ವೈದ್ಯ, ಎಂಜಿನಿಯರ್ ಸೀಟು ಬಿಟ್ಟ ಸಿದ್ದುಗೆ ಕೃಷಿಯಲ್ಲಿ ಚಿನ್ನ
ಉಚಿತವಾಗಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟು ಸಿಕ್ಕರೂ, ಕೃಷಿ ಕ್ಷೇತ್ರದಲ್ಲಿಯೇ ಸಾಧನೆ ಮಾಡಬೇಕೆಂಬ ಉತ್ಕಟ ಇಚ್ಚೆಯಿಂದ ಅವುಗಳನ್ನು ತಿರಸ್ಕರಿಸಿ ಬಿಎಸ್ಸಿ ಕೃಷಿ ಪದವಿಗೆ ಸೇರಿದ್ದ ಸಿದ್ದುಗೆ ಚಿನ್ನದ ಗೌರವ ಸಿಕ್ಕಿದೆ.
ಧಾರವಾಡ (ಜೂ.18): ಪಿಯುಸಿ ನಂತರ ಉಚಿತವಾಗಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟು ಸಿಕ್ಕರೂ, ಕೃಷಿ ಕ್ಷೇತ್ರದಲ್ಲಿಯೇ ಸಾಧನೆ ಮಾಡಬೇಕೆಂಬ ಉತ್ಕಟ ಇಚ್ಚೆಯಿಂದ ಅವುಗಳನ್ನು ತಿರಸ್ಕರಿಸಿ ಬಿಎಸ್ಸಿ ಕೃಷಿ ಪದವಿಗೆ ಸೇರಿದ ವಿದ್ಯಾರ್ಥಿ ಸಿದ್ದು ಬಸವರಾಜ ಚಿಂದಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಕೃಷಿ ಕುಟುಂಬದ ಸಿದ್ದು ಬಸವರಾಜ ಚಿಂದಿ, 32ನೇ ಘಟಿಕೋತ್ಸವದಲ್ಲಿ ಬಿಎಸ್ಸಿ ಕೃಷಿ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಾರಣ ಎರಡು ಚಿನ್ನದ ಪದಕ ಪಡೆಯುವ ಮೂಲಕ ಚಿನ್ನದ ಹುಡುಗನಾಗಿ ಹೊರಹೊಮ್ಮಿದ್ದಾನೆ.
ಪಿಯುಸಿಯಲ್ಲಿ ಶೇ.93ರಷ್ಟುಅಂಕ ಪಡೆದು ಕೃಷಿ ವಿವಿಯಲ್ಲಿ ಬಿಎಸ್ಸಿ (ಕೃಷಿ) ಪದವಿಗೆ ಪ್ರವೇಶ ಪಡೆದಿದ್ದರು. 9.17 ಸಿಜಿಪಿಎ ಅಂಕ ಪಡೆದು 2 ಬಂಗಾರದ ಪದಕ ಪಡೆದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಅನುವಂಶಿಕತೆ ಹಾಗೂ ಸಸ್ಯತಳಿ ಶಾಸ್ತ್ರದಲ್ಲಿ ಎಂಎಸ್ಸಿ ಕಲಿಯುತ್ತಿದ್ದಾರೆ.