Asianet Suvarna News Asianet Suvarna News

ಸಾಗರ ಪರಿಕ್ರಮ ಕಾರ್ಯಕ್ರಮ: ಮೀನುಗಾರರಲ್ಲಿ ಭರವಸೆ ಮೂಡಿಸಿದ ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲ

ಜಿಲ್ಲೆಯ ಕಾರವಾರದಲ್ಲಿಂದು ಕೇಂದ್ರ ಸರ್ಕಾರದ ಸಾಗರ ಪರಿಕ್ರಮ ಕಾರ್ಯಕ್ರಮ ನಡೆಯಿತು. ನಗರದ ಜಿಲ್ಲಾರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಾಗರ ಪರಿಕ್ರಮ ಹಂತ-4 ಕಾರ್ಯಕ್ರಮವನ್ನು ಕೇಂದ್ರ ಮೀನುಗಾರಿಕೆ, ಪಶುಪಾಲನೆ ಹಾಗೂ ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 

Sagar Parikrama Program Union Minister Parshottam Rupala has given hope to fishermen gvd
Author
First Published Mar 18, 2023, 11:40 PM IST

ಭರತ್‌ರಾಜ್ ಕಲ್ಲಡ್ಕ‌, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಮಂಗಳೂರು (ಮಾ.18): ಜಿಲ್ಲೆಯ ಕಾರವಾರದಲ್ಲಿಂದು ಕೇಂದ್ರ ಸರ್ಕಾರದ ಸಾಗರ ಪರಿಕ್ರಮ ಕಾರ್ಯಕ್ರಮ ನಡೆಯಿತು. ನಗರದ ಜಿಲ್ಲಾರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಾಗರ ಪರಿಕ್ರಮ ಹಂತ-4 ಕಾರ್ಯಕ್ರಮವನ್ನು ಕೇಂದ್ರ ಮೀನುಗಾರಿಕೆ, ಪಶುಪಾಲನೆ ಹಾಗೂ ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮೀನುಗಾರರು ಹಾಗೂ ಮೀನುಗಾರಿಕಾ ಉದ್ಯಮದ ಪೂರಕವಾಗಿ ಕಾರ್ಯನಿರ್ವಹಿಸುವ ಮಧ್ಯಸ್ಥಗಾರರೊಂದಿಗೆ ಉತ್ತಮ ಬಾಂಧವ್ಯ ಮೂಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದೆ. 

ಕಾರ್ಯಕ್ರಮದಲ್ಲಿ ಮೀನುಗಾರರಿಗೆ ಕೇಂದ್ರ ಸರ್ಕಾರದಿಂದ ಜಾರಿಯಲ್ಲಿರುವ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ್, ಸ್ಥಳೀಯವಾಗಿ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಿಆರ್‌ಝೆಡ್ ನಿಯಮದ ಕಾರಣಕ್ಕೆ ಕಡಲತೀರದಲ್ಲಿ ಜೀವನ ನಡೆಸುವ ಮೀನುಗಾರರು ಸ್ವಂತ ಮನೆ ಕಟ್ಟಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಕೇಂದ್ರ ಸರ್ಕಾರದ ನೆರವಿನಿಂದ ಮನೆ ಕೊಡಿಸುವ ಪ್ರಯತ್ನವಾಗಬೇಕು ಎಂದರು. ಇನ್ನು ಸಾಗರಮಾಲಾ ಯೋಜನೆಯಡಿ ಕಡಲತೀರದಲ್ಲಿ ಬ್ರೇಕ್ ವಾಟರ್ ನಿರ್ಮಾಣಕ್ಕೆ ಹಾಕಲಾಗುತ್ತಿರುವ ಕಲ್ಲು ಬಂಡೆಗಳಿಂದಾಗಿ ಮೀನುಗಾರರನ್ನು ಒಕ್ಕಲೆಬ್ಬಿಸುವ ಆತಂಕ ಎದುರಾಗಿದ್ದು, ಈ ಕುರಿತು ಗಮನಹರಿಸುವಂತೆ ಮನವಿ ಮಾಡಿದರು. 

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾ​ರ​ಸ್ವಾಮಿ ಟೀಕೆ

ಅಲ್ಲದೇ, ಮಾಜಾಳಿಯಲ್ಲಿ ಮಹತ್ವಾಕಾಂಕ್ಷೆಯ ಮೀನುಗಾರಿಕಾ ಬಂದರು ನಿರ್ಮಾಣ ಈ ಅವಧಿಯಲ್ಲಿ ಸಾಕಾರಗೊಳ್ಳುತ್ತಿದ್ದು, ಬಂದರು ನಿರ್ಮಾಣದಿಂದ ಸ್ಥಳೀಯ ಮೀನುಗಾರರು ಆರ್ಥಿಕವಾಗಿ ಸದೃಢರಾಗಲಿದ್ದಾರೆ. ಆದರೆ, ಇದರಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡ್ಡಿಯಾಗುವ ಆತಂಕದಿಂದ ಕೆಲವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಮೀನುಗಾರರಿಗೆ ಸೂಕ್ತ ಮಾಹಿತಿ ಒದಗಿಸಿಕೊಡುವಂತೆ ಮನವಿ ಮಾಡಿದರು. ಕೋಸ್ಟ್‌ಗಾರ್ಡ್ ಹಾಗೂ ನೌಕಾನೆಲೆ ಸಿಬ್ಬಂದಿ ಮೀನುಗಾರರಿಗೆ ಕಿರುಕುಳ ನೀಡುತ್ತಿರುವ ಹಲವಾರು ಘಟನೆಗಳು ವರದಿಯಾಗುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಗಮನಹರಿಸಿ ಸೂಕ್ತ ನೆರವು ನೀಡುವಂತೆ ಶಾಸಕಿ ಮನವಿ ಮಾಡಿದರು.

ಇನ್ನು ಈ ಬಳಿಕ ಮಾತನಾಡಿದ ಕೇಂದ್ರ ಸಚಿವ ಪುರುಷೋತ್ತಮ್ ರೂಪಲಾ ಕನ್ನಡದಲ್ಲಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ಎಲ್ಲರೂ ಹೇಗಿದ್ದೀರಿ ಎಂದು ಮಾತು ಆರಂಭಿಸಿದ್ದು, ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ಅಚ್ಚರಿಗೊಳಿಸಿತು. ದೇಶದಲ್ಲಿ ಸರ್ಕಾರದಿಂದ ಕೃಷಿಕರಿಗೆ ಯಾವ ರೀತಿಯಲ್ಲಿ ಯೋಜನೆಗಳ ಸೌಲಭ್ಯಗಳು ಲಭ್ಯವಾಗುತ್ತವೆಯೋ, ಅದೇ ರೀತಿ ಮೀನುಗಾರರಿಗೂ ಸೂಕ್ತ ಸೌಲಭ್ಯಗಳು ತಲುಪಬೇಕು ಎನ್ನುವ ಉದ್ದೇಶದಿಂದ ಸಾಗರ ಪರಿಕ್ರಮ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರಮೋದಿ ಆರಂಭಿಸಿದ್ದಾರೆ ಎಂದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಮೀನುಗಾರಿಕಾ ವಲಯಕ್ಕೆ ಸರ್ಕಾರಗಳು 3760 ಕೋಟಿ ರೂಪಾಯಿಗಳನ್ನ ಖರ್ಚು ಮಾಡಿದ್ದವು. 

ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಸರ್ಕಾರ ಬದ್ಧ: ಶೋಭಾ ಕರಂದ್ಲಾಜೆ

ಇದೀಗ ಕೇಂದ್ರ ಸರ್ಕಾರವು ಮೀನುಗಾರಿಕಾ ಇಲಾಖೆಯನ್ನು ಪ್ರತ್ಯೇಕಗೊಳಿಸಿದ ಬಳಿಕ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಗಾಗಿಯೇ 20 ಸಾವಿರ ಕೋಟಿ ರೂಪಾಯಿಗಳನ್ನ ವ್ಯಯಿಸಲಾಗಿದೆ. ಇದರೊಂದಿಗೆ ಮೂಲಭೂತ ಸೌಕರ್ಯಗಳ ಒದಗಿಸಲು ಬಜೆಟ್‌ನಲ್ಲಿ 8 ಸಾವಿರ ಕೋಟಿ ರೂಪಾಯಿಗಳನ್ನ ಇರಿಸಲಾಗಿದೆ. ಅಲ್ಲದೇ, ಇದೇ ವರ್ಷದ ಬಜೆಟ್‌ನಲ್ಲಿ ಮೀನುಗಾರಿಕೆಯ ನೂತನ ಯೋಜನೆಗಾಗಿ 6 ಸಾವಿರ ಕೋಟಿ ರೂಪಾಯಿಗಳನ್ನು ಪ್ರಧಾನಿ ಮೋದಿ ಇರಿಸಿದ್ದಾಗಿ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರ ಮೀನುಗಾರಿಕೆ ಅಭಿವೃದ್ಧಿಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ತೋರಿಸಿಕೊಡುತ್ತದೆ ಎಂದರು. ದೇಶದಲ್ಲಿ ಕೇವಲ ಕೃಷಿಕರಿಗಾಗಿ ಘೋಷಿಸಲಾಗಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಧಾನಿ ಮೋದಿ ಮೀನುಗಾರರಿಗೂ ಸಹ ವಿಸ್ತರಿಸಿದ್ದು, ಈ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಮೀನುಗಾರರಿಗೆ ತಲುಪುತ್ತಿರುವುದರ ಪರಿಶೀಲನೆಗಾಗಿಯೇ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.  

Follow Us:
Download App:
  • android
  • ios