* ಕುಸಿದು ಬಿದ್ದ ವೇದಿಕೆ, ಬಿಜೆಪಿ ಶಾಸಕ ಪ್ರಾಣಾಪಾಯದಿಂದ‌ ಪಾರು* ತುಮಕೂರು ನಗರದ 30ನೇ ವಾರ್ಡ್ ನ ಗಾರೆ ನರಸಯ್ಯನ ಕಟ್ಟೆಯಲ್ಲಿ ಘಟನೆ* ರಭಸವಾಗಿ ಬೀಸಿದ ಬಿರುಗಾಳಿಗೆ ಕುಸಿದು ಬಿದ್ದ ವೇದಿಕೆ

ತುಮಕೂರು, (ಮಾ.12): ರಭಸವಾಗಿ ಬೀಸಿದ ಬಿರುಗಾಳಿಗೆ ವೇದಿಕೆ ದಿಢೀರ್ ಕುಸಿದು ಬಿದ್ದಿದ್ದು, ಜೆಪಿ ಶಾಸಕ ಪ್ರಾಣಾಪಾಯದಿಂದ‌ ಪಾರಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ತುಮಕೂರು ನಗರದ 30ನೇ ವಾರ್ಡ್​ನ ಗಾರೆನರಸಯ್ಯನ ಕಟ್ಟೆಯಲ್ಲಿ ಶನಿವಾರ ನೂರಾರು ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗಲೇ ಶಾಮಿಯಾನ ಕುಸಿದಿದ್ದು, ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿ ಐವರು ಗಾಯಗೊಂಡಿದ್ದಾರೆ. 

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಪುತ್ರಿ ಶ್ರದ್ಧಾ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ ಸೇರಿದಂತೆ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

ಗಾರೆನರಸಯ್ಯನ ಕಟ್ಟೆ(ಕೆರೆ)ಯನ್ನು ಧರ್ಮಸ್ಥಳ ಗ್ರಾಮೀಣಾಭೀವೃದ್ಧಿ ಸಂಘದಿಂದ ಅಭಿವೃದ್ಧಿ ಪಡಿಸಲಾಗಿತ್ತು. ಈ ಕೆರೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಹಿನ್ನೆಲೆ ಇಂದು(ಶನಿವಾರ) ಕಾರ್ಯಕ್ರಮ ಆಯೋಜಿಸಲಾಗಿತ್ತು.‌

ವೇದಿಕೆಯಲ್ಲಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ, ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್, ಮೇಯರ್ ಕೃಷ್ಣಪ್ಪ, ಸ್ಥಳೀಯ ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ವೇದಿಕೆ ಮುಂಭಾಗ ನೂರಾರು ಜನ ಆಸೀನರಾಗಿದ್ದರು. ಈ ವೇಳೆ ರಭಸವಾಗಿ ಬೀಸಿದ ಬಿರುಗಾಳಿಗೆ ಶಾಮಿಯಾನ ಕುಸಿದಿದೆ. ಭಯದಿಂದ ಜನ ದಿಕ್ಕಾಪಾಲಾಗಿದ್ದಾರೆ.

ಕಾರುಗಳು ಪರಸ್ಪರ ಡಿಕ್ಕಿ, ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಸಾವು..
ತುಮಕೂರು: ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರುಗಳು ಜಖಂಗೊಂಡಿದ್ದರೆ, ಒಂದು ಕಾರಿನಲ್ಲಿದ್ದ ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ತುಮಕೂರು ಹೊರವಲಯದ ನಾಮದ ಚಿಲುಮೆ ರಸ್ತೆಯ ಸಿದ್ದಗಂಗಾ ಕ್ರಾಸ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.

ಆಮ್ನಿ ಹಾಗೂ ಇನ್ನೊಂದು ಕಾರುಗಳ ಮಧ್ಯೆ ಡಿಕ್ಕಿಯಾಗಿದ್ದು, ಆಮ್ನಿಯಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತಪಟ್ಟವರು ಇರಕಸಂದ್ರ ಕಾಲನಿಯ ದಂಪತಿ.

ಡಿಕ್ಕಿ ಹೊಡೆದ ಇನ್ನೊಂದು ಕಾರಿನಲ್ಲಿದ್ದ ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಅವರಿಗೆ ಗಂಭೀರವಾದ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.