ದಕ್ಷಿಣ ಭಾರತದ ಮೊದಲ ಹಿಂಗ್ಲಾಜ್ ದೇವಿ ದೇಗುಲ ಬೆಂಗಳೂರಲ್ಲಿ ಲೋಕಾರ್ಪಣೆ
ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಹಿಂಗ್ಲಾಜ್ ದೇವಿ ಶಕ್ತಿ ಪೀಠದ ರೂಪಕದಂತಹ ಹಾಗೂ ದಕ್ಷಿಣ ಭಾರತದ ಮೊದಲ ಹಿಂಗ್ಲಾಜ್ ದೇವಿ ಗೋಪುರ ಶೈಲಿಯ ದೇವಾಲಯವು ಸನಾತನ ಹಿಂದೂ ಧರ್ಮದ ಭಕ್ತರ ಸೇವೆಗೆ ಮುಕ್ತಗೊಂಡಿತು.

ಬೆಂಗಳೂರು(ಜ.28): ಉದ್ಯಾನನಗರಿ ಬೆಂಗಳೂರಿನ ಕಬ್ಬನ್ಪೇಟೆಯಲ್ಲಿ ನಿರ್ಮಾಣಗೊಂಡಿರುವ ಹಿಂಗ್ಲಾಜ್ ದೇವಿಯ ಭವ್ಯ ಮಂದಿರ ಲೋಕಾರ್ಪಣೆ ಹಾಗೂ ಹಿಂಗ್ಲಾಜ್ ದೇವಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಿತು. ತನ್ಮೂಲಕ ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಹಿಂಗ್ಲಾಜ್ ದೇವಿ ಶಕ್ತಿ ಪೀಠದ ರೂಪಕದಂತಹ ಹಾಗೂ ದಕ್ಷಿಣ ಭಾರತದ ಮೊದಲ ಹಿಂಗ್ಲಾಜ್ ದೇವಿ ಗೋಪುರ ಶೈಲಿಯ ದೇವಾಲಯವು ಸನಾತನ ಹಿಂದೂ ಧರ್ಮದ ಭಕ್ತರ ಸೇವೆಗೆ ಮುಕ್ತಗೊಂಡಿತು. ಶುಕ್ರವಾರ ಮುಂಜಾನೆಯಿಂದಲೇ ಹಲಸೂರು ಗೇಟ್ ಹಿಂಭಾಗದಲ್ಲಿ ನಡೆದ ಹೋಮ-ಹವನ, ಶಾಸೊತ್ರೕಕ್ತ ವಿಧಿ-ವಿಧಾನಗಳ ಬಳಿಕ ಮಧ್ಯಾಹ್ನ ಕಬ್ಬನ್ಪೇಟೆ ಓಣಿಯಲ್ಲಿ ದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಕಳಸ ಹೊತ್ತ ಸಹಸ್ರಾರು ಭಕ್ತರ ‘ಜೈ ಹಿಂಗ್ಲಾಜ್ ಮಾತಾ’ ಎಂಬ ಜಯ ಘೋಷಣೆಗಳ ನಡುವೆ ಕಂಗೊಳಿಸುತ್ತಿದ್ದ ನೂತನ ಮೂರ್ತಿಯು ಭವ್ಯ ಮಂದಿರವನ್ನು ಪ್ರವೇಶಿಸಿತು. ಈ ವೇಳೆ ಭಕ್ತಾದಿಗಳು ಭಕ್ತಿ ಭಾವದಿಂದ ನೃತ್ಯ ಮಾಡಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು. ಬಳಿಕ ರಾಜಸ್ಥಾನದಿಂದ ಆಗಮಿಸಿದ್ದ ಪುರೋಹಿತರು ಶಾಸೊತ್ರೕಕ್ತವಾಗಿ ಪಂಚಕಳಸ ಪ್ರತಿಷ್ಠಾಪನೆ ಹಾಗೂ ದೇವಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ನಂತರ ಭಕ್ತಾದಿಗಳ ದರ್ಶನ ಹಾಗೂ ವಿಶೇಷ ಪೂಜೆಗೆ ಅವಕಾಶ ನೀಡಲಾಯಿತು.
ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ: ಸಂವಿಧಾನ ಜಾರಿಗೊಂಡು 74 ವರ್ಷವಾದರೂ ಅಸ್ಪೃಶ್ಯತೆ ಜೀವಂತ
ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸೂರಜ್ ಕುಂಡ್ ಧಾಮ್ನ ಅವದೇಶ್ ಚೈತನ್ಯ ಬ್ರಹ್ಮಚಾರಿ ಮಹಾರಾಜ್, ಕದಲಿ ಯೋಗೇಶ್ವರ ಮಠದ ನಿರ್ಮಲನಾಥ್ಜಿ, ಸುಖದೇವ್ ಭಾರತಿ ಮಹಾರಾಜ್, ಪಿಪಲೇಶ್ವರ ಮಠದ ರಾಥೋಡ್ ಭಾರತಿಜಿ, ಸಮಾಜ ಸೇವಕ ಕುಮಾರ್ಪಾಲ್ ಸಿಸೋಡಿಯಾ, ಮಾಜಿ ಸಂಸದ ತರುಣ್ ವಿಜಯ್, ಆರ್ಎಸ್ಎಸ್ನ ಕ್ಷೇತ್ರ ಪ್ರಚಾರಕರಾದ ಸುಧೀರ್ ಮತ್ತಿತರ ಗಣ್ಯರು ಸಾಕ್ಷಿಯಾದರು.
ಕೋಟ್ಯಂತರ ರು. ಮೌಲ್ಯದ ಭವ್ಯ ಮಂದಿರ:
ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಮಂದಿರವನ್ನು ಸಂಪೂರ್ಣ ರಾಜಸ್ಥಾನದ ಮಕರಾನ ಮಾರ್ಬಲ್ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಇನ್ನು ಗರ್ಭಗುಡಿಯ ದ್ವಾರವನ್ನು 45 ಕೆ.ಜಿ. ಬೆಳ್ಳಿ ಬಳಸಿ ನಿರ್ಮಿಸಿದ್ದು, ಮುಖ್ಯ ದ್ವಾರಕ್ಕೆ ಕೆ.ಜಿ.ಗಟ್ಟಲೆ ಚಿನ್ನ ಬಳಸಿ ಚಿನ್ನಲೇಪಿತ ದ್ವಾರವನ್ನಾಗಿ ಮಾಡಲಾಗಿದೆ. ಕ್ಷತ್ರೀಯ ಸಮಾಜದ ಕುಲದೇವಿಯಾದ ಹಿಂಗ್ಲಾಜ್ ದೇವಿ ದೇವಾಲಯ ಬೆಂಗಳೂರಿನ ಮತ್ತೊಂದು ಪ್ರೇಕ್ಷಣೀಯ ಹಾಗೂ ಧಾರ್ಮಿಕ ಕೇಂದ್ರವಾಗಿ ಬದಲಾಗಲಿದೆ.
ಸನಾತನ ಧರ್ಮದ ಶಕ್ತಿ ಕೇಂದ್ರವಾಗಿ ಬೆಳೆಯಲಿದೆ: ತರುಣ್ ವಿಜಯ್
ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭೆ ಮಾಜಿ ಸದಸ್ಯ ತರುಣ್ ವಿಜಯ್, ಹಿಂಗ್ಲಾಜ್ ದೇವಿಯ ಈ ಮಂದಿರ ಸನಾತನ ಹಿಂದೂ ಧರ್ಮದ ಶಕ್ತಿ ಕೇಂದ್ರವಾಗಿ ಬೆಳೆಯಲಿದೆ. ದೇವಿಯು ಧರ್ಮ ರಕ್ಷಿಸಲು, ಧರ್ಮ ದ್ರೋಹಿಗಳನ್ನು ನಾಶ ಮಾಡಲಿದ್ದಾಳೆ. ಇದು ಹಿಂದೂ ಪುನರುಜ್ಜೀವನ, ಪುನರ್ ಜಾಗೃತಿಗೆ ಸೂಕ್ತ ಸಮಯ. ಹೀಗಾಗಿ ಈ ದೇವಾಲಯ ಹಿಂದೂ ಜಾಗೃತಿಗೆ ಚಿಹ್ನೆಯಾಗಿ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂಗ್ಲಾಜ್ ದೇವಿಯು 3,500 ವರ್ಷಗಳಿಂದ ವಿಶ್ವಾದ್ಯಂತ ಇರುವ ಹಿಂದೂಗಳಿಂದ ಪೂಜಿಸಲ್ಪಡುತ್ತಿದ್ದಾಳೆ. ದೇವಿಯ ತದ್ರೂಪಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ತುಂಬಾ ಖುಷಿ ನೀಡಿದ್ದು, ಇದೊಂದು ಮೈಲುಗಲ್ಲು. ಇಂತಹ ಮೂರ್ತಿಯನ್ನು ಕಣ್ತುಂಬಿಕೊಂಡು ನಮನ ಸಲ್ಲಿಸಲು ಉತ್ತರಾಖಂಡದಿಂದ ಬಂದಿದ್ದೇನೆ ಎಂದು ಸಂತಸ ಹಂಚಿಕೊಂಡರು.
ಸಹೃದಯಿ ಕನ್ನಡಿಗರಿಗೆ ಧನ್ಯವಾದ
ಇಂತಹ ಭವ್ಯ ಮಂದಿರ ನಿರ್ಮಾಣಕ್ಕೆ ಕಾರಣೀಭೂತರಾದ ಬೆಂಗಳೂರು ಬ್ರಹ್ಮ ಕ್ಷತ್ರೀಯ ಸಮಾಜ (ಖತ್ರಿ) ಟ್ರಸ್ಟ್ ಅಧ್ಯಕ್ಷ ಲೇಖರಾಜ್ ಚುಚ್ಚ, ರಾಯಚಂಜ್ ಜಿ, ದಕ್ಷಿಣ ಭಾರತದಲ್ಲಿ ಸನಾತನ ಧರ್ಮಕ್ಕೆ ಹೊಸ ಶಕ್ತಿ ಪೀಠ ರಚಿಸಲು ನೆರವಾದ ಸಹೃದಯಿ ಕನ್ನಡಿಗರಿಗೆ ಧನ್ಯವಾದ ತಿಳಿಸುತ್ತೇನೆ ಅಂತ ಮಾಜಿ ರಾಜ್ಯಸಭೆ ಸದಸ್ಯ ತರುಣ್ ವಿಜಯ್ ಹೇಳಿದ್ದಾರೆ.
ಪಾಕ್ನ ಹಿಂಗ್ಲಾಜ್ ಶಕ್ತಿಪೀಠ ನಮ್ಮದಾಗಬೇಕು: ಸುಧೀರ್
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್ನ)ದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಪ್ರಚಾರಕ ಸುಧೀರ್ ಮಾತನಾಡಿ, ದೇವಸ್ಥಾನಗಳು ಶ್ರದ್ಧೆ, ಭಕ್ತಿ, ಧರ್ಮ ಮಾರ್ಗ ತೋರುವ ದೀವಿಗೆ ಮತ್ತು ಶಕ್ತಿ ಕೇಂದ್ರಗಳಾಗಿವೆ. ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಹಿಂಗ್ಲಾಜ್ ದೇವಿ ಶಕ್ತಿ ಪೀಠ ಹಿಂದೂ ಧರ್ಮದ ಅತ್ಯಂತ ಪ್ರಮುಖ ಶಕ್ತಿ ಪೀಠದಲ್ಲಿ ಒಂದು. ಅದು ಯಾವತ್ತಾದರೂ ಒಂದು ದಿನ ನಮ್ಮ ದೇಶಕ್ಕೆ ಸೇರಬೇಕು. ಆ ಭಾವನೆ ಗಟ್ಟಿಗೊಳಿಸಿಕೊಳ್ಳಲು ಹಾಗೂ ಆ ಬಗ್ಗೆ ಸಂಕಲ್ಪದೊಂದಿಗೆ ಇಂದು ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವ ಹಿಂಗ್ಲಾಜ್ ದೇವಿ ಮಂದಿರಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿರುವ ಶಕ್ತಿ ಪೀಠಕ್ಕೆ ಯಾತ್ರಿಗಳು ಹೋಗಲು ಅನುಮತಿ ಸಿಗುತ್ತಿಲ್ಲ. ಹೀಗಾಗಿ ಆ ಹಿಂದೂ ಶಕ್ತಿ ಪೀಠ ನಮ್ಮದಾಗಬೇಕು ಎಂಬುದು ನಮ್ಮ ಆಸೆ. ಅಲ್ಲಿ ಬಿಡುತ್ತಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಹಿಂಗ್ಲಾಜ್ ದೇವಿಯ ದೇವಾಲಯ ನಿರ್ಮಿಸಲಾಗಿದೆ. ಇನ್ನು ಇದೇ ತಂಡ ರಾಜಸ್ಥಾನದ ಬಾಡಮೇರ್ನಲ್ಲಿ ಬಲೂಚಿಸ್ತಾನದ ತದ್ರೂಪಿ ಕ್ಷೇತ್ರ ಮಾಡಲು ಯತ್ನಿಸುತ್ತಿದೆ. ಇವೆಲ್ಲ ಪ್ರಯತ್ನಗಳಿಗೂ ಫಲ ಸಿಗಲಿ ಎಂದು ಆಶಿಸುತ್ತೇನೆ ಎಂದರು.
ಉತ್ತರ ಭಾರತದಲ್ಲಿರುವಂತೆಯೇ ಕರ್ನಾಟಕದಲ್ಲಿಯೂ ಕೇದಾರನಾಥ!
ಇನ್ನು ಹಿಂಗ್ಲಾಜ್ ದೇವಿಯ ದೇವಾಲಯದ ಭಾಗ್ಯ ಬೆಂಗಳೂರಿಗೆ ಬಂದಿದೆ. ಇಂತಹ ಆನಂದವನ್ನು ಕಣ್ತುಂಬಿಕೊಳ್ಳಲು ಬಿಡುವು ಮಾಡಿಕೊಂಡು ಬಂದಿದ್ದೇನೆ. ನಾನು ಈ ಸಮಾಜದವನಲ್ಲದಿದ್ದರೂ ಎಲ್ಲಾ ಸನಾತನ ಹಿಂದೂ ಧರ್ಮವೂ ಒಂದೇ. ಎಲ್ಲ ಹಿಂದೂಗಳೂ ಧರ್ಮ ಉಳಿಸಲು ಮುಂದಾಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ನಮ್ಮ ಕುಲದೇವಿ ಹಿಂಗ್ಲಾಜ್ ದೇವಿಯ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಪಾಕಿಸ್ತಾನದಲ್ಲಿನ ಬಲೂಚಿಸ್ತಾನದಲ್ಲಿರುವ ಶಕ್ತಿ ಪೀಠ ದರ್ಶನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮಾರ್ವಾಡಿ ಕ್ಷತ್ರೀಯ ಸಮಾಜ ಬೆಂಗಳೂರಿನಲ್ಲೇ ದೇವಾಲಯ ನಿರ್ಮಾಣ ಮಾಡಿದ್ದೇವೆ. ಇದು ದಕ್ಷಿಣ ಭಾರತದಲ್ಲಿ ಮೊದಲ ಗೋಪುರ ಶೈಲಿ ಹಿಂಗ್ಲಾಜ್ ದೇವಿ ದೇವಾಲಯ. ಇದರಿಂದ ಧನ್ಯತಾ ಭಾವ ಮೂಡಿದೆ ಅಂತ ಬೆಂಗಳೂರು ಬ್ರಹ್ಮ ಕ್ಷತ್ರೀಯ (ಖತ್ರಿ) ಸಮಾಜ ಟ್ರಸ್ಟ್ ಅಧ್ಯಕ್ಷ ಲೇಖರಾಜ್ ಚುಚ್ಚ ತಿಳಿಸಿದ್ದಾರೆ.