ಕೋಟೆನಾಡಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಮಕ್ಕಳನ್ನ ಮನೆಯಿಂದ ಹೊರ ಕಳಿಸೋದಕ್ಕೆ ಪೋಷಕರು ಆತಂಕ ಪಡುವ ವಾತಾವರಣ ನಿರ್ಮಾಣವಾಗಿದೆ. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.17): ಕೋಟೆನಾಡಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಮಕ್ಕಳನ್ನ ಮನೆಯಿಂದ ಹೊರ ಕಳಿಸೋದಕ್ಕೆ ಪೋಷಕರು ಆತಂಕ ಪಡುವ ವಾತಾವರಣ ನಿರ್ಮಾಣವಾಗಿದೆ. 

ಬೀದಿ ನಾಯಿಗಳಿಂದ ದಾಳಿಗೆ ಒಳಗಾದ ಮಕ್ಕಳಿಗೆ ಗಂಭೀರ ಗಾಯಗಳು ಆಗೋದು ಸಾಮಾನ್ಯ. ಆದ್ರೆ ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ 10 ವರ್ಷದ ಬಾಲಕ ತರುಣ್ ಸಾವನ್ನಪ್ಪಿರೋ ಘಟನೆ ನಡೆದಿದೆ.

ಕಾಫಿನಾಡ ದತ್ತಜಯಂತಿ ಮಾಲಾಧಾರಣೆಗೆ ಅಧಿಕೃತ ಚಾಲನೆ, ಈ ವರ್ಷ ಭಾರೀ ಸಂಖ್ಯೆಯಲ್ಲಿ ಭಕ್ತರು

ಕಳೆದ 15 ದಿನಗಳ ಹಿಂದಷ್ಟೇ ಗ್ರಾಮದಲ್ಲಿ ಮೃತ ಬಾಲಕ ಸೇರಿ ಸುಮಾರು ನಾಲ್ಕೈದು ಮಕ್ಕಳಿಗೆ ಬೀದಿ ನಾಯಿಯೊಂದು ದಾಳಿ ಮಾಡಿದೆ. ಆ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ತರುಣ್ ನನ್ನು ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ದಿನದಿಂದ ದಿನಕ್ಕೆ ಆತನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ, ಹಾಗೂ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ನಾಯಿ ದಾಳಿಯಿಂದ ವಿಷ ಮೆದುಳಿಗೆ ಏರಿದೆ ಎಂದು ಗಾಬರಿ ಪಡಿಸಿದ್ದರು. 

ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೂ ನನ್ನ ಮಗನನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ. ಎದೆ ಎತ್ತರಕ್ಕೆ ಬೆಳೆದು ನಿಂತಿರೋ ಮಗನನ್ನು ಕಳೆದುಕೊಂಡು ತುಂಬಾ ನೋವಾಗ್ತಿದೆ. ನಮಗೆ ಅಗಿರುವ ಅನ್ಯಾಯ ಬೇರೆ ಯಾವ ತಂದೆ ತಾಯಿಗೂ ಆಗಬಾರದು ಎಂದು ಪೋಷಕರು ಕಣ್ಣೀರು ಹಾಕಿದರು.

ರಾಷ್ಟ್ರೀಯ ಹೆದ್ದಾರಿ 275ರ ವಿಸ್ತರಣೆಗೆ ಮನೆ, ಭೂಮಿ ಕಳೆದುಕೊಳ್ಳುತ್ತಿರೋ ನೂರಾರು ರೈತರು, ಪರಿಹಾರ ಸಿಗದೆ ಕಣ್ಣೀರು

ಇನ್ನೂ ಚಿತ್ರದುರ್ಗ ನಗರದಲ್ಲಿ ಕಳೆದ ಒಂದು ತಿಂಗಳ ಹಿಂದಷ್ಟೇ ಬೀದಿ ನಾಯಿ ಹಾವಳಿಯಿಂದ 5 ವರ್ಷದ ಬಾಲಕ ನರಳಾಡಿದ್ದು ನಮ್ಮ ಕಣ್ಮುಂದೆಯೇ ಇದೆ. ಆ ಘಟನೆ ಮಾಸುವ ಮುನ್ನವೇ, ನಗರದ ಕೂದಲೆಳೆ‌ ಅಂತರದಲ್ಲಿ ಈ ಘಟನೆ ನಡೆದಿರೋದು ದುರಂತ. ಬೀದಿ ನಾಯಿಗಳ‌ ಹಾವಳಿ ದಿನೇ ದಿನೇ‌ ಹೆಚ್ಚಾಗ್ತಿರೋದಕ್ಕೆ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗೆ ಆಟ ವಾಡಲು ಕಳಿಸೋದಕ್ಕೂ ಆತಂಕ ಪಡುವ ವಾತಾವರಣ ಸೃಷ್ಟಿಯಾಗಿದೆ. ಈ ಬೀದಿ ನಾಯಿಗಳ ಹಾವಳಿ ಕುರಿತು ಅಧಿಕಾರಿಗಳ ಗಮನಕ್ಕೆ ಎಷ್ಟೇ ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಈಗ ಗ್ರಾಮದಲ್ಲಿ ನಾಯಿ ಕಡಿತದಿಂದ ಮಗು ಸಾವನ್ನಪ್ಪಿರೋದು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಇನ್ನಾದ್ರು ಸಂಬಂಧಿಸಿದ ಅಧಿಕಾರಿಗಳು ಬೀದಿ ನಾಯಿಗಳನ್ನ ಹಿಡಿದು ಮಕ್ಕಳನ್ನು ರಕ್ಷಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಇತ್ತೀಚಿನ‌ ದಿನಗಳಲ್ಲಿ ಬೀದಿ ನಾಯಿಗಳು ಮಕ್ಕಳ‌ ಮೇಲೆ ದಾಳಿ ಮಾಡ್ತಿರೋದು ನಿಜಕ್ಕೂ ಪೋಷಕರಲ್ಲಿ ಆತಂಕ ತಂದೊಡ್ಡಿದೆ. ಸದ್ಯ ಬಾಲಕ ಬಲಿಯಾಗಿರೋ ಘಟನೆ ಕಣ್ಮುಂದೆ ಇದೆ. ಅಧಿಕಾರಿಗಳು ಇನ್ನಾದ್ರು ಎಚ್ಚೆತ್ತುಕೊಂಡು ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕಿದೆ.