Asianet Suvarna News Asianet Suvarna News

ಮಕ್ಕಳಲ್ಲಿ ಸಾಮಾಜಿಕ ಜಾಲತಾಣದ ವ್ಯಾಮೋಹ ಹೆಚ್ಚುತ್ತಿದೆ

ಇತ್ತೀಚಿನ ದಿನಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು, ಯುವಜನರು, ವಯಸ್ಕರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಲ್ಲಿ ಸಾಮಾಜಿಕ ಜಾಲತಾಣದ ವ್ಯಾಮೋಹ ಹೆಚ್ಚುತ್ತಿದ್ದು, ಇವರೆಲ್ಲರ ಬದುಕಿನ ಅಮೂಲ್ಯ ಸಮಯ ಅದರಲ್ಲಿ ಕಳೆದು ಹೋಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಆತಂಕ ವ್ಯಕ್ತಪಡಿಸಿದರು.

Social media craze is increasing among children  snr
Author
First Published Oct 10, 2023, 7:45 AM IST

  ಮೈಸೂರು :  ಇತ್ತೀಚಿನ ದಿನಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು, ಯುವಜನರು, ವಯಸ್ಕರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಲ್ಲಿ ಸಾಮಾಜಿಕ ಜಾಲತಾಣದ ವ್ಯಾಮೋಹ ಹೆಚ್ಚುತ್ತಿದ್ದು, ಇವರೆಲ್ಲರ ಬದುಕಿನ ಅಮೂಲ್ಯ ಸಮಯ ಅದರಲ್ಲಿ ಕಳೆದು ಹೋಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಆತಂಕ ವ್ಯಕ್ತಪಡಿಸಿದರು.

ಅದಮ್ಯ ರಂಗಶಾಲೆ ವತಿಯಿಂದ ನಗರದ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ನಡೆದ ಟಿ.ಪಿ. ಕೈಲಾಸಂ ರಚನೆಯ ''''ಗಂಡಸ್ಕತ್ರಿ'''' ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೊಬೈಲ್ ಮಾಯೆಯಂತೆ ನಮ್ಮ ಬದುಕನ್ನು ಆವರಿಸಿದೆ. ಇದರಿಂದಾಗಿ ಜನರು ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಕ್ರೀಡಾ ಕ್ಷೇತ್ರಗಳಿಂದ ದೂರ ಸರಿಯುತ್ತಿದ್ದಾರೆ. ಪರಸ್ಪರ ಮಾತುಕತೆ ವಿನಿಮಯ ಇಲ್ಲದೆ ಸಾಮಾಜಿಕ ಸಂಬಂಧಗಳು ನಶಿಸುತ್ತಿವೆ ಎಂದು ಅವರು ವಿಷಾದಿಸಿದರು.

ನಾಟಕ ಬದುಕಿನ ಒಂದು ಭಾಗ. ಜನ ಜೀವನ ಪ್ರತಿಫಲಿಸುವ ನಾಟಕಗಳು ಸಾಮಾಜಿಕ ಅಂಕುಡೊಂಕನ್ನು ತಿದ್ದುತ್ತವೆ. ಹಾಸ್ಯ, ವ್ಯಂಗ್ಯ, ಕುಚೋದ್ಯದ ಮೂಲಕ ನಾಟಕಗಳು ವ್ಯವಸ್ಥೆಯ ಲೋಪ ಸರಿಪಡಿಸುತ್ತವೆ. ಜನರು ಸಾಹಿತ್ಯ ಮತ್ತು ನಾಡಕಾಭಿರುಚಿ ಬೆಳೆಸಿಕೊಂಡು ಒತ್ತಡದಿಂದ ಹೊರ ಬರಲು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನಾಟಕ ಸಹಕಾರಿ ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಿ. ರವಿಕುಮಾರ್ ಮಾತನಾಡಿ, ಮಕ್ಕಳು ಮತ್ತು ವಿದ್ಯಾರ್ಥಿಗಳು ಕೇವಲ ಅಧಿಕ ಅಂಕಗಳ ಪಡೆದರೆ ಸಾಲದು. ಪ್ರತಿಭಾವಂತರಾಗಿ ರೂಪುಗೊಳ್ಳಬೇಕು. ಓದಿನ ಜೊತೆಗೆ ನಾಟಕಾಭಿನಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಲೆಗೆ ಇಂದಿಗೂ ಬೆಲೆ ಸಿಗಬೇಕಾದರೆ ಅದಕ್ಕೆ ಪ್ರೋತ್ಸಾಹ ತುಂಬಾ ಅಗತ್ಯ. ನಾಟಕ ಪ್ರದರ್ಶನ ನಡೆದಾಗ ಅದನ್ನು ವೀಕ್ಷಿಸುವ ಮೂಲಕ ರಂಗಕರ್ಮಿಗಳಿಗೆ ಬೆನ್ನಿಗೆ ನಿಲ್ಲಬೇಕು ಎಂದ ಅವರು, ಅದಮ 6 ರಂಗಶಾಲೆ ಮಕ್ಕಳಲ್ಲಿ ನಾಟಕ ಕಲೆ ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಸಾಹಿತಿ ಟಿ. ಲೋಕೇಶ್ ಹುಣಸೂರು, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಕಾರ್ಯದರ್ಶಿ ಡಾ.ಬಿ. ಬಸವರಾಜು, ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ಇದ್ದರು.

ಈ ವೇಳೆ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಳಿಕ ಸಿ. ವಿನೋದ್ ಮೈಸೂರು ನಿರ್ದೇಶನದ ''''ಗಂಡಸ್ಕತ್ರಿ'''' ನಾಟಕ ಪ್ರದರ್ಶನ ನಡೆಯಿತು. ಈ ನಾಟಕದಲ್ಲಿ ಮಾನಸ ಕೃಷ್ಣಸ್ವಾಮಿ, ಉಲ್ಲಾಸ್, ಮನೋಜ್ ಮತ್ತು ತೇಜಸ್ ಹಾಸನ ಮುಖ್ಯ ಪಾತ್ರದಲ್ಲಿದ್ದರು.

Follow Us:
Download App:
  • android
  • ios