ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಅನಾಹುತ ಸೃಷ್ಟಿಸುವ ಕಾನೂನುಗಳಲ್ಲ| ಪೌರತ್ವ ಕಾಯ್ದೆ ರೀತಿಯ ಕಾನೂನುಗಳು ಎಲ್ಲ ದೇಶಗಳಲ್ಲೂ ಇವೆ| ಕಾಯ್ದೆ ವಿರೋಧದಲ್ಲಿ ಕಾಂಗ್ರೆಸ್, ಕಮ್ಯೂನಿಸ್ಟರು ಮೋದಿ ವಿರೋಧಿಗಳಿದ್ದಾರೆ| ಸಿಎಎ ಪೌರತ್ವ ಕೊಡುವಂಥದ್ದು, ಕಿತ್ತುಕೊಳ್ಳುವಂಥದ್ದಲ್ಲ| 

ಯಾದಗಿರಿ(ಫೆ.29): ಭಾರತಕ್ಕೆ, ಪ್ರಧಾನಿ ಮೋದಿಯವರಿಗೆ ಕೆಟ್ಟ ಹೆಸರು ತರಲು ದೆಹಲಿ ಗಲಭೆ ನಡೆದಿದೆ. ಈ ಗಲಭೆಗೆ ಕಾಂಗ್ರೆಸ್ ನಾಯಕರೇ ನೇರ ಹೊಣೆಯಾಗಿದ್ದಾರೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬಂದಾಗಲೇ ಗಲಾಟೆ ನಡೆಸಲಾಗಿತ್ತು. ಕಾಯ್ದೆ ಜಾರಿಯಾಗಿ‌ ತಿಂಗಳು ಕಳೆದಿದ್ದರೂ ಗಲಾಟೆ ನಡೆದಿದ್ದಿಲ್ಲ. ಯಾರದೋ ಹೇಳಿಕೆ ವಿರೋಧಿಸಿ ನಡೆದ ಗಲಭೆ ಇದಲ್ಲ. ವ್ಯವಸ್ಥಿತವಾಗಿ ಗಲಾಟೆಯನ್ನ ಮಾಡಿಸಲಾಗಿದೆ. ದೆಹಲಿಯಂಥ ನಗರದಲ್ಲಿ ಕಲ್ಲು, ಪೆಟ್ರೋಲ್ ಬಾಂಬ್ ಸುಲಭವಾಗಿ ಸಿಗಲ್ಲ. ವ್ಯವಸ್ಥಿತವಾಗಿ ಸಂಗ್ರಹಿಸಿ ಗಲಭೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಅನಾಹುತ ಸೃಷ್ಟಿಸುವ ಕಾನೂನುಗಳಲ್ಲ, ಪೌರತ್ವ ಕಾಯ್ದೆ ರೀತಿಯ ಕಾನೂನುಗಳು ಎಲ್ಲ ದೇಶಗಳಲ್ಲೂ ಇವೆ. ಕಾಯ್ದೆ ವಿರೋಧದಲ್ಲಿ ಕಾಂಗ್ರೆಸ್, ಕಮ್ಯೂನಿಸ್ಟರು ಮೋದಿ ವಿರೋಧಿಗಳಿದ್ದಾರೆ. ಸಿಎಎ ಪೌರತ್ವ ಕೊಡುವಂಥದ್ದು, ಕಿತ್ತುಕೊಳ್ಳುವಂಥದ್ದಲ್ಲ. ಈ ವಿಚಾರವನ್ನ ಪ್ರಧಾನಿ, ಕೇಂದ್ರ ಗೃಹ ಸಚಿವರು ಸಾವಿರ ಬಾರಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಮುಸ್ಲಿಮರನ್ನ ಹಾಗೂ ದಲಿತರನ್ನ ಬಲಿಕೊಟ್ಟು ಚಳವಳಿ ಮಾಡಲಾಗುತ್ತಿದೆ. ಇಂದಿರಾ ಗಾಂಧಿಯವರ ಸಮಯದಲ್ಲೇ ಪಾಕಿಸ್ತಾನದಿಂದ ಬಂದವರಿಗೆ ಪೌರತ್ವ ನೀಡಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಪೌರತ್ವ ಕಾಯ್ದೆಯನ್ನ ಯಾಕೆ ವಿರೋಧಿಸುತ್ತಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಸಿಎಎ ಕಾರಣವಾಗಿ ದೆಹಲಿಯಲ್ಲಿ ಬಿಜೆಪಿ ಸೋತಿಲ್ಲ. ಕೇಜ್ರಿವಾಲ್ ಜನಪರ ಕಾರ್ಯದಿಂದ ಮಧ್ಯಮ ವರ್ಗ ಅವರನ್ನ ಕೈಹಿಡಿದಿದೆ ಎಂದು ಹೇಳಿದ್ದಾರೆ.

ದೊರೆಸ್ವಾಮಿ ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಅವರು ವಿಚಾರ ಮಾಡಬೇಕು. ದೇಶ ವಿರೋಧಿ ಹೇಳಿಕೆ ನೀಡುವವರ ಪರವಾಗಿರುವುದು ಎಷ್ಟರ ಮಟ್ಟಿಗೆ ಸರ್..? ದೊರೆಸ್ವಾಮಿಯವರ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದನ್ನ ಒಪ್ಪುತ್ತೇವೆ, ಆದರೆ ನಂತರ ಅವರು ತಪ್ಪು ದಾರಿ ಹಿಡಿದಿದ್ದಾರೆ. ದೊರೆಸ್ವಾಮಿಯವರ ಜೊತೆಗೆ ನಾನೂ ಹೋರಾಟ ಮಾಡಿದ್ದೇನೆ. ದೊರೆಸ್ವಾಮಿ ಪಾಕ್ ಏಜೆಂಟ್ ಎಂದು ಯತ್ನಾಳ್ ಹೇಳಿಕೆ ಸರಿಯಲ್ಲ ಎಂದಿದ್ದಾರೆ.