Asianet Suvarna News Asianet Suvarna News

ಕಡೂರು ಪಟ್ಟಣಕ್ಕೂ ಕಾಲಿಟ್ಟ ಕೊರೋನಾ ವೈರಸ್‌

ಕೊರೋನಾ ಸೋಂಕು ಇದೀಗ ಕಡೂರಿಗೂ ಲಗ್ಗೆಯಿಟ್ಟಿದೆ. ಪಟ್ಟಣದ ಇಬ್ಬರು ಸೇರಿದಂತೆ ಮೂರು ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Coronavirus Enters Kadur city Chikkamagaluru on June 29
Author
Kadur, First Published Jun 30, 2020, 9:43 AM IST

ಕಡೂರು(ಜೂ.30): ಕೊರೋನಾ ವೈರಸ್‌ ಹೆಮ್ಮಾರಿ ಕಡೂರು ಪಟ್ಟಣಕ್ಕೂ ಕಾಲಿಟ್ಟಿದೆ. ಪಟ್ಟಣದ ಇಬ್ಬರು ಮತ್ತು ಗ್ರಾಮೀಣ ಪ್ರದೇಶದ ಒಬ್ಬರಲ್ಲಿ ವೈರಸ್‌ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳು ಬೆಂಗಳೂರು ಪ್ರಯಾಣಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ.

ಮೊದಲನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಕರ್ತವ್ಯ ನಿರ್ವಹಿಸುತ್ತಿದ್ದ ಕಲ್ಗುಂಡಿ ಪ್ರದೇಶದ ನಿವಾಸಿಯಾಗಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ವರದಿ ಬಂದಿದೆ. ಕಾರ್ಯ ನಿಮಿತ್ತ ಶಿಕ್ಷಕರು ಕಳೆದ ವಾರ ಬೆಂಗಳೂರಿಗೆ ತೆರಳಿ ವಾಪಸು ಕಡೂರಿಗೆ ಬಂದಿದ್ದರು. ಈ ಸಂದರ್ಭ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಎರಡು ದಿನದ ಹಿಂದೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅನಂತರ ಪಾಸಿಟಿವ್‌ ವರದಿ ಬಂದಿದೆ ಎನ್ನಲಾಗಿದೆ. ಅವರನು ಶಿವಮೊಗ್ಗದ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ತಾಲೂಕು ಆಡಳಿತ ಶಿಕ್ಷಕರ ಮನೆ ಇರುವ ಕಲ್ಗುಂಡಿ ಪ್ರದೇಶದ ಮೂರು ರಸ್ತೆಗಳನ್ನು ಸೀಲ್‌ ಮಾಡಿ ಬಂದ್‌ ಮಾಡಲಾಗಿದೆ.

ಪಟ್ಟಣದ ಬಸ್‌ ಸ್ಟ್ಯಾಂಡ್‌ ರಸ್ತೆಯಲ್ಲಿ ಫ್ಯಾನ್ಸಿ ಸ್ಟೋರ್‌ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ಅಂಗಡಿಗೆ ಮಾರಾಟದ ಸಾಮಗ್ರಿಗಳನ್ನು ಖರೀದಿಸಿ ವಾಪಾಸು ಬಂದಿದ್ದರು. ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ವಾಸದ ಮನೆ ಇರುವ ಕೆ.ಎಂ. ರಸ್ತೆಯ ಕಾಫಿ ಕ್ಯೂರಿಂಗ್‌ ಪ್ರದೇಶವನ್ನು ಸೀಲ್‌ಡೌನ್‌ ಮಾಡಿ ಸೋಂಕಿತ ವ್ಯಕ್ತಿಯನ್ನು ಚಿಕ್ಕಮಗಳೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದಲ್ಲಿ 150ರ ಗಡಿದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!

ಇನ್ನು ಬೆಂಗಳೂರಿನ ಆರ್‌.ಎಂ.ಸಿ.ಯಲ್ಲಿ ಮಂಡಿ ವ್ಯಾಪಾರ ಮಾಡುತ್ತಿದ್ದ ತಾಲೂಕಿನ ಪಂಚನಹಳ್ಳಿ ಗಡಿಭಾಗ ತಿಮ್ಮಲಾಪುರ (ನಾರಾಯಣಗೌಡನ ಕೊಪ್ಪಲು) ಗ್ರಾಮದ ವ್ಯಕ್ತಿಗೆ ಸೋಂಕು ತಗುಲಿದೆ. ತೀವ್ರಜ್ವರ ಹಿನ್ನೆಲೆ ಪತ್ನಿ ಊರಾದ ತಿಮ್ಲಾಪುರಕ್ಕೆ ಕೆಲ ದಿನಗಳ ಹಿಂದೆ ಬಂದಿದ್ದರೆನ್ನಲಾಗಿದೆ. ಆದರೆ, ಆತ ಊರ ಹೊರಗಿನ ಮಾವನ ಮನೆಯಲ್ಲಿ ತಂಗುತ್ತಿದೆ. ಹೆಚ್ಚಾದ ಜ್ವರದ ಪರೀಕ್ಷೆಯಿಂದ ಪಾಸಿಟಿವ್‌ ಬಂದಿದೆ. ಆತನನ್ನು ಹಾಸನದ ಕೋವಿದ್‌-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ಮತ್ತು ಆರೋಗ್ಯ ಇಲಾಖೆಯು ಮೂವರು ಸೋಂಕಿತರ ಮನೆಯ ರಸ್ತೆಗಳನ್ನು ಸೀಲ್‌ಡೌನ್‌ ಮಾಡಿ ಸೋಂಕಿತ ಹಿನ್ನೆಲೆ ಪತ್ತೆಯಲ್ಲಿ ತೊಡಗಿದ್ದಾರೆ.

ಆತಂಕದಲ್ಲಿ ಜನತೆ:

ನೆಮ್ಮದಿಯಾಗಿದ್ದ ತಾಲೂಕಿನಲ್ಲಿ ಈಗ 3 ಕೊರೋನಾ ಸೋಂಕಿತ ಪ್ರಕರಣಗಳು ಜನರನ್ನು ತೀವ್ರ ಆತಂಕಕ್ಕೆ ನೂಕಿವೆ. ಒಂದೂವರೆ ತಿಂಗಳ ಹಿಂದೆ ಪಟ್ಟಣದ ಜೈನ್‌ ಟೆಂಪಲ್‌ ರಸ್ತೆಯಲ್ಲಿ ಮುಂಬೈ ಮೂಲದ ಮಹಿಳೆಗೆ ಸೋಂಕು ತಗಲಿದೆ ಎಂಬ ಹಿನ್ನೆಲೆ ಅವರ ವರದಿ ನೆಗೆಟಿವ್‌ ಬರುವವರೆಗೂ ಆತಂಕ ಕಾಡಿತ್ತು. ಅಲ್ಲದೆ, ಮೊನ್ನೆಯಷ್ಟೇ ತಾಲೂಕಿನ ಕೆ. ದಾಸರಹಳ್ಳಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಪ್ರಕರಣವೂ ಆತಂಕ ತಂದಿತ್ತು. ಅನಂತರ ವರದಿ ನೆಗೆಟೀವ್‌ ಬಂದಿದ್ದರಿಂದ ಜನರು ನಿರಾಳರಾಗಿದ್ದರು. ಆದರೆ ಈಗ ಮತ್ತೆ 3 ಹೊಸ ಪ್ರಕರಣಗಳು ತಾಲೂಕಿನ ಜನರನ್ನು ಮತ್ತಷ್ಟುಭಯಕ್ಕೆ ಈಡುಮಾಡಿವೆ.

ಸದ್ಯಕ್ಕೆ ತಾಲೂಕು ಆಡಳಿತ ಯು.ಬಿ. ರಸ್ತೆಯ ಸಮತಾ ಭವನದ ರಸ್ತೆ, ವೆಂಕಟೇಶ್ವರ ನಗರ, ಕಾಫಿ ಕ್ಯೂರಿಂಗ್‌ ಬಡಾವಣೆಗಳು, ಸೋಂಕಿತರ ಮನೆಗಳ ಬೀದಿಗಳು ಮತ್ತು ಕೆಲಸ ಮಾಡುವ ಶಾಲೆ ಹಾಗೂ ಅಂಗಡಿ ಮತ್ತಿತರ ಕಡೆಗಳಲ್ಲಿ ಬಂದ್‌ ಮಾಡುವ ಜೊತೆ ರಾಸಾಯನಿಕ ದ್ರಾವಣ ಸಿಂಪಡಿಸುತ್ತಿದೆ. ಜನರು ಅನವಶ್ಯಕವಾಗಿ ಹೊರಗೆ ಬಾರದೇ ಮತ್ತು ತಿರುಗಾಡದಂತೆ ಎಚ್ಚರಿಕೆ ನೀಡಿದೆ.

ಕಾಫಿ ಕ್ಯೂರಿಂಗ್‌ ಪ್ರದೇಶದ ವ್ಯಕ್ತಿಗೆ ಸೋಂಕಿತ ವ್ಯಕ್ತಿಯ ಅಕ್ಕಪಕ್ಕದ ನಿವಾಸಿಗರನ್ನು ತಾತ್ಕಾಲಿಕವಾಗಿ ಸರಸ್ವತಿಪುರ ದ ಗಿರಿಜನ ಆಶ್ರಮ ಶಾಲೆಯ ಹಾಸ್ಟೆಲ್‌ಗೆ ಕ್ವಾರಂಟೈನ್‌ ಮಾಡಲಾಗಿದೆ. ಶಿಕ್ಷಕರ ಪತ್ನಿ ಮತ್ತು ಇಬ್ಬರು ಮಕ್ಕಳ ಗಂಟಲು ದ್ರವವನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗಿದೆ - ಡಾ.ರವಿಕುಮಾರ್‌, ತಾಲೂಕು ವೈದ್ಯಾಧಿಕಾರಿ
 

Follow Us:
Download App:
  • android
  • ios