ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಘೋಷಿಸಿದೆ. ಇದರೊಂದಿಗೆ, ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ಹೊಸ ನಿಲುಗಡೆ ನೀಡಲಾಗಿದೆ.

ಬೆಂಗಳೂರು (ನ.21): ವಾರಾಂತ್ಯಗಳಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ಆರು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ನಿರ್ವಹಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06207 ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 22 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರದಂದು ರಾತ್ರಿ 07:20 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡಲಿದೆ ಮತ್ತು ಮರುದಿನ ಬೆಳಿಗ್ಗೆ 07:30 ಗಂಟೆಗೆ ಕಲಬುರಗಿಯನ್ನು ತಲುಪಲಿದೆ.

ಮತ್ತೆ, ರೈಲು ಸಂಖ್ಯೆ 06208 ಕಲಬುರಗಿ –ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 23ರಿಂದ ಡಿಸೆಂಬರ್ 28ರವರೆಗೆ ಪ್ರತಿ ಭಾನುವಾರದಂದು ಬೆಳಿಗ್ಗೆ 09:35 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 08:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಮಾರ್ಗದಲ್ಲಿ, ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಾಬಾದ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು 20 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು 2 ಸೆಕೆಂಡ್ ಲಗೇಜ್ ಕಮ್ ಬ್ರೇಕ್ ವ್ಯಾನ್/ವಿಕಲಚೇತನ ಸ್ನೇಹಿ ಬೋಗಿಗಳನ್ನು ಒಳಗೊಂಡಿರಲಿದೆ.

ಕಿರ್ಲೋಸ್ಕರವಾಡಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನಿಲುಗಡೆ

ನವೆಂಬರ್ 24 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 20669/20670 ಎಸ್ಎಸ್ಎಸ್ ಹುಬ್ಬಳ್ಳಿ–ಪುಣೆ–ಎಸ್ಎಸ್ಎಸ್ ಹುಬ್ಬಳ್ಳಿ ಟ್ರೈ-ವೀಕ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ನಿಲುಗಡೆ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 20669 ಎಸ್ಎಸ್ಎಸ್ ಹುಬ್ಬಳ್ಳಿ–ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಿಗ್ಗೆ 09:38 ಗಂಟೆಗೆ ಕಿರ್ಲೋಸ್ಕರವಾಡಿ ತಲುಪಿ, 09:40 ಗಂಟೆಗೆ ಅಲ್ಲಿಂದ ಹೊರಡಲಿದೆ. ರೈಲು ಸಂಖ್ಯೆ 20670 ಪುಣೆ–ಎಸ್ಎಸ್ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಜೆ 05:43 ಗಂಟೆಗೆ ಕಿರ್ಲೋಸ್ಕರವಾಡಿ ತಲುಪಿ, 05:45 ಗಂಟೆಗೆ ಅಲ್ಲಿಂದ ಹೊರಡಲಿದೆ. ಪ್ರಯಾಣಿಕರು ಹೊಸದಾಗಿ ಒದಗಿಸಲಾದ ಈ ನಿಲುಗಡೆಯನ್ನು ಗಮನಿಸಿ, ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.