ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರದಲ್ಲಿ ಅವ್ಯವಹಾರ: ಸರ್ಕಾರದ ಬೊಕ್ಕಸಕ್ಕೆ ನಷ್ಟ, ಹಿರೇಮಠ
ಸಾಕ್ಷ್ಯಚಿತ್ರದ ಹಿಂದಿರುವ ಅವ್ಯವಹಾರದ ಬಗ್ಗೆ ಈಗಾಗಲೇ ಸಿಟಿಜನ್ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ, ಜನ ಸಂಗ್ರಾಮ ಪರಿಷತ್ನಿಂದ ಮುಖ್ಯಮಂತ್ರಿ, ಕಾನೂನು ಸಚಿವರು, ಮುಖ್ಯಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಮಗ್ರ ವರದಿ ಜತೆಗೆ ಏಳು ಪುಟಗಳ ಪತ್ರವನ್ನು ಬರೆದು ಸ್ವತಂತ್ರ ತನಿಖೆಗೆ ಒತ್ತಾಯಿಸಲಾಗಿದೆ: ಎಸ್ ಆರ್ ಹಿರೇಮಠ
ಹುಬ್ಬಳ್ಳಿ(ಜೂ.15): ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಾಣದ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರರು ಸೇರಿ ಅವ್ಯವಹಾರ ಮಾಡಿದ್ದಲ್ಲದೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟಮಾಡಿದ್ದಾರೆ ಎಂದು ಸಿಟಿಜನ ಫಾರ್ ಡೆಮಾಕ್ರಸಿಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕ್ಷ್ಯಚಿತ್ರದ ಹಿಂದಿರುವ ಅವ್ಯವಹಾರದ ಬಗ್ಗೆ ಈಗಾಗಲೇ ಸಿಟಿಜನ್ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ, ಜನ ಸಂಗ್ರಾಮ ಪರಿಷತ್ನಿಂದ ಮುಖ್ಯಮಂತ್ರಿ, ಕಾನೂನು ಸಚಿವರು, ಮುಖ್ಯಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಮಗ್ರ ವರದಿ ಜತೆಗೆ ಏಳು ಪುಟಗಳ ಪತ್ರವನ್ನು ಬರೆದು ಸ್ವತಂತ್ರ ತನಿಖೆಗೆ ಒತ್ತಾಯಿಸಲಾಗಿದೆ ಎಂದರು.
ನಿಯಂತ್ರಣಕ್ಕೆ ಬಾರದ ಕೊರೋನಾ: ಸ್ವಯಂಪ್ರೇರಿತ ಲಾಕ್ಡೌನ್ ಘೋಷಿಸಿದ ನರೇಂದ್ರ
ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿನ ಬಗ್ಗೆ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ತಯಾರಿಸಲು 2014ರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಶರತ ಚಂಪತಿ, ಕಲ್ಯಾಣ ವರ್ಮಾ, ಅಮೋಘ ವರ್ಷ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ನಂತರ ವಿಜಯ ಮೋಹನ ರಾಜ ಸೇರಿದಂತೆ ಹಿರಿಯ ಅರಣ್ಯ ಅಧಿಕಾರಿ ವಿನಯ ತೋತ್ರ ಅವರು ಸರ್ಕಾರಕ್ಕೆ ಪತ್ರ ಬರೆದು ಸಾಕ್ಷ್ಯ ಚಿತ್ರದ ಅವಧಿ ವಿಸ್ತರಿಸಿ ಇನ್ನಷ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟಮಾಡಿ ಗಂಭೀರವಾಗಿ ನಿಯಮ ಉಲ್ಲಂಘನೆ ಮಾಡಿದೆ ಎಂದು ಆಪಾದನೆ ಮಾಡಿದ್ದಾರೆ.
ಚಿತ್ರೀಕರಣದ ಒಪ್ಪಂದದ ಪ್ರಕಾರ ಎಲ್ಲ ಹಕ್ಕುಗಳು ಅರಣ್ಯ ಇಲಾಖೆಗೆ ಒಳಪಟ್ಟಿದ್ದರು ಸಹಿತ ನಿಯಮ ಉಲ್ಲಂಘನೆ ಮಾಡಿ ಶರತ್ ಚಂಪತಿ, ಕಲ್ಯಾಣ ವರ್ಮಾ, ಅಮೋಘ ವರ್ಷ ಹಾಗೂ ಇತರರು ವೈಯಕ್ತಿಕ ಲಾಭಕ್ಕಾಗಿ ವಾಣಿಜ್ಯೀಕರಣ ಮಾಡಿ ಬೇರೆ ಬೇರೆ ಕಡೆಗಳಲ್ಲಿ ಮಾರಾಟ ಮಾಡಿದ್ದಾರೆ. ಇದಲ್ಲದೆ ಇತರೆ ಖರ್ಚನ್ನು ಅರಣ್ಯ ಇಲಾಖೆಯ ಮೇಲೆಯೇ ಹೇರಿ ಮೋಸ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಪ್ರಾಮಾಣಿಕ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಿ ಹಣವನ್ನು ಮರಳಿ ವಶಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯ ಪಡಿಸಿದ್ದಾರೆ.