ಸಿದ್ಧಗಂಗಾ ಶ್ರೀಗಳು ಮಠಕ್ಕೆ ವಾಪಸ್
ಸಿದ್ಧಗಂಗಾ ಶ್ರೀಗಳು ಮಠಕ್ಕೆ ವಾಪಸ್| ನಿನ್ನೆ ನಸುಕಿನ ಜಾವ 3.50ಕ್ಕೆ ಡಿಸ್ಚಾರ್ಜ್| ಮಠದಲ್ಲೇ ಚಿಕಿತ್ಸೆ ಕೃತಕ ಉಸಿರಾಟ ವ್ಯವಸ್ಥೆ
ತುಮಕೂರು[ಜ.17]: ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಬುಧವಾರ ಬೆಳ್ಳಂಬೆಳಗ್ಗೆ 3.50ಕ್ಕೆ ಆಸ್ಪತ್ರೆಯಿಂದ ಡಿಸ್ಚಾಜ್ರ್ ಮಾಡಲಾಯಿತು. ಇದೀಗ ಶ್ರೀಗಳಿಗೆ ಹಳೆ ಮಠದಲ್ಲೇ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಮಠದಲ್ಲೇ ಚಿಕಿತ್ಸೆ ಪಡೆಯುವ ಇಂಗಿತವನ್ನು ಈ ಮೊದಲೇ ಶ್ರೀಗಳು ವ್ಯಕ್ತಪಡಿಸಿದ್ದರು. ಹೀಗಾಗಿ ಸಿದ್ಧಗಂಗಾ ಕಿರಿಯ ಶ್ರೀಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ಸೇರಿ ಶ್ರೀಗಳನ್ನು ಮತ್ತೆ ಮಠಕ್ಕೆ ಕರೆದುಕೊಂಡು ಬರಲು ನಿರ್ಧರಿಸಲಾಯಿತು. ಅದರಂತೆ ಶ್ರೀಗಳನ್ನು ಬುಧವಾರ ಬೆಳಗಿನ ಜಾವ ಮಠಕ್ಕೆ ಕರೆ ತರಲಾಯಿತು.
ಶ್ರೀಗಳ ತಪಾಸಣೆ ಮಾಡಿದ ಬಳಿಕ ಮಾತನಾಡಿದ ಸಿದ್ಧಗಂಗಾ ಆಸ್ಪತ್ರೆ ವೈದ್ಯ ಡಾ. ಪರಮೇಶ್ವರ್ ಅವರು, ಶ್ರೀಗಳಿಗೆ ಕೃತಕವಾಗಿ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ಇಲ್ಲದೆ ಒಂದು ಗಂಟೆ ಉಸಿರಾಡುವ ಶಕ್ತಿ ಬಂದಿದೆ ಎಂದರು. ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ ವೆಂಟಿಲೇಟರ್ ಹಾಕಲಾಗುತ್ತಿದೆ ಎಂದರು.
ಶ್ರೀಗಳ ದೇಹದಲ್ಲಿದ್ದ ಸೋಂಕು ಕಡಿಮೆಯಾಗಿದೆ. ಆದರೆ ದೇಹದಲ್ಲಿ ಶಕ್ತಿ ಇಲ್ಲದ ಕಾರಣ ಜೀರ್ಣಕ್ರಿಯೆ ಸಮರ್ಪಕವಾಗಿ ಆಗುತ್ತಿಲ್ಲ. ಶಕ್ತಿಗಾಗಿ ಪ್ರೋಟಿನ್, ವಿಟಮಿನ್ಸ್ , ಅಲ್ಬಮಿನ್ ಅಗತ್ಯವಿದೆ. ಇದೆಲ್ಲ ಕಡಿಮೆ ಇರುವುದರಿಂದ ಉಸಿರಾಟದ ತೊಂದರೆಯಾಗುತ್ತಿದೆ ಎಂದರು.
ಸದ್ಯಕ್ಕೆ ದ್ರವಾಹಾರ ನೀಡಲಾಗುತ್ತಿಲ್ಲ. ಅವರಿಗೆ ಔಷಧ ಮಾತ್ರ ನೀಡಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಭಕ್ತರು ಪದೇ ಪದೇ ಮಠಕ್ಕೆ ಬರುವುದು ಬೇಡ ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಂದ ಪ್ರಾರ್ಥನೆ:
ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಲಿ ಎಂದು ಮಠದ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡಿದರು.
ಕಿರಿಯ ಶ್ರೀ ಭಾವುಕ
ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಅಲ್ಲದೇ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಮಠದ ಮಕ್ಕಳು ಶ್ರೀಗಳನ್ನು ನೋಡಬೇಕೆಂದು ಬಯಸಿದ್ದಾರೆ. ಅವರಿಗೂ ಸಹ ನೋಡಲು ಅವಕಾಶ ಕಲ್ಪಿಸುತ್ತಿಲ್ಲ ಎಂದು ಭಾವುಕರಾದರು. ಮಠದ ಸಿಬ್ಬಂದಿಗೂ ಶ್ರೀಗಳನ್ನು ನೋಡಲು ಅವಕಾಶ ಕಲ್ಪಿಸಿಲ್ಲ ಎಂದರು. ಸಂಜೆ ನಂತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಬಿಎಸ್ವೈ ವಾಪಸ್: ಇಂದು ಮಠಕ್ಕೆ