ಸಿಡಿ ಪ್ರಕರಣದ ನ್ಯಾಯಾಂಗ ತನಿಖೆ ಆಗಬೇಕು| ಸದನದಲ್ಲಿಯೇ ಈ ಬಗ್ಗೆ ಒತ್ತಾಯಿಸಿದ್ದೆ| ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವ ಸಂಬಂಧ ಮಾರ್ಗಸೂಚಿ ರೂಪಿಸುವ ಕುರಿತು ರಾಜ್ಯ ಸರ್ಕಾರ ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ| ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರಗಳಿಂದ ಜನರು ಗೊಂದಲಗಳಿಗೆ ಸಿಲುಕುವಂತಾಗಿದೆ: ಸಿದ್ದರಾಮಯ್ಯ| 

ಬೆಂಗಳೂರು(ಏ.05): ಸಿಡಿ ಪ್ರಕರಣದಲ್ಲಿ ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂಬುದನ್ನು ಸದನದಲ್ಲೂ ಪ್ರಸ್ತಾಪಿಸಿದ್ದೆ. ಎಸ್‌ಐಟಿ ತನಿಖೆ ವೇಳೆ ಸರ್ಕಾರ ಹಸ್ತಕ್ಷೇಪ ಮಾಡಬಹುದು ಎಂದು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದೆ. ಆದರೆ, ಸರ್ಕಾರಕ್ಕೆ ನ್ಯಾಯಸಮ್ಮತ ತನಿಖೆಯ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Add Asianetnews Kannada as a Preferred SourcegooglePreferred

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಎಸ್‌ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಹುದೂ ಎಂಬ ಕಾರಣಕ್ಕಾಗಿಯೇ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆ ಎಂದರು. ಇದೇ ವೇಳೆ ಯಡಿಯೂರಪ್ಪ ಅವರ ಬಗ್ಗೆ ಏಕವಚನದಲ್ಲಿ ಸಂಬೋಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂದಿರಾ ಕ್ಯಾಂಟೀನ್‌ ಹಾಗೂ ಅನ್ನಭಾಗ್ಯಕ್ಕೆ ನೀಡುವ ದುಡ್ಡು ಸರ್ಕಾರದ ದುಡ್ಡು. ಯಾರ ಅಪ್ಪನ ಮನೆಯೂ ದುಡ್ಡಲ್ಲ ಎಂದಿದ್ದೇನೆ. ಅಷ್ಟೇ, ಅದು ಬೈದ ಹಾಗಲ್ಲ. ಅದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.

ವಿಶ್ವನಾಥ್ - ಸಿದ್ದರಾಮಯ್ಯ ವಿರುದ್ಧ ಈಗ ಏಕವಚನ ಜಟಾಪಟಿ

ಏಕಪಕ್ಷೀಯ ನಿರ್ಧಾರ:

ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವ ಸಂಬಂಧ ಮಾರ್ಗಸೂಚಿ ರೂಪಿಸುವ ಕುರಿತು ರಾಜ್ಯ ಸರ್ಕಾರವು ವಿರೋಧಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರಗಳಿಂದ ಜನರು ಗೊಂದಲಗಳಿಗೆ ಸಿಲುಕುವಂತಾಗಿದೆ ಎಂದರು.

ರಾಜ್ಯ ಸರ್ಕಾರ ದಿನಕ್ಕೊಂದು ಮಾರ್ಗಸೂಚಿ ಪ್ರಕಟಿಸುತ್ತಿದೆ. ಈವರೆಗೂ ಮಾರ್ಗಸೂಚಿ ರಚನೆ ಸಂಬಂಧ ವಿರೋಧಪಕ್ಷವನ್ನು ಕರೆದು ಮಾತನಾಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕೊರೋನಾ ನಿಯಂತ್ರಣಕ್ಕೆ ಏನೇನು ಮಾಡುತ್ತಿದ್ದೀರಿ ಎಂದು ಮಾಹಿತಿ ಕೇಳಿದ್ದೆ. ಈವರೆಗೂ ಸರ್ಕಾರ ಉತ್ತರ ನೀಡಿಲ್ಲ ಎಂದು ಹೇಳಿದರು.