಮೇ 15ರಿಂದ ಮದುವೆ, ಮಂಜಿ, ನಿಶ್ಚಿತಾರ್ಥ ಸಮಾರಂಭಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ.

Add Asianetnews Kannada as a Preferred SourcegooglePreferred

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಮಾಹಿತಿ ನೀಡಿದರು. ಕೊರೋನಾ ಕರ್ಫ್ಯೂ ಜಾರಿಗೆ ತಂದು 8 ದಿನಗಳಾದರೂ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಾರ್ವಜನಿಕರು ಅನಗತ್ಯವಾಗಿ ಸಣ್ಣಪುಟ್ಟನೆಪ ಹೇಳಿಕೊಂಡು ನಗರದ ತುಂಬೆಲ್ಲಾ ಓಡಾಡುತ್ತಿರುವುದು, ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಇದಕ್ಕೆ ಕಾರಣ. ಕರ್ಫ್ಯೂ ಅನುಷ್ಠಾನ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುವ ಜೊತೆಗೆ ಕೊರೋನಾ ನಿಯಂತ್ರಣ ಮಾರ್ಗಸೂಚಿಗಳು ಪಾಲನೆಯಾಗುವಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರು ದೈನಂದಿನ ಅಗತ್ಯ ವಸ್ತು ಅವಶ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು, ಇಲ್ಲವಾದಲ್ಲಿ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು ಎಂದರು.

"

ಕೊರೋನಾದಿಂದ ಕಾಪಾಡಿಕೊಳ್ಳಲು ಮಂಗಳೂರು ಪೊಲೀಸ್‌ ಠಾಣೆಯಲ್ಲಿ ವಿಭಿನ್ನ ಕ್ರಮ!

ಆನ್‌ಲೈನ್‌ ಆಹಾರ ರಾತ್ರಿ 10ರ ತನಕ ಮಾತ್ರ: 

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಸಾಮಾಜಿಕ ಒಳಿತಿಗಾಗಿ ಸರ್ಕಾರ ಕೊರೋನಾ ಕರ್ಫ್ಯೂ ಜಾರಿಗೆ ತಂದಿದೆ. ಜನರು ಸಹಕರಿಸಬೇಕು, ಜನರಿಗೆ, ವ್ಯಾಪಾರಸ್ಥರಿಗೆ ಹೆಚ್ಚಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವುದರೊಂದಿಗೆ ಲಾಕ್‌ಡೌನ್‌ ಜಾರಿ ಮಾಡಬೇಕು ಎಂದರು. ಸ್ವಿಗ್ಗಿ, ಝೊಮೇಟೋ ಮುಂತಾದ ಆನ್‌ಲೈನ್‌ ಆಹಾರ ಪೂರೈಕೆದಾರರು ರಾತ್ರಿ 10 ಗಂಟೆಯೊಳಗೆ ಕಾರ್ಯನಿರ್ವಹಿಸಿ ನಿಲ್ಲಿಸಬೇಕು. ಅವರು 11 ಗಂಟೆಯೊಳಗೆ ಮನೆ ಸೇರಬೇಕು ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona