Asianet Suvarna News Asianet Suvarna News

ಲಾಕ್‌ಡೌನ್‌ ಸಡಿಲ: ಮೇ. 17,18 ರಂದು ಉತ್ತರ ಪ್ರದೇಶಕ್ಕೆ ಸ್ಪೆಷಲ್‌ ರೈಲು

ತಮ್ಮೂರಿನತ್ತ ತೆರಳಲು ಕಾರ್ಮಿಕರ ಕಾತರ| ಬಿಹಾರ-ಉತ್ತರ ಪ್ರದೇಶಕ್ಕೆ ತೆರಳುವ ಶ್ರಮಿಕ್‌ ಸ್ಪೆಷಲ್‌ ಟ್ರೈನ್‌| ಕೊರೋನಾದಿಂದ ಸತ್ತರೂ ನಮ್ಮೂರಲ್ಲಿಯೇ ಸಾಯುತ್ತೇವೆ|ಗೋಕುಲ ರಸ್ತೆಯಲ್ಲಿ ಬಸ್‌ ನಿಲ್ದಾಣದಲ್ಲಿ ರೈಲ್ವೆ ಟಿಕೆಟ್‌ ಕೊಡುವ ವ್ಯವಸ್ಥೆ| ಟಿಕೆಟ್‌ ಪಡೆಯಲು ಸರತಿ ಸಾಲಿನಲ್ಲಿ ನಿಂತ ಕಾರ್ಮಿಕರು|

Special train to Uttar Pradesh on May 17th from Hubballi
Author
Bengaluru, First Published May 16, 2020, 7:11 AM IST

ಹುಬ್ಬಳ್ಳಿ(ಮೇ.16): ‘ಹಮ್‌ ಲೋಗೋ ಕೊರೋನಾ ಸೆ ಇದರ್‌ ಹೀ ಮರಗಯೇ ತೋ ಹಮಾರಾ ಡೆಡ್‌ ಬಾಡಿ ಬಿ ಹಮಾರೇ ಗಾಂವ್‌ ಕೋ ಏಯ್‌ ಲೋಗ್‌ ನಹೀ ಬೇಜತೇ ಹೈ.. ಇದರ್‌ ಹೀ ದಫನ್‌ ಕರತೆ ಹೈ. ಇಸಲಿಯೇ ಹಮ್‌ ಲೋಗೋ ಅಪನೆ ಗಾಂವ್‌ ಜಾರಹೇ ಹೈ.. ಅಗರ್‌ ಮರೆಂಗೇ ತೋ ಉದರ್‌ ಹೀ ಮರೆಂಗೇ..’ ( ನಮಗೆ ಕೊರೋನಾ ಬಂದು ಸತ್ತರೆ ನಮ್ಮ ಹೆಣ ಕೂಡ ನಮ್ಮೂರಿಗೆ ಕಳಸಲ್ಲ. ಇಲ್ಲೇ ದಫನ್‌ ಮಾಡ್ತಾರೆ. ಅದಕ್ಕ ಸತ್ತರ ನಮ್ಮೂರಾಗ ಸಾಯೋಣ ಅಂತ ನಮ್ಮೂರಿಗೆ ಹೊಂಟೇವಿ)

ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಮೇ 17 ಹಾಗೂ 18ರಂದು ಶ್ರಮಿಕ್‌ ಸ್ಪೆಷಲ್‌ ಟ್ರೈನ್‌ ಸಂಚರಿಸಲಿದೆ. ಅದಕ್ಕೆ ಟಿಕೆಟ್‌ ಬುಕ್‌ ಮಾಡಲು ಬಂದಿದ್ದ ಬಿಹಾರ ಮೂಲದ ಇಮ್ರಾನ್‌ ಅವರನ್ನು ‘ಕನ್ನಡಪ್ರಭ’ ಮಾತಿಗೆಳೆದಾಗ ಮೇಲಿನಂತೆ ಹೇಳಿದ.

ಬೆಂಗಳೂರು, ತುಮಕೂರು ಆಯ್ತು, ಹುಬ್ಬಳ್ಳಿಯಲ್ಲೂ ಯುವಕರು ಪುಂಡಾಟ..!

ಇಲ್ಲಿನ ಗೋಕುಲ ರಸ್ತೆಯಲ್ಲಿ ಬಸ್‌ ನಿಲ್ದಾಣದಲ್ಲಿ ರೈಲ್ವೆ ಟಿಕೆಟ್‌ ಕೊಡುವ ವ್ಯವಸ್ಥೆ ಮಾಡಿದೆ. ಅಲ್ಲಿ ಟಿಕೆಟ್‌ ಪಡೆಯಲು ಸರತಿ ಸಾಲಿನಲ್ಲಿ ನಿಂತ ಕಾರ್ಮಿಕರು, ಯಾವಾಗ ತಮ್ಮೂರಿಗೆ ಹೊರಡುತ್ತೇವೆ ಎಂಬ ಕಾತರದಲ್ಲಿದ್ದರು.
ಕಳೆದ ನಾಲ್ಕೈದು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಗುತ್ತಿಗೆದಾರರ ಕೈಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಕಟ್ಟಡದ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳಿಂದ ಕೆಲಸವಿಲ್ಲ. ಸರಿಯಾಗಿ ಊಟವೂ ಸಿಗುತ್ತಿಲ್ಲ. ಇನ್ನೂ ಒಂದು ವೇಳೆ ತಮಗೇನಾದರೂ ಕೊರೋನಾ ಬಂದರೆ ನಮ್ಮನ್ನಿಲ್ಲಿ ಯಾರು ನೋಡಿಕೊಳ್ಳುತ್ತಾರೆ? ಒಂದು ವೇಳೆ ನಾವೇನಾದರೂ ಕೊರೋನಾದಿಂದ ಸತ್ತರೆ ನಮ್ಮ ಮೃತದೇಹವನ್ನು ಕೂಡ ನಮ್ಮೂರಿಗೆ, ನಮ್ಮ ಬಂಧು ಬಳಗವಿದ್ದಲ್ಲಿ ಕೊಂಡೊಯ್ಯುವುದಿಲ್ಲ. ಇಲ್ಲೇ ಧಪನ್‌ ಮಾಡ್ತಾರೆ ಎಂದು ನುಡಿಯುವ ಅವರು, ಇದರ ಬದಲಿಗೆ ನಮ್ಮೂರಿಗೆ ಹೋದರೆ ಅಲ್ಲಿ ತಂದೆ-ತಾಯಿಯನ್ನೂ ನೋಡಿಕೊಂಡಂತೆಯೂ ಆಗುತ್ತದೆ. ಒಂದು ವೇಳೆ ಅಲ್ಲಿ ಏನಾದರೂ ಸತ್ತರೆ ನಮ್ಮ ಬಂಧು-ಮಿತ್ರರಾದರೂ ಇರುತ್ತಾರೆ. ಇಲ್ಲಿ ಇದ್ದರೂ ಪರದೇಶಿಯಂತೆ ಇರಬೇಕು. ಸತ್ತರೂ ಪರದೇಶಿಯಂತೆ ಸಾಯಬೇಕಾಗುತ್ತದೆ. ಅದಕ್ಕಾಗಿ ನಮ್ಮೂರಿಗೆ ಹೋಗುತ್ತಿದ್ದೇವೆ. ಸತ್ತರೂ ಅಲ್ಲೇ ಸಾಯುತ್ತೇವೆ’ ಎಂದು ಹೇಳಿದರು.

 

ಸದ್ಯ ಗದಗ ಜಿಲ್ಲೆ ನರಗುಂದದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಅವರ ರಾಜ್ಯದ 10ಕ್ಕೂ ಹೆಚ್ಚು ಜನರಿದ್ದಾರೆ. ಎಲ್ಲರೂ ಕಟ್ಟಡ ಕೆಲಸ, ರಸ್ತೆ ನಿರ್ಮಾಣ ಕೆಲಸದಲ್ಲೇ ನಿರತರಾಗಿದ್ದಾರೆ. ಸದ್ಯ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಕೆಲಸ ನಿರ್ವಹಿಸುತ್ತಿದ್ದರು. ಕೊರೋನಾ ಹಾವಳಿಯೆಲ್ಲ ಥಂಡಾ ಆದ ಮೇಲೆ ಮತ್ತೆ ಇಲ್ಲಿಗೆ ದುಡಿಯಲು ಬರುತ್ತೀರಾ ಎಂಬ ಪ್ರಶ್ನೆಗೆ, ಹಾಂ ಬಾಯ್‌ಸಾಬ್‌ ಆತೇ ಹೈ.. ತಬ್‌ ತೋ ಕೋಯಿ ಪ್ರಾಬ್ಲಂ ನಹೀ ಹೋಗೋನಾ. ಇಸ್‌ಲಿಯೇ ವಾಪಸ್‌ ಆಜಾಯೇಂಗೆ’ ಎಂದು ನುಡಿಯುತ್ತಾರೆ.

ಉತ್ತರ ಪ್ರದೇಶದ ಬಿಶ್ವನಾಥ ಎಂಬವರು ಪೆಂಟಿಂಗ್‌ ಕೆಲಸ ಮಾಡುತ್ತಾರೆ. ಅವರಿಗೆ ಊರಲ್ಲಿ ತಂದೆ-ತಾಯಿ, ಒಬ್ಬ ಸಹೋದರ ಮಾತ್ರ ಇದ್ದಾರಂತೆ. ಕರ್ನಾಟಕಕ್ಕೆ ಬಂದು ಆಗಲೇ ಎಂಟು ವರ್ಷವಾಯ್ತಂತೆ. ಪೇಂಟಿಂಗ್‌ ಮಾತ್ರ ಮಾಡುತ್ತಾರೆ. ವರ್ಷಕ್ಕೆ ಎರಡು ಬಾರಿ ಮಾತ್ರ ಊರಿಗೆ ಹೋಗುತ್ತಿದ್ದರಂತೆ, ಕಳೆದ ಡಿಸೆಂಬರ್‌ನಲ್ಲಿ ಊರಿಗೆಹೋಗಿ ಮರಳಿ ಬಂದಿದ್ದರಂತೆ. ಇಲ್ಲಿಯೇ ಸಿಲುಕಿದ್ದಾರೆ. ಇದೀಗ ಮರಳಿ ತಮ್ಮೂರಿನತ್ತ ಪಯಣ ಬೆಳೆಸುತ್ತಿದ್ದಾರೆ.

ನೂರಾರು ಜನ:

ಹೀಗೆ ನೂರಾರು ಕಾರ್ಮಿಕರು ಶುಕ್ರವಾರ ಬೆಳಗ್ಗೆಯಿಂದಲೇ ಗೋಕುಲ ರಸ್ತೆಯಲ್ಲಿನ ಹೊಸ ಬಸ್‌ ನಿಲ್ದಾಣದಲ್ಲಿ ರೈಲ್ವೆ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರು ರಾತ್ರಿಯೇ ಇಲ್ಲಿ ಬಂದವರಿದ್ದರು. ಇನ್ನೂ ಟಿಕೆಟ್‌ ತೆಗೆಸಿಕೊಂಡು ಎರಡು ದಿನ ಬಿಟ್ಟು ಹೊರಡುವ ಟ್ರೈನ್‌ನಲ್ಲೇ ಊರಿಗೆ ಮರಳಲಿದ್ದಾರೆ. ಇವರಿಗೆ ಊಟದ ವ್ಯವಸ್ಥೆಯ್ನೂ ಬೇರೆ ಬೇರೆ ಸಂಘ ಸಂಸ್ಥೆಗಳು ಮಾಡಿದ್ದು ವಿಶೇಷ. ಒಟ್ಟಿನಲ್ಲಿ ಎಲ್ಲ ಕಾರ್ಮಿಕರು ಇಲ್ಲಿಂದ ತೆರಳಲು ಹವಣಿಸುತ್ತಿರುವುದು ಮಾತ್ರ ಗೋಚರವಾಗುತ್ತಿತ್ತು.
 

Follow Us:
Download App:
  • android
  • ios