ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗು ಕಲಾವಿದ, ಖ್ಯಾತ ಶಿಲ್ಪಿ ವೆಂಕಣ್ಣ ಚಿತ್ರಗಾರ ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಮೃತರಿಗೆ 76 ವರ್ಷಗಳಾಗಿದ್ದವು.
ಗಂಗಾವತಿ (ಮೇ.08): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗು ಕಲಾವಿದ, ಖ್ಯಾತ ಶಿಲ್ಪಿ ವೆಂಕಣ್ಣ ಚಿತ್ರಗಾರ ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಮೃತರಿಗೆ 76 ವರ್ಷಗಳಾಗಿದ್ದವು. ಮೂವರು ಪುತ್ರಿಯರು, ಇಬ್ಬರು ಪುತ್ರರರು ಸೇರಿದಂತೆ ಅಪಾರ ಬಳಗ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಪ್ರಸಿದ್ಧ ದೇವಸ್ಥಾನಗಳ ರಥ( ತೇರುಗಳ)ಗಳನ್ನು ನಿರ್ಮಾಣ ಮಾಡಿದ ಕೀರ್ತಿ ವೆಂಕಣ್ಣ ಅವರಿಗೆ ಸಲ್ಲುತ್ತದೆ.
ಕಟ್ಟಿಗೆಯ ಕೆಲಸದಲ್ಲಿ ನೈಪುಣ್ಯತೆ, ಗಣೇಶ ಮೂರ್ತಿಗಳ ತಯಾರಿ. ಗೊಂಬೆಗಳ ತಯಾರಿಯಲ್ಲಿ ಚಾಪು ಮೂಡಿಸಿದ್ದ ವೆಂಕಣ್ಣ ಅವರಿಗೆ 2023-24 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ಇವರ ಅಂತ್ಯಕ್ರಿಯೆ ಮೇ.9 ಶನಿವಾರ ಬೆಳಿಗ್ಗೆ 10 ಗಂಟೆಗೆ ಗಂಗಾವತಿಯಲ್ಲಿ ನಡೆಯಲಿದೆ.
ಹೆಮ್ಮೆಯ ಶಿಲ್ಪಿ
ಗಂಗಾವತಿಯ ವೆಂಕಣ್ಣ ಚಿತ್ರಗಾರ ಅವರು ಸುಮಾರು ಐವತ್ತು ವರ್ಷಗಳಿಂದ ರಥ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 100ಕ್ಕೂ ಅಧಿಕ ರಥಗಳು ಇವರ ಕೈಯ್ಯಲ್ಲಿ ಅರಳಿವೆ. ಇವರು ನಿರ್ಮಿಸಿರುವ ರಥಗಳು ವಿಜಯನಗರ ಶೈಲಿಯ ವಾಸ್ತುಪ್ರಕಾರ ಹೊಂದಿದ್ದು, ಕೇವಲ ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗದೆ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಕಾಣಬಹುದು.
ಪರಿಸರಸ್ನೇಹಿ ಸುಂದರವಾದ ಮಣ್ಣಿನ ಮೂರ್ತಿಗಳನ್ನೂ ಸಹ ಮಾಡುವಲ್ಲಿ ಪ್ರಸಿದ್ಧಿ ಹೊಂದಿರುವ ಇವರು ಅನೇಕ ಗ್ರಾಮದೇವತೆಗಳು, ಪಲ್ಲಕ್ಕಿ, ಪೂಜಾ ಮಂಟಪ, ದೇವರ ತೊಟ್ಟಿಲು, ಛತ್ರಿ, ಸಿಂಹಾಸನ ಇತ್ಯಾದಿ ಕರಕುಶಲ ಕೆಲಸಗಳನ್ನು ಮಾಡುತ್ತಾರೆ. ಅನೇಕ ಸಂಘ ಸಂಸ್ಥೆಗಳು ಇವರ ಕಲಾನೈಪುಣ್ಯತೆಯನ್ನು ಗುರುತಿಸಿ, ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿದೆ. ‘ರಥರಚನ ಕೋವಿದ’ ಹಾಗೂ ‘ಕದಂಬ’ಪ್ರಶಸ್ತಿ ಇವರದ್ದಾಗಿವೆ.


