ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಾಮಾಜಿಕ ನ್ಯಾಯದ ಜತೆ ಸಾಮಾಜಿಕ ಅಭಿವೃದ್ಧಿಯ ಗುರಿ ಸಾಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು (ಫೆ.26): ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು (Special Program) ಏರ್ಪಡಿಸುವ ಮೂಲಕ ಸಾಮಾಜಿಕ ನ್ಯಾಯದ ಜತೆ ಸಾಮಾಜಿಕ ಅಭಿವೃದ್ಧಿಯ ಗುರಿ ಸಾಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್‌ ಮೂಲಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಬುಲ್‌ ಕಲಾಂ ಅಜಾದ್‌ ಭವನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕೆಲ ಸಮುದಾಯಗಳು ಕಡು ಬಡತನದಲ್ಲಿದ್ದು, ಅವರ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬದಲಾವಣೆಯ ಯುಗದಲ್ಲಿ ಬದಲಾವಣೆಯ ವೇಗವನ್ನು ಅಳವಡಿಸಿಕೊಂಡು ಅಲ್ಪಸಂಖ್ಯಾತರು ಗುರಿಯನ್ನು ಸಾಧಿಸಬೇಕು ಮತ್ತು ಸಮಾಜದ ಮುಖ್ಯವಾಹಿನಿಗೆ ಬರಬೇಕು. 21ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ಜಗತ್ತು ಬದಲಾವಣೆಯ ರೀತಿಯನ್ನು ಗ್ರಹಿಸಿ, ಮಕ್ಕಳನ್ನು ಸಿದ್ಧಪಡಿಸಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರ ಮತ್ತು ಸಮಾಜ ಮಕ್ಕಳಿಗೆ ಸೂಕ್ತ ಅವಕಾಶಗಳನ್ನು ಮತ್ತು ಸವಲತ್ತುಗಳನ್ನು ಕಲ್ಪಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಹಕರಿಸಬೇಕು ಎಂದರು. ಮಕ್ಕಳ ವಿದ್ಯಾರ್ಜನೆ ವಿಚಾರದಲ್ಲಿ ಬಹಳ ಮುಕ್ತ ವಾತಾವರಣ ನಿರ್ಮಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಅವಕಾಶ ಕಲ್ಪಿಸುತ್ತದೆ. ಪ್ರಧಾನಿಯವರ ನೇತೃತ್ವದಲ್ಲಿ ನವಭಾರತದ ನಿರ್ಮಾಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಹಳಷ್ಟುಅಧ್ಯಯನ ಮಾಡಿ ಜಾರಿಗೆ ತರಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭವನ್ನು ಅಲ್ಪಸಂಖ್ಯಾತರು ಪಡೆಯಬೇಕು ಎಂದು ನುಡಿದರು.

ಉಕ್ರೇನ್‌ನಲ್ಲಿ ಸಿಲುಕಿದ ಕನ್ನಡಿಗರು: ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಬೊಮ್ಮಾಯಿ

ವಕ್ಫ್ ಸಮಾಜಕ್ಕೆ ಬಳಕೆ: ವಕ್ಫ್ ಆಸ್ತಿಯನ್ನು ಕಾಪಾಡಿಕೊಳ್ಳಲು ವಕ್ಫ್ ಮಂಡಳಿಗೆ ಅಧಿಕಾರ ನೀಡಲಾಗಿದೆ. ಇದರ ದುರುಪಯೋಗಯಾಗದಂತೆ ಕ್ರಮ ವಹಿಸಬೇಕು. ವಕ್ಫ್ ಸಮಾಜದ ಆಸ್ತಿಯನ್ನು ಸಮಾಜದ ಬಳಕೆಗಾಗಿ ಮೀಸಲಿಡಬೇಕು. ಈ ವಿಷಯದಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಲ್ಪಸಂಖ್ಯಾತ ಜನಾಂಗದ ಕಟ್ಟಕಡೆಯ ವ್ಯಕ್ತಿಯನ್ನು ಬಡವರನ್ನು ಗಮನದಲ್ಲಿರಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳಿರಬೇಕು. ಮಕ್ಕಳು ಮಾನವ ಶಕ್ತಿ, ಪುಸ್ತಕ ಹಿಡಿಯುವ ಮಕ್ಕಳ ಕೈಯಲ್ಲಿ ಭಾರದ ಮೂಟೆಗಳಿವೆ. ಉದ್ಯೋಗ ಬಗ್ಗೆ ಮಕ್ಕಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಹೆಚ್ಚಿನ ಮಾಹಿತಿ ದೊರೆಯಬೇಕು. 

ಪ್ರಮುಖವಾಗಿ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿಗಳ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳಿಗೆ ಐಟಿ, ಎಂಜಿನಿಯರಿಂಗ್‌, ಐಐಟಿ, ಐಎಎಸ್‌, ಐಪಿಎಸ್‌ ಸೇರಿದಂತೆ ಮುಂತಾದ ಕ್ಷೇತ್ರದಲ್ಲಿನ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಬೇಕು. ಅಲ್ಪಸಂಖ್ಯಾತ ಮಕ್ಕಳ ಚಿಂತನೆ ಅವರ ಶಿಕ್ಷಣ ಮತ್ತು ವೃತ್ತಿಯ ದಿಸೆಯಲ್ಲಿ ಇರಬೇಕು. ಅಲ್ಪಸಂಖ್ಯಾತರ ಮತ್ತು ಬಡವರ ಮಕ್ಕಳು ಸೂಕ್ತ ವೃತ್ತಿ ಮಾರ್ಗದರ್ಶನದಿಂದ ಉತ್ತಮ ಶಿಕ್ಷಣ ಮತ್ತು ಉದ್ಯೋಗ ಪಡೆದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗುವ ಜತೆಗೆ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಖ್ಯಾತಿ ಉಳಿಸಲು ಸರ್ಕಾರ ಬದ್ಧ: Basavaraj Bommai

ಕಾಂಗ್ರೆಸ್‌ಗೆ ಭವಿಷ್ಯವೇ ಇಲ್ಲ: ರಾಜಕಾರಣದ ಮುಸುಕು ಕಾಂಗ್ರೆಸ್‌ ಮುಖಂಡರು ಮತ್ತವರ ಪಕ್ಷದ ಮೇಲೆ ಬಿದ್ದಿದ್ದು, ಅವರಿಗೆ ಭವಿಷ್ಯ ಇಲ್ಲ. ಕನಿಷ್ಠ ಪ್ರತಿಪಕ್ಷವಾಗಿಯಾದರೂ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಾಪ್ರಹಾರ ನಡೆಸಿದ್ದರು. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಳಿತ ಪಕ್ಷವಾಗಿ ಕೆಲಸ ಮಾಡಲು ಯೋಗ್ಯರಲ್ಲ ಎಂದು ಕಾಂಗ್ರೆಸ್‌ ಅನ್ನು 2018ರಲ್ಲಿ ಜನರು ತೀರ್ಮಾನಿಸಿ ತಿರಸ್ಕರಿಸಿದರು. ಕನಿಷ್ಠ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಿತ್ತು. ಆದರೆ, ಪ್ರತಿಪಕ್ಷವಾಗಿಯೂ ವಿಫಲವಾಗಿದೆ. ರಾಜಕಾರಣದ(Politics) ಮುಸುಕು ಅವರ ಮತ್ತು ಪಕ್ಷದ ಮೇಲೆ ಬಿದ್ದಿದೆ. ಎಲ್ಲವನ್ನು ರಾಜಕೀಯವಾಗಿ ಮತ್ತು ದ್ವೇಷದಿಂದ ನೋಡುವುದರಿಂದ ಮುಖಂಡರಿಗಾಗಲಿ, ಅವರ ಪಕ್ಷಕ್ಕಾಗಲಿ ರಾಜಕೀಯ ಭವಿಷ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.