ನಿಲ್ದಾಣಕ್ಕೆ ಯಾರ ಹೇಸರಾದರೂ ಇಡಲಿ, ಮೊದಲು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರಿಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರು ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನಾದರೂ ಇಡಲಿ ಆದರೆ, ಇದಕೂ ಮುನ್ನ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ಪರಿಹಾರ ಕೊಡಲಿ ಎಂದು ಕುಟುಕಿದರು.

ಶಿವಮೊಗ್ಗ (ಫೆ.10) : ನಿಲ್ದಾಣಕ್ಕೆ ಯಾರ ಹೇಸರಾದರೂ ಇಡಲಿ, ಮೊದಲು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರಿಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರು ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನಾದರೂ ಇಡಲಿ ಆದರೆ, ಇದಕೂ ಮುನ್ನ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ಪರಿಹಾರ ಕೊಡಲಿ ಎಂದು ಕುಟುಕಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು: ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ವಿಐಎಸ್‌ಎಲ್‌ ಕಾರ್ಖಾನೆ ವಿಚಾರವಾಗಿ ನಾವು ನೀಡಿರುವ ಹೇಳಿಕೆಗೆ ಬದ್ಧರಾಗಿದ್ದೇವೆ. ಈ ಕಾರ್ಖಾನೆಯನ್ನು ಮುಚ್ಚಬಾರದು, ಸರ್ಕಾರವೇ ನಡೆಸಬೇಕು. ಅವರಿಂದ ಸಾಧ್ಯವಾಗದಿದ್ದರೆ, ನಮ್ಮ ಸರ್ಕಾರ ಬಂದು ಆ ಕೆಲಸ ಮಾಡಲಿದೆ. ಬಿಜೆಪಿಯವರು ಖಾಸಗೀಕರಣದ ತೀರ್ಮಾನ ಕೈಬಿಟ್ಟು, ಕೇಂದ್ರ ಸಚಿವರು ಕೊಟ್ಟಮಾತಿನಂತೆ .6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಸಿ, ನಿಗದಿಪಡಿ​ಸಿ​ರುವ ಗಣಿ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಿ ಎಂದರು.

ಯಾವ ತಪ್ಪಿಗೆ ಯಡಿಯೂರಪ್ಪ ಅಧಿಕಾರ ಕಿತ್ತುಕೊಂಡರು?:

ಕಾಂಗ್ರೆಸ್‌ನಲ್ಲಿ ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಆದರೆ, ಅಮಿತ್‌ ಶಾ ಅವರು ಈ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದರು. ಇತ್ತೀಚೆಗೆ ಪ್ರಧಾನಿ ನರೇದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದಾರೆ. ಬಿಜೆಪಿಯವರು ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕಿಸಿ, ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ? ಈ ಬಗ್ಗೆ ಮೊದಲು ಅವರು ಉತ್ತರ ನೀಡಲಿ. ಅವರಿಗೆ 75 ವರ್ಷ ದಾಟಿದ್ದರೂ ಅವರ ಮುಖಂಡತ್ವದಲ್ಲಿ ಚುನಾವಣೆ ಮಾಡಿ, ನಂತರ ಆಪರೇಷನ್‌ ಕಮಲಕ್ಕೆ ಅವಕಾಶ ನೀಡಿ, ಸರ್ಕಾರ ರಚನೆ ಮಾಡಿಸಿ ಕೊನೆಗೆ ಅವರಿಂದ ಅಧಿಕಾರ ಕಿತ್ತುಕೊಂಡಿರಿ? ಅವರ ಮೇಲೆ ಭ್ರಷ್ಟಾಚಾರದ ಆರೋಪ ಇತ್ತಾ? ವೈಯಕ್ತಿಕ ಕಾರಣನಾ ಎಂಬುದನ್ನು ಜನರಿಗೆ ಮಾಹಿತಿ ನೀಡಿ ಎಂದು ಕುಟುಕಿದರು.

ವಾರದಲ್ಲಿ ಟಿಕೆಟ್‌ ಘೋಷಣೆ:

ಶಿವಮೊಗ್ಗ ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿಯ ಟಿಕೆಟ್‌ಗೆ ಸಂಬಂಧಿಸಿದಂತೆ ಇನ್ನೊಂದು ವಾರದೊಳಗೆ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಶಿವಮೊಗ್ಗದ 2 ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿದ್ದೇನೆ. ಎರಡೂ ಕ್ಷೇತ್ರದಲ್ಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಭ್ರಷ್ಟಬಿಜೆಪಿ ಸರ್ಕಾರವನ್ನು ಕಿತ್ತುಹಾಕುವುದೇ ಕಾಂಗ್ರೆಸ್‌ನ ಗುರಿಯಾಗಿದೆ. ಮಲೆನಾಡು ಭಾಗದಲ್ಲಿ ಹಲವು ಸಮಸ್ಯೆಗಳಿವೆ. ಶರಾವತಿ ಸಂತ್ರಸ್ತರ ಸಮಸ್ಯೆ, ಬಗರ್‌ಹುಕುಂ ಸಮಸ್ಯೆ ಹೀಗೆ ಎಲ್ಲಾ ಸಮಸ್ಯೆಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿವಾರಿಸುತ್ತೇವೆ. ಈ ಬಗ್ಗೆ ಪ್ರನಾಳಿಕೆಯಲ್ಲೂ ಕಾಂಗ್ರೆಸ್‌ ಪ್ರಕಟಿಸುತ್ತದೆ ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್‌ ನಾಯಕರಾದ ಕೆ.ಬಿ.ಪ್ರಸನ್ನಕುಮಾರ್‌, ಆರ್‌.ಎಂ.ಮಂಜುನಾಥ್‌ ಗೌಡ, ರವಿಕುಮಾರ್‌, ಬೇಳೂರು ಗೋಪಾಲಕೃಷ್ಣ, ಶಾಂತವೀರಗೌಡ ಮತ್ತಿತರರು ಇದ್ದರು.

ಸಿಬಿಐಗೆ ಪತ್ರ ಬರೆದು ಸಲಹೆ ನೀಡಬೇಕು ಎಂದುಕೊಂಡಿದ್ದೇನೆ?

ಯಂಗ್‌ ಇಂಡಿಯಾಗೆ ದೇಣಿಗೆ ನೀಡಿದ ವಿಚಾರವಾಗಿ ನಾವು ಈ ಹಿಂದೆ ಇ.ಡಿ. ಅಧಿಕಾರಿಗಳಿಗೆ ಉತ್ತರ ನೀಡಿ ಬಂದಿದ್ದೇವೆ. ಆದರೂ ಈಗ ಮತ್ತೆ ವಿಚಾರಣೆಗೆ ನೋಟಿಸ್‌ ನೀಡಿದ್ದಾರೆ. ಇನ್ನು ಸಿಬಿಐ ಮೂಲಕ ಮಗಳ ಕಾಲೇಜಿನ ಶುಲ್ಕದ ಬಗ್ಗೆ ವಿಚಾರಣೆಗೆ ಮುಂದಾಗಿದ್ದಾರೆ. ಅವರ ಮುಂದೆ ಬಹಳ ದೊಡ್ಡ ಕೆಲಸಗಳಿವೆ. ಅವುಗಳನ್ನು ಮಾಡುವುದನ್ನು ಬಿಟ್ಟು ಮಗಳ ಕಾಲೇಜಿನ ಶುಲ್ಕ ಪಾವತಿ ವಿಚಾರವಾಗಿ ತನಿಖೆ ಮಾಡುತ್ತಿದ್ದಾರೆ. ನಮ್ಮ ಮಕ್ಕಳ ಫೀಸ್‌ ಕಟ್ಟುವುದಕ್ಕೂ ಅಡ್ವೈಸ್‌ ಮಾಡುತ್ತಾರೆಂದರೆ, ಈ ಬಗ್ಗೆ ಸಿಬಿಐಗೆ ಪತ್ರ ಬರೆದು ನಿಮಗೆ ಬೇಕಾದಷ್ಟುಕೆಲಸ ಇದೆ. ಅದನ್ನು ಮಾಡಿ, ತೀರ ಸಣ್ಣಮಟ್ಟದ ತನಿಖೆ ಮಾಡಬೇಡಿ ಎಂದು ಸಲಹೆ ನೀಡಬೇಕು ಎಂದುಕೊಂಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

Shivamogga: ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಿಎಂ ಬೊಮ್ಮಾಯಿ

ಜಾರಕಿಹೊಳಿ ಮೆಂಟಲ್‌ ಬ್ಯಾಲೆನ್ಸ್‌ ಕಡಿಮೆಯಾಗಿದೆ

ರಮೇಶ್‌ ಜಾರಕಿಹೊಳಿ ವಿಚಾರವಾಗಿ ಮಾತನಾಡುವುದಿಲ್ಲ. ಅವರ ಬೇಡಿಕೆ ಏನಿದೆ ಅದನ್ನು ಈಡೇರಿಸಲಿ. ಆದರೆ, ಕೋರ್ಚ್‌ನಲ್ಲಿ ಅಫಿಡವಿಟ್‌ ಯಾಕೆ ಹಾಕಿದ್ದಾರೆ? ಅವರು ಯಾವ ಮನವಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಿ. ಮಂತ್ರಿ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಈಶ್ವರಪ್ಪ ಪೇಚಾಡುತ್ತಿದ್ದಾರೆ. ರಮೇಶ್‌ ಜಾರಕಿಹೊಳಿಗೆ ಮೆಂಟಲ್‌ ಬ್ಯಾಲೆನ್ಸ್‌ ಕಡಿಮೆಯಾಗಿ ಈ ರೀತಿ ಮಾತಾಡುತ್ತಿದ್ದಾರೆ. ಆರೋಗ್ಯ ಸಚಿವರಿಗೆ ಶಿಫಾರಸು ಮಾಡಿ ಚಿಕಿತ್ಸೆ ಕೊಡಿಸಲಿ. ಕೆಲವರು ನನ್ನ ಬಗ್ಗೆ ಮಾತನಾಡಿದರೆ ಮಾತ್ರ ಅವರ ಪಕ್ಷದಲ್ಲಿ ಮಾರ್ಕೆಟ್‌ ಇರುತ್ತದೆ. ಇಲ್ಲದಿದ್ದರೆ ಅವರ ಪಕ್ಷದಲ್ಲೇ ಅವರನ್ನು ಮಾತನಾಡಿಸುವುದಿಲ್ಲ ಎಂದು ಡಿ.ಕೆ.​ಶಿ​ವ​ಕು​ಮಾರ್‌ ಟೀಕಿಸಿದರು.