ಕಾಫಿನಾಡಾದ ಚಿಕ್ಕಮಗಳೂರಿನಲ್ಲಿ ಸೋಮವಾರ(ಜೂ.29)ದಂದು 17 ಮಂದಿಯಲ್ಲಿ ಕೊರೋನಾ ಸೋಂಕಿರುವುದು ಪತ್ತೆಯಾಗಿದ್ದು, ಈ ಪೈಕಿ ಒಂದೇ ಕುಟುಂಬದ 8 ಮಂದಿಗೆ ಕೋವಿಡ್‌ ತಗುಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಜೂ.30): ಜಿಲ್ಲೆಯ ಪಾಲಿಗೆ ಸೋಮವಾರ ಬ್ಯಾಡ್‌ ಡೇ. ಕಾರಣ, ಇದೇ ಮೊದಲ ಬಾರಿಗೆ ಕೋವಿಡ್‌ ಸೋಂಕಿತರ ಸಂಖ್ಯೆ ಎರಡಂಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಸೋಮವಾರ ಜಿಲ್ಲೆಯಲ್ಲಿ 17 ಮಂದಿಯಲ್ಲಿ ಕೊರೋನಾ ಸೋಂಕಿರುವುದು ಪತ್ತೆಯಾಗಿದ್ದು, ಈ ಪೈಕಿ ಒಂದೇ ಕುಟುಂಬದ 8 ಮಂದಿಗೆ ಕೋವಿಡ್‌ ತಗುಲಿದೆ. ಅಂದರೆ, ಭದ್ರಾವತಿಯಿಂದ ಓರ್ವ ಸೋಂಕಿತ ವ್ಯಕ್ತಿ ಅಜ್ಜಂಪುರ ತಾಲೂಕಿನ ಶಿವನಿಯ ಮನೆಯೊಂದಕ್ಕೆ ಬಂದು ಹೋಗಿದ್ದು, ಈ ಮನೆಯ ಎಲ್ಲರಿಗೂ ಸೋಂಕು ತಗುಲಿದೆ.

ತರೀಕೆರೆ ತಾಲೂಕಿನಲ್ಲಿ 6, ಚಿಕ್ಕಮಗಳೂರು ತಾಲೂಕಲ್ಲಿ 2 ಹಾಗೂ ಕಡೂರು ತಾಲೂಕಿನಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದ್ದು, ಬಯಲುಸೀಮೆಯ ಪಾಲಿಗೆ ಇದೊಂದು ಕೆಟ್ಟದಿನ. ಆದರೆ, ಇನ್ನೊಂದು ಸಮಧಾನಕರ ವಿಷಯವೆಂದರೆ ಕೊರೋನಾ ಸೋಂಕಿನಿಂದ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ಮಂದಿಯಲ್ಲಿ ಸೋಮವಾರ 8 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗಳಿಗೆ ತೆರಳಿದ್ದಾರೆ.

ಕಡೂರು ಪಟ್ಟಣಕ್ಕೂ ಕಾಲಿಟ್ಟ ಕೊರೋನಾ ವೈರಸ್‌

ಸೋಮವಾರ ಪತ್ತೆಯಾಗಿರುವ 17 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸದ್ಯ 34 ಕೋವಿಡ್‌ ಸಕ್ರಿಯ ಪ್ರಕರಣಗಳು ಇವೆ. ದಿನೇ ದಿನೇ ಕೊವೀಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ. ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯವಾಗಿ ಧರಿಸುವುದು ಪಾಲನೆ ಮಾಡುತ್ತಿದ್ದಾರೆ.