ಕೊಲಂಬೋದಿಂದ  ಆಗಮಿಸಿದ 30 ಪ್ರಯಾಣಿಕರನ್ನು ಶುಕ್ರವಾರ ಅಂತಾರಾಷ್ಟ್ರೀಯ ಅರೈವಲ್ಸ್‌ ಬಸ್‌ ಗೇಟ್‌ ಬದಲು ದೇಶೀಯ ಅರೈವಲ್ಸ್‌ ಬಸ್‌ ಗೇಟ್‌ ಬಳಿ ತಪ್ಪಾಗಿ ಇಳಿಸಲಾಗಿದೆ ಎಂದು ಬಿಐಎಎಲ್ (ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್) ವಕ್ತಾರರು ತಿಳಿಸಿದ್ದಾರೆ.

ಬೆಂಗಳೂರು (ಮಾರ್ಚ್‌ 18, 2023): ಇತ್ತೀಚೆಗೆ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಭಾರಿ ಎಡವಟ್ಟುಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ. ಅಂತಾರಾಷ್ಟ್ರೀಯ ವಿಮಾನ ಹಾಗೂ ದೇಶೀಯ ವಿಮಾನಯಾನಗಳಲ್ಲಿ ಸಹ ಈ ರೀತಿ ಘಟನೆಗಳು ನಡೆಯುತ್ತಿವೆ. ಇದೀಗ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವೊಂದು ಉಂಟಾಗಿದೆ. ದೇಶೀಯ ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲಿ ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇರುವಷ್ಟ ಭದ್ರತಾ ತಪಾಸಣೆ ಇರುವುದಿಲ್ಲ. ಆದರೆ, ವಿದೇಶದಿಂದ ಬರುವವರಿಗೆ ಹೆಚ್ಚು ಭದ್ರತಾ ತಪಾಸಣೆ ನಡೆಸಲಾಗುತ್ತಿದೆ.

ಆದರೆ, ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಮಹತ್ವದ ಭದ್ರತಾ ಲೋಪದಲ್ಲಿ, ಶ್ರೀಲಂಕಾ ರಾಜಧಾನಿ ಕೊಲಂಬೋದಿಂದ ಆಗಮಿಸಿದ 30 ಪ್ರಯಾಣಿಕರನ್ನು ಶುಕ್ರವಾರ ಅಂತಾರಾಷ್ಟ್ರೀಯ ಅರೈವಲ್ಸ್‌ ಬಸ್‌ ಗೇಟ್‌ ಬದಲು ದೇಶೀಯ ಅರೈವಲ್ಸ್‌ ಬಸ್‌ ಗೇಟ್‌ ಬಳಿ ತಪ್ಪಾಗಿ ಇಳಿಸಲಾಗಿದೆ ಎಂದು ಬಿಐಎಎಲ್ (ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್) ವಕ್ತಾರರು ತಿಳಿಸಿದ್ದಾರೆ.

ಇದನ್ನು ಓದಿ: ಮುಂಬೈಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯಿಂದ ಧೂಮಪಾನ: ಸಿಕ್ಕಿಬಿದ್ದ ಬಳಿಕ ಹುಚ್ಚು ಹುಚ್ಚಾಗಿ ಆಡ್ದ..!

"ಮಾರ್ಚ್ 17 ರಂದು, ಶ್ರೀಲಂಕಾ ಏರ್‌ಲೈನ್ಸ್ ಯುಎಲ್ 173 ರಲ್ಲಿ ಪ್ರಯಾಣಿಸಿದ 30 ಪ್ರಯಾಣಿಕರನ್ನು ಅಂತಾರಾಷ್ಟ್ರೀಯ ಆಗಮನದ ಬಸ್ ಗೇಟ್ ಬದಲಿಗೆ ಬಿಎಲ್‌ಆರ್ ವಿಮಾನ ನಿಲ್ದಾಣದ ದೇಶೀಯ ಆಗಮನದ ಬಸ್ ಗೇಟ್‌ನಲ್ಲಿ ತಪ್ಪಾಗಿ ಇಳಿಸಲಾಗಿದೆ. ಈ ಪ್ರಯಾಣಿಕರು ದೇಶೀಯ ಬ್ಯಾಗೇಜ್ ಕ್ಲೈಮ್ ಪ್ರದೇಶವನ್ನು ಪ್ರವೇಶಿಸಿದ್ದಾರೆ" ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.

ಬಳಿಕ, ಈ ಘಟನೆ ಬೆಳಕಿಗೆ ಬಂದ ಬಳಿಕ ಟರ್ಮಿನಲ್ ಕಾರ್ಯಾಚರಣೆ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಈ ತಪ್ಪಿನ ಬಗ್ಗೆ ಸಿಐಎಸ್‌ಎಫ್ ಮತ್ತು ಇಮ್ಮಿಗ್ರೇಷನ್‌ಗೆ 
ಎಚ್ಚರಿಕೆ ನೀಡಲಾಯಿತು. "CISF (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಮತ್ತು ಇಮಿಗ್ರೇಷನ್ ಜೊತೆಗೆ ಟರ್ಮಿನಲ್ ಕಾರ್ಯಾಚರಣೆ ತಂಡವನ್ನು ಎಚ್ಚರಿಸಲಾಯಿತು ಮತ್ತು ಪ್ರಯಾಣಿಕರನ್ನು ತಕ್ಷಣವೇ ಇಮ್ಮಿಗ್ರೇಷನ್‌ ಪರೀಕ್ಷೆ ನಡೆಸಲು ಅಂತಾರಾಷ್ಟ್ರೀಯ ಅರೈವಲ್ಸ್‌ಗೆ ಸ್ಥಳಾಂತರಿಸಲಾಯಿತು. ನಂತರ ಪ್ರಯಾಣಿಕರು ಅಂತಾರಾಷ್ಟ್ರೀಯ ಬ್ಯಾಗೇಜ್ ಕ್ಲೈಮ್ ಪ್ರದೇಶಕ್ಕೆ ತೆರಳಿದರು" ಎಂದು ಬಿಐಎಎಲ್ ವಕ್ತಾರರು ಹೇಳಿದರು.

ಇದನ್ನೂ ಓದಿ: ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ಭಾರತೀಯ ವಿದ್ಯಾರ್ಥಿಗೆ ಅಮೆರಿಕನ್‌ ಏರ್‌ಲೈನ್ಸ್ ನಿಷೇಧ

ಇನ್ನು, ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಗೆ ಮಾನವ ದೋಷ ಕಾರಣವಾಗಿದ್ದು, ಅದು ಅಂತಿಮವಾಗಿ ಗೊಂದಲಕ್ಕೆ ಕಾರಣವಾಯಿತು ಎಂದು ಬಿಐಎಎಲ್ ಹೇಳಿದೆ. ಅಲ್ಲದೆ, ಇದನ್ನು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಹೇಳಿಕೊಂಡಿದ್ದಾರೆ. 

ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ, ದೇಶೀಯ ವಿಮಾನಯಾನ ಗೋ ಫಸ್ಟ್ ವಿಮಾನ ತನ್ನ ಬೆಂಗಳೂರು-ದೆಹಲಿ ಸೇವೆಯಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು. ಹಲವು ವಿಮಾನ ಪ್ರಯಾಣಿಕರು ಶಟಲ್‌ನಲ್ಲಿ ಕಾಯುತ್ತಿದ್ದ ವೇಳೆ, ಅವರು ವಿಮಾನ ಹತ್ತುವ ಮುನ್ನವೇ ಅವರಿಲ್ಲದೆ ಟೇಕ್‌ ಆಫ್‌ ಆಗಿತ್ತ. ಏರ್‌ಲೈನ್ಸ್ ತನ್ನ ತಪ್ಪಿನ ಅರಿವಾದ ನಂತರ ಮರೆತುಹೋದ ಪ್ರಯಾಣಿಕರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿತ್ತು. 

ಇದನ್ನೂ ಓದಿ: ಗುಜರಾತ್‌ನಲ್ಲಿ ದೇಶಿ ವಿಮಾನ ಘಟಕ..? ಎಂಬ್ರೇಯರ್‌, ಸುಖೋಯ್‌ ವಿಮಾನ ಕಂಪನಿಗಳ ಜತೆ ಮಾತುಕತೆ