ನಂದಿನಿ ಹಾಲು, ಉತ್ಪನ್ನದ ಬಗ್ಗೆ ಅಪಪ್ರಚಾರ : ರೈತರಿಗೆ ಮಾರಕ
- ರೈತರ ಬದುಕಿನ ಹಾಸುಹೊಕ್ಕಾಗಿರುವ ನಂದಿನಿ
- ನಂದಿನಿ ಹಾಲಿಗೆ ಕೆಟ್ಟ ಹೆಸರು ತರುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ
- ಲಕ್ಷಾಂತರ ರೈತರ ಬದುಕು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ
ಮಂಡ್ಯ (ಜು.16): ರೈತರ ಬದುಕಿನ ಹಾಸುಹೊಕ್ಕಾಗಿರುವ ನಂದಿನಿ ಹಾಲಿಗೆ ಕೆಟ್ಟ ಹೆಸರು ತರುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರಿಂದ ಲಕ್ಷಾಂತರ ರೈತರ ಬದುಕು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದು ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬಿ ಆರ್ ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.
ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸರ್ಕಾರ ನೇಮಕ ಮಾಡಿರುವ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಅದನ್ನು ಬಿಟ್ಟು ರೈತರ ಬದುಕಿಗೆ ಸನಿಹದಲ್ಲಿರುವ ನಂದಿನಿ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳಿಗೆ ಕೆಟ್ಟ ಹೆಸರು ತರಬಾರದು ಎಂದು ಗುರುವಾರ ಮನವಿ ಮಾಡಿದರು.
'ಮನ್ಮುಲ್ ಹಗರಣ ಸಂಬಂಧ ಯಾವ ತನಿಖೆಯಾದರೂ ಮಾಡಿಕೊಳ್ಳಲಿ'
ಮಾನನಷ್ಟ ಮೊಕದ್ದಮೆ : ಹೈನುಗಾರಿಕೆಯಲ್ಲಿ ತೊಡಗದ ಮಧುಚಂದನ್ ಅವರು ನಂದಿನಿ ಹಾಲು ಒಕ್ಕೂಟದ ಬಗ್ಗೆ ಇಲ್ಲ ಸಲ್ಲದ ಅರೋಪ ಮಾಡುತ್ತಿದ್ದಾರೆ. ಅಧ್ಯಕ್ಷರು ನಿರ್ದೇಶಕರ ಬಗ್ಗೆ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಅವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಸುಳ್ಳು ಹೊರಾಟಗಾರರಿಂದ ರೈತರನ್ನು ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿದೆ. ಇದರಿಂದ ಒಕ್ಕುಟದ ಹಿತಕ್ಕೆ ದಕ್ಕೆಯುಂಟಾಗುತ್ತದೆ. ಮಂಡ್ಯ ಹಾಲಿಗೆ ಬೆಂಗಳೂರಿನಲ್ಲಿ ಮಾರುಟ್ಟೆ ಕಲ್ಪಿಸಲಾಗುತ್ತಿದ್ದು, ನಂದಿನಿ ಹಾಲು ಉತ್ಪನ್ನಗಳ ವಿರುದ್ಧದ ಅಪಪ್ರಚಾರದಿಂದ ಮಾರುಕಟ್ಟೆ ಮೆಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದರು.