ಬೆಂಗಳೂರಿನ ಅಪಾರ್ಟ್​ಮೆಂಟ್​ ಒಂದರ ಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರ ಸೇರಿದಂತೆ ದೇಹದ ಹಲವು ಭಾಗಗಳು ಪತ್ತೆಯಾಗಿವೆ. ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಏನಿದು ಸುದ್ದಿ? 

ಬೆಂಗಳೂರಿನ ಬೇಗೂರಿನಲ್ಲಿ ಇರುವ ಅಪಾರ್ಟ್​​ಮೆಂಟ್​​ವೊಂದರಲ್ಲಿ ಒಳಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರ, ಮೂಳೆ ಸೇರಿದಂತೆ ಹಲವು ಭಾಗಗಳು ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆಗ್ನೇಯ ಬೆಂಗಳೂರಿನ ಎಂಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ನಡೆದಿದೆ. ಶೌಚಗುಂಡಿ ಸ್ವಚ್ಚಗೊಳಿಸುವಾಗ ಕಾರ್ಮಿಕರಿಗೆ ಇವೆಲ್ಲಾ ಸಿಕ್ಕಿದ್ದು, ಅವರು ಒಮ್ಮೆ ಶಾಕ್​ಗೆ ಒಳಗಾಗಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಜೂನ್ 16 ರಂದು ಗುತ್ತಿಗೆ ಕಾರ್ಮಿಕರು ಕಾರು ನಿಲ್ದಾಣದ ಬಳಿಯ ಒಳಚರಂಡಿ ಗುಂಡಿಯನ್ನು ತೆರವುಗೊಳಿಸುತ್ತಿದ್ದಾಗ ಮೂಳೆಗಳು ಕಂಡುಬಂದವು, ಇದರಲ್ಲಿ ತಲೆಬುರುಡೆಯ ತುಣುಕುಗಳು ಸೇರಿವೆ ಎಂದು ಭಾವಿಸಲಾಗಿದೆ. ಅವರು ತಕ್ಷಣ ನಿವಾಸಿಗಳ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಮುಖ್ಯಸ್ಥರಿಗೆ ಮಾಹಿತಿ ನೀಡಿದರು, ನಂತರ ಅವರು ಪೊಲೀಸರನ್ನು ಸಂಪರ್ಕಿಸಿದರು ಎಂದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಕ್ಕ ಅಸ್ತಿಪಂಜರ, ತಲೆಬುರುಡೆ ಹಾಗೂ ಇತರ ಭಾಗಗಳು ಮನುಷ್ಯರದ್ದಾ ಅಥವಾ ಪ್ರಾಣಿಗಳಿದ್ದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನೋಡಲು ಮನುಷ್ಯರ ರೀತಿಯಲ್ಲಿಯೇ ಇದು ಕಾಣಿಸುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಆದರೆ ಈಗಲೇ ಈ ಬಗ್ಗೆ ಹೇಳುವುದು ಕಷ್ವವಾಗಿದ್ದರಿಂದ ಪೊಲೀಸರು ಸದ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದಾರೆ. ವರದಿಯ ಬಳಿಕ ಇದು ಯಾರದ್ದು ಎನ್ನುವ ಸ್ಪಷ್ಪತೆ ಸಿಗಲಿದೆ. ಮೂಳೆಗಳನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಈ ಪರೀಕ್ಷೆಗಳ ಫಲಿತಾಂಶಗಳು ಒಂದು ವಾರದೊಳಗೆ ನಿರೀಕ್ಷಿಸಲಾಗಿದೆ ಎಂದು ಬೇಗೂರು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ‌ 10 ವರ್ಷಗಳ ಹಿಂದೆ ಅಪಾರ್ಟ್​​ಮೆಂಟ್ ನಿರ್ಮಾಣವಾಗುವ‌ ಆ ಜಾಗದ ಬಳಿ ಸ್ಮಶಾನವಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗೆ ಇದ್ದಿರಬಹುದು, ಆದ್ದರಿಂದಲೇ ಇವೆಲ್ಲಾ ಸಿಕ್ಕಿರಬಹುದು ಎಂಬ ವಾದವನ್ನು ಪೊಲೀಸರು ಒಪ್ಪಿಕೊಂಡಿದ್ದರೂ, ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್​ಎಸ್​​ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಸುಮಾರು 45 ಫ್ಲಾಟ್‌ಗಳನ್ನು ಹೊಂದಿರುವ ಮತ್ತು ಹತ್ತು ವರ್ಷಗಳಿಂದ ಜನರು ವಾಸಿಸುತ್ತಿರುವ ಈ ಸಂಕೀರ್ಣದಲ್ಲಿ ಮಳೆನೀರು ನಿರ್ವಹಣಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದ್ದರಿಂದ ಶುಚಿಗಾಗಿ ನಿವಾಸಿಗಳು ಕೋರಿಕೊಂಡಿದ್ದರು. ಈ ಮನವಿ ಮೇರೆಗೆ ಶುಚಿ ಕಾರ್ಯ ಕೈಗೊಂಡಾಗ ಇದು ಬೆಳಕಿಗೆ ಬಂದಿದೆ. ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಅಂತಹ 16 ಹೊಂಡಗಳಿವೆ, ಆದರೆ ಅವಶೇಷಗಳು ಕೇವಲ ಒಂದು ಹೊಂಡದಲ್ಲಿ ಮಾತ್ರ ಕಂಡುಬಂದಿವೆ. ಈ ಅಹಿತಕರ ಘಟನೆಯು ಅನೇಕ ನಿವಾಸಿಗಳಲ್ಲಿ ಸಾಕಷ್ಟು ಆತಂಕವನ್ನುಂಟುಮಾಡಿದೆ. ಬೇಗೂರು ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತ (BNSS), 2023 ರ ಸೆಕ್ಷನ್ 194(3)(iv) ಅಡಿಯಲ್ಲಿ ಈ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ.