ಜಾತ್ಯತೀತ ಮನಸ್ಥಿತಿಯನ್ನು ಕೈ ಬಿಟ್ಟಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಗೌರಿಗದ್ದೆ ವಿನಯ್ ಗುರೂಜಿ ಕರೆ ನೀಡಿದ್ದಾರೆ. 

ಬೆಂಗಳೂರು [ಸೆ.16]:  ಜಾತಿ ಆಧಾರದಡಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವ ಜನರ ಮನಸ್ಥಿತಿ ಬದಲಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಗೌರಿಗದ್ದೆ ಗಾಂಧಿ ಸೇವಾ ಟ್ರಸ್ಟ್‌ ಸಂಸ್ಥಾಪಕ ವಿನಯ್‌ ಗುರೂಜಿ ಹೇಳಿದರು.

Add Asianetnews Kannada as a Preferred SourcegooglePreferred

‘ಗೌತಮ ಬುದ್ಧ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌’ ಮಲ್ಲತ್ತಹಳ್ಳಿಯ ಕನ್ಯಾಕುಮಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ‘ಸಿದ್ಧಗಂಗಾ ಶ್ರೀ’ ಪ್ರಶಸ್ತಿ ಪ್ರದಾನ, ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್ಸ್ ಪುಸ್ತಕ ಬಿಡುಗಡೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನ ಪ್ರತಿಯೊಬ್ಬರ ಏಳಿಗೆ ಬಯಸುವ ಜನಪ್ರತಿನಿಧಿಗಳನ್ನು ಜನರೇ ಜಾತಿ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ. ಆದರೆ ಆಯ್ಕೆಯಾದವರು ಶಾಶ್ವತವಲ್ಲದ ಅಧಿಕಾರಕ್ಕೆ ಒಳಗಾಗಿ ಜನರ ಅಭಿವೃದ್ಧಿಯನ್ನು ಮರೆಯುತ್ತಾರೆ. ಆದ್ದರಿಂದ ಜಾತ್ಯತೀತವಾಗಿ ನಾಯಕರನ್ನು ಆಯ್ಕೆ ಮಾಡಿ, ಸಾಮಾಜಿಕ ಸೇವೆ, ಅಭಿವೃದ್ಧಿ ಮುಖ್ಯ ಎಂದು ಸಾರಬೇಕು. ಅದಕ್ಕಾಗಿ ನಮ್ಮ ಜಾತೀಯತೆಯ ಮನಸ್ಸನ್ನು ಬದಲಿಸಿಕೊಳ್ಳಬೇಕು ಎಂದರು.

ಮನುಷ್ಯನಲ್ಲಿ ಜಾತಿ, ಆಸೆ, ಅಹಂಕಾರ, ಅಂಧಕಾರ, ಬೇಧ-ಭಾವ ಸಹಜ. ಅವುಗಳನ್ನು ಪ್ರಾರ್ಥನೆ ಮೂಲಕ ತೊಡೆದು ಹಾಕಬೇಕಿದೆ. ಅಂಧಕಾರದಲ್ಲಿ ಮುಳುಗಿರುವವರು ನೆಚ್ಚಿನ ನಟರ ಹೆಸರಿನಲ್ಲಿ ಹಾಲಿನಭಿಷೇಕ ಮಾಡುತ್ತಾರೆ ಹೊರತು ವೃದ್ಧರಿಗೆ, ಮಕ್ಕಳಿಗೆ ಬಟ್ಟೆ, ಊಟ ಕೊಡುವುದಿಲ್ಲ. ಗಿಡ ನೆಡುವುದಿಲ್ಲ. ರಕ್ತದಾನ, ನೇತ್ರದಾನ, ನದಿ ಸ್ವಚ್ಛತೆಯಂತಹ ಕಾರ್ಯ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣರೆಡ್ಡಿ, ಸುದ್ದಿ ನಿರೂಪಕ ಮಾಲತೇಶ್‌, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೋಮಶೇಖರ್‌, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವೇಣುಗೋಪಾಲ್‌ ಸೇರಿದಂತೆ 17 ಸಾಧಕರಿಗೆ ‘ಸಿದ್ಧಗಂಗಾ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. 86 ಸಾಧಕರ ಮಾಹಿತಿ ಹೊತ್ತ ‘ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್ಸ್’ ಪುಸ್ತಕ ಬಿಡುಗಡೆ ಮಾಡಲಾಯಿತು. ಪೌರ ಕಾರ್ಮಿಕರಿಗೆ ಸೀರೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಮ, ಜಾಗ್ವಾರ್‌ ಗ್ರೂಪ್‌ ಆಫ್‌ ಕಂಪನಿ ಮಾಲೀಕ ಕೆ.ಜಿ.ಮನೋಹರ್‌, ಟ್ರಸ್ಟ್‌ ಅಧ್ಯಕ್ಷ ಪಿ.ಜೆ. ಗೌತಮ್‌ ವರ್ಮ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಬೇಳೂರು ರಾಘವೇಂದ್ರಶೆಟ್ಟಿಮತ್ತಿತರು ಪಾಲ್ಗೊಂಡಿದ್ದರು.