ಎರಡು ದಿನದಿಂದ ಟಿವಿಯಲ್ಲಿ ಎಲ್ಲಾ ರಾಜಕೀಯ ಬೆಳವಣಿಗೆ ಗಮನಸಿದೆ. ಮನಸ್ಸಿನಲ್ಲೇ ಸಿಎಂ ಆಗಲಿ ಎಂದು ಹಾರೈಸಿದ್ದೆ. ಈಗ ಅಂದುಕೊಂಡಂತೆ ಸಿದ್ರಾಮಣ್ಣ ಮತ್ತೆ ಸಿಎಂ ಆಗಿದ್ದು, ಊರಿನಲ್ಲಿ ಸಂಭ್ರಮ ಮನೆ ಮಾಡಿದೆ. ಮತದಾನ ದಿನವೇ ಸಿದ್ದರಾಮೇಶ್ವರನಿಂದ ಬಲಗಡೆ ಪ್ರಸಾದವಾಗಿತ್ತು. ಮನೆದೇವರು ವರ ಕೊಟ್ಟಿದ್ದ ಮೇಲೆ ನಂಬಿಕೆ ಇತ್ತು ಎಂದ ಸಿದ್ದೇಗೌಡ 

ಮೈಸೂರು(ಮೇ.19): ‘ಸಿದ್ದರಾಮಣ್ಣ ಸಿಎಂ ಆಗ್ಲಿ ಎಂದು ಮನೆ ದೇವರು ವರ ಕೊಟ್ಟಿದ್ದ...’. ಸಿದ್ದರಾಮಯ್ಯನವರು ಎರಡನೇ ಬಾರಿಗೆ ಸಿಎಂ ಆಗುತ್ತಿದ್ದಾರೆ ಎಂಬ ವಿಷಯ ಕೇಳಿ ತುಂಬಾ ಖುಷಿ ಆಗುತ್ತಾ ಇದೆ. ಹೀಗೆಂದು ಸಂಭ್ರಮಿಸಿದ್ದು ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ. ಎರಡು ದಿನದಿಂದ ಟಿವಿಯಲ್ಲಿ ಎಲ್ಲಾ ರಾಜಕೀಯ ಬೆಳವಣಿಗೆ ಗಮನಸಿದೆ. ಮನಸ್ಸಿನಲ್ಲೇ ಸಿಎಂ ಆಗಲಿ ಎಂದು ಹಾರೈಸಿದ್ದೆ. ಈಗ ಅಂದುಕೊಂಡಂತೆ ಸಿದ್ರಾಮಣ್ಣ ಮತ್ತೆ ಸಿಎಂ ಆಗಿದ್ದು, ಊರಿನಲ್ಲಿ ಸಂಭ್ರಮ ಮನೆ ಮಾಡಿದೆ. ಮತದಾನ ದಿನವೇ ಸಿದ್ದರಾಮೇಶ್ವರನಿಂದ ಬಲಗಡೆ ಪ್ರಸಾದವಾಗಿತ್ತು. ಮನೆದೇವರು ವರ ಕೊಟ್ಟಿದ್ದ ಮೇಲೆ ನಂಬಿಕೆ ಇತ್ತು ಎಂದು ಸಿದ್ದೇಗೌಡ ಹೇಳಿದರು.

Add Asianetnews Kannada as a Preferred SourcegooglePreferred

ನಮ್ಮ ಅಣ್ಣ ಮತ್ತೆ ಮುಖ್ಯಮಂತ್ರಿ ಆದರೆ ಖುಷಿ ಆಗ್ದೆ ಇರುತ್ತಾ? ಊರಿನಲ್ಲಿ ಸಿದ್ದರಾಮಯ್ಯ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಲು ಗ್ರಾಮದ ಯುವಕರು ಉತ್ಸುಕರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಸಿದ್ದರಾಮನಹುಂಡಿಯ ಸಿದ್ದರಾಮೇಶ್ವರ ದೇಗುಲದಲ್ಲಿ ಈ ಸಂಬಂಧ ವಿಶೇಷ ಪೂಜೆ ಕೂಡ ನಡೆಯಲಿದೆ ಎಂದರು.

2ನೇ ಬಾರಿಗೆ ಸಿದ್ದು ಸಿಎಂ, ಮೊದಲ ಸಲ ಡಿಕೆಶಿ ಡಿಸಿಎಂ..!

ಸಿದ್ದರಾಮಯ್ಯ ಊರಿಗೆ ಬಂದರೆ ಇಡೀ ಊರಿಗೆ ಊರೇ ಖುಷಿಪಡುತ್ತದೆ. ಸಾಹೇಬ್ರು ಬಂದೋರೆ ಎಂದು ಊರವರೆಲ್ಲಾ ಮಾತನಾಡುತ್ತಾರೆ. ಬಡತನ ನೋಡಿ ಬೆಳೆದು ಇದೀಗ ಬಡವರ ಕಣ್ಣೀರು ಒರೆಸುವ ನಾಯಕನಾಗಿ ಕೆಲಸ ಮಾಡುತ್ತ ಇದ್ದಾರೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮನೆ ಮಾಡಿದೆ. ಎರಡನೇ ಬಾರಿಗೆ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ತಿಳಿದಾಕ್ಷಣ ಊರವರು ಸಂಭ್ರಮಪಡುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸಿದ್ದರಾಮೇಶ್ವರ ದೇವರ ಭಕ್ತೆ. ಹಾಗಾಗಿ, ಗ್ರಾಮದಲ್ಲಿ ಪೂಜೆ ಆಯೋಜಿಸಲಾಗಿದೆ.

ಸಿದ್ದರಾಮಯ್ಯ ಅವರು ಗೆಲ್ಲಬೇಕು ಎಂದು ಇಡೀ ಊರಿನ ಯುವಕರೆಲ್ಲರೂ ಪ್ರಚಾರ ಮಾಡಿದ್ದೇವು. ಸಾಕಷ್ಟುಮಂದಿ ನಿರುದ್ಯೋಗಿಗಳು ಊರಿನಲ್ಲಿದ್ದಾರೆ. ಅವರೆಲ್ಲರಿಗೂ ಕೆಲಸ ಕೊಡುವ ಭರವಸೆಯನ್ನು ನಮ್ಮ ಸಾಹೇಬರು ನೀಡಿದ್ದಾರೆ. ಸಿಎಂ ಸಾಹೇಬರು ನಮ್ಮೂರಿಗೆ ಬಂದಾಗ ಜಾತ್ರೆ ರೀತಿ ವ್ಯವಸ್ಥೆ ಮಾಡಿ ಬರಮಾಡಿಕೊಳ್ಳುತ್ತೇವೆ ಅಂತ ಸಿದ್ದರಾಮನಹುಂಡಿ ನಿವಾಸಿ ಮೋಹನ್‌ ತಿಳಿಸಿದ್ದಾರೆ.