‘JDS ಬಿಟ್ಟು ಬಿಜೆಪಿಗೆ ಹೋದವರು ಬೇಸತ್ತು ಮತ್ತೆ ವಾಪಸ್’
ಜೆಡಿಎಸ್ ಮುಖಂಡರಲ್ಲಿ ಮುಂದಿನ ಚುನಾವಣೆಗೆ ಈಗಾಗಲೇ ಸಿದ್ಧತೆಗಳು ನಡೆಸಲು ಕಾರ್ಯಕರ್ತರಿಗೆ ಸಲಹೆ ನೀಡಲಾಗುತ್ತಿದ್ದು, ಇದೇ ವೇಳೆ ಹಲವರು ಮತ್ತೆ ವಾಪಸ್ ಬರಲಿದ್ದಾರೆಂದು ಮುಖಂಡರೋರ್ವರು ಹೇಳಿದ್ದಾರೆ.
ಮದ್ದೂರು [ಜ.06]: ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಅನೇಕರು ಟೀಕಿಸುತ್ತಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ಇರುವವರೆವಿಗೂ ಪಕ್ಷವನ್ನು ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಹೂತಗೆರೆ ಸತೀಶ ಹಾಗೂ ಬೆಂಬಲಿಗರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಭಿನಂದಿಸಿ ಮಾತನಾಡಿದ ಅವರು, ಜೆಡಿಎಸ್ಗೆ ಮುಖಂಡರು ಹಾಗೂ ಕಾರ್ಯಕರ್ತರು ದೊಡ್ಡ ಶಕ್ತಿಯಾಗಿದ್ದಾರೆ. ಈ ಎಲ್ಲರ ಬೆಂಬಲ ಇರುವವರೆಗೆ ಪಕ್ಷದ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಶಕ್ತಿ ಅರಿವು ಎಲ್ಲರಿಗೂ ಗೊತ್ತಾಗಲಿದೆ. ಪಕ್ಷದಲ್ಲಿ ಈ ಹಿಂದೆ ನಡೆದಿರುವ ಮನಸ್ಥಾಪಗಳನ್ನು ಬಿಟ್ಟು ಕಾರ್ಯಕರ್ತರು ಮುಂದಿನ ಚುನಾವಣೆವರೆಗೆ ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು ಎಂದು ಚಿಂತಿಸಬೇಕೆಂದು ಸಲಹೆ ನೀಡಿದರು.
ರಾಮನಗರದಲ್ಲಿ ಕಮರಿದ ಕನಸು : ಕೈ - ದಳದಲ್ಲಿ ಭಾರಿ ಬೇಸರದ ಛಾಯೆ..
ಕಾರ್ಯಕರ್ತರು ಯಾವುದೇ ಅಪಪ್ರಚಾರಗಳಿಗೆ ಸಿಲುಕದೆ ಹಾಗೂ ಪರಸ್ಪರ ಭಿನ್ನಾಭಿಪ್ರಾಯ ಬಿಟ್ಟು ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಗ್ರಾಮೀಣ ಭಾಗದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಸಭೆಗಳನ್ನು ನಡೆಸಿ ಜೆಡಿಎಸ್ ಪಕ್ಷವನ್ನು ಮತ್ತೆ ತಳ ಮಟ್ಟದಿಂದ ಸಂಘಟಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಥವ ಕಾಂಗ್ರೆಸ್ ಸೇರುತ್ತೇನೆ ಎಂದ ಜೆಡಿಎಸ್ ಮುಖಂಡ...
ಸತೀಶ್ ಮಾತನಾಡಿ, ನನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಕೆಲವೊಂದು ಬೆಂಬಲಿಗರ ಒತ್ತಾಸೆಗೆ ಮಣಿದು ಬಿಜೆಪಿ ಸೇರ್ಪಡೆಗೊಂಡಿದ್ದೆ. ಆದರೆ ಆ ಪಕ್ಷದಲ್ಲಿ ಕೆಲವರಲ್ಲಿ ಮಣೆ ಹಾಕುವ ಪ್ರವೃತ್ತಿಯಿಂದಾಗಿ ಬೇಸತ್ತು ಬಿಜೆಪಿ ತೊರೆಯುುವ ನಿರ್ಧಾರ ಕೈಗೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಂಬಲಿಗರನ್ನು ಜೆಡಿಎಸ್ಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಕಾರ್ಯಾಧ್ಯಕ್ಷ ಕೆ.ದಾಸೇಗೌಡ, ಪೀಕಾರ್ಡ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಹೂತಗೆರೆ ದಿಲೀಪ್ ಕುಮಾರ್, ಮಧು, ಚಾಕನಕೆರೆ ಕುಮಾರ್, ಪುಟ್ಟಲಿಂಗಯ್ಯ, ರಮೇಶ್, ಕೆಸ್ತೂರು ಜಗದೀಶ್ ಹಾಗೂ ಆನಂದ್ ಇದ್ದರು.