Asianet Suvarna News Asianet Suvarna News

ವಿಜಯಪುರದಲ್ಲಿ ಮಕ್ಕಳ ಕಳ್ಳರ ವದಂತಿ, ಅಮಾಯಕರ ಮೇಲೆ ಹಲ್ಲೆ!

ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಹಬ್ಬಿದ್ದು, ಜನರು ಅಪರಿಚಿತ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಜಿಲ್ಲೆಯ ಕೆಲವೆಡೆ ಈ ರೀತಿಯ ಘಟನೆಗಳು ನಡೆದಿದ್ದು ಪೊಲೀಸ್ ಇಲಾಖೆಗೆ ವದಂತಿ ದೂರ ಮಾಡೋದೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Rumors of child thieves in Vijayapura  crowd attacks four persons gow
Author
First Published Sep 25, 2022, 7:18 PM IST

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.25): ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಹಬ್ಬಿದ್ದು, ಜನರು ಅಪರಿಚಿತ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಜಿಲ್ಲೆಯ ಕೆಲವೆಡೆ ಈ ರೀತಿಯ ಘಟನೆಗಳು ನಡೆದಿದ್ದು ಪೊಲೀಸ್ ಇಲಾಖೆಗೆ ವದಂತಿ ದೂರ ಮಾಡೋದೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಎಸ್ಪಿ ಆನಂದಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ರೆ ಎಚ್ಚರ ಎಂದಿದ್ದಾರೆ. ಅಮಾಯಕರು, ಅಪರಿಚಿತರ ಮೇಲೆ ಹಲ್ಲೆ ನಡೆಸಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆಗಿ ಹೇಳಿದ್ದಾರೆ. ವಿಜಯಪುರ ನಗರದಲ್ಲೆ ಕಳೆದ ಒಂದು ವಾರದಿಂದ ಮಕ್ಕಳ‌ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಹರಡಿದೆ.‌ ಕಿಡಿಗೇಡಿಗಳು ಸಂಬಂಧವೇ ಇಲ್ಲದ ವಿಡಿಯೋ, ಪೋಟೋಗಳ ಜೊತೆಗೆ ವಿಜಯಪುರಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ಆಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಪರಿಣಾಮ ನಗರದಾದ್ಯಂತ ಮಕ್ಕಳ ಕಳ್ಳರು ಬಂದಿದ್ದಾರೆ. ಮಕ್ಕಳನ್ನ ಅಪಹರಿಸಿಕೊಂಡು ಹೋಗ್ತಿದ್ದಾರೆ ಎನ್ನುವ ರೂಮರ್ ಹರಡಿದೆ. ಇದರಿಂದ‌ ಒಂದೆಡೆ ಜನರು ಆತಂಕ್ಕೆ ಒಳಗಾಗಿದ್ರೆ, ಇನ್ನೊಂದೆಡೆ ಅಪರಿಚಿತ ಅಮಾಯಕರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಿಮಿಸಿದೆ.

ಗ್ಯಾಂಗ್ ಬಾವಡಿಯಲ್ಲಿ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ‌!
ಮಕ್ಕಳ ಕಳ್ಳರ ವದಂತಿ ಹರಡಿದ್ದರಿಂದ ಅಮಾಯಕರ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ನಗರದ ಗ್ಯಾಂಗ್ ಬಾವಡಿ ಏರಿಯಾದಲ್ಲು ಇಂಥದ್ದೆ ಘಟನೆ ನಡೆದಿದೆ. ನಿನ್ನೆ ಸಾಯಂಕಾಲ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿಯಿಂದಾಗಿ ನಾಲ್ವರು ಅಮಾಯಕರನ್ನ ಸಾರ್ವಜನಿಕರು ಥಳಿಸಿದ್ದಾರೆ. ದೆಹಲಿ ಮೂಲದ‌ ದಸರಾ-ದೀಪಾವಳಿ ಹಿನ್ನೆಲೆ ಪ್ಲಾಸ್ಟಿಕ್ ಹೂವು ಮಾರಲು ಬಂದವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಗಾಂಧಿಚೌಕ ಪೊಲೀಸರು ನಾಲ್ವರನ್ನ ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಹಲ್ಲೆಯಲ್ಲಿ ಗಾಯಗೊಂಡಿದ್ದಾರೆ. ಹಲ್ಲೆಗೊಳಗಾದವರನ್ನ ಶಾಂತಾದಾಸ್, ಜಿಹಾನ್, ಶಾಹೀದ್ , ಹಕೀಮ್‌ ಎನ್ನಲಾಗಿದೆ. 

ಗೊಂದಲ ಸೃಷ್ಟಿಸಿರುವ ಚಾಂದನಿ ಹಾಲ್ ಬಾಲಕ ಕಿಡ್ನಾಪ್ ಯತ್ನ ಕೇಸ್!
ಇತ್ತ ನಗರದ ಚಾಂದನಿ ಹಾಲ್ ಎದುರಿನ ಎಲ್ಲಮ್ಮನ ಗುಡಿಯ ಹತ್ತಿರ ಬಾಲಕನ ಕಿಡ್ನಾಪ್‌ ಯತ್ನ ನಡೆದಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. 11 ವರ್ಷದ ಬಾಲಕ ಭಾಸ್ಕರ್ ಗಂಗಾಧರ ಶಿರನಾಳ ಕಿಡ್ನಾಪ್‌ಗೆ ಯತ್ನ ನಡೆದಿದೆ ಎಂದು ಗಂಗಾಧರ ತಂದೆ ತಿಳಿಸಿದ್ದಾರೆ.‌ ಇಬ್ಬರು ಬೈಕ್ ಮೇಲೆ ಬಾಲಕನನ್ನ ಕೊಂಡೊಯ್ಯಲು ಯತ್ನಿಸಿದಾಗ ಬಾಲಕ‌ ಪಾರಾಗಿ ಬಂದ ಎನ್ನಲಾಗಿದೆ. ಈ ಬಗ್ಗೆ ಪೋಷಕರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಆದ್ರೆ ನಿಜಕ್ಕು ಅಪಹರಣಕ್ಕೆ ಯತ್ನಿಸಿದವರು ಮಕ್ಕಳ ಕಳ್ಳರಾ? ಅಥವಾ ಅಲ್ಲಿ ನಡೆದ ಅಸಲಿ ಘಟನೆ ಏನು ಅನ್ನೋ ಬಗ್ಗೆಯೂ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.. ಇತ್ತ ಬಾಲಕನ ಮನೆಗೆ ಗಾಂಧಿಚೌಕ ಸಿಪಿಐ ಸಿದ್ದೇಶ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆದ್ರೆ ಎಲ್ಲಿಯೂ ಬಾಲಕನ ಅಪರಹರಣಕ್ಕೆ ಯತ್ನ ನಡೆದಿದೆ ಎನ್ನಲಾದ ಸ್ಥಾನಿಕ ಸಾಕ್ಷಿಗಳು ಸಿಕ್ಕಿಲ್ಲ.. ಪೋಷಕರು ಸಹ ಬಾಲಕ ಶಾಲೆಗೆ ಹೋಗಲು ಹಠ ಮಾಡ್ತಿದ್ದ ಎನ್ನುವ ಮಾಹಿತಿಯನ್ನು ಸಹ ಪೊಲೀಸರಿಗೆ ನೀಡಿದ್ದು, ಇದು ವದಂತಿಗಳ ಸಾಲಲ್ಲಿ ಮತ್ತೊಂದು ಪ್ರಕರಣವಾ ಎನ್ನುವ ಜಿಜ್ಞಾಸೆಯು ಇದೆ.

ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿ ಸುಳ್ಳು: ಎಸ್ಪಿ ಲೋಕೇಶ ಜಗಲಾಸರ್

ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ಮಹಾಪೂರ!
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ಮಹಾಪೂರವೇ ಹರಿದು ಬರ್ತಿದೆ. ಕೆಲ ಕಿಡಿಗೇಡಿಗಳು ವಾಟ್ಸಾಪ್ ಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ಆಡಿಯೋ ಹರಿಬಿಡ್ತಿದ್ದಾರೆ. ಗ್ಯಾಂಗ್ ಬಾವಡಿಯಲ್ಲಿ ಅಮಾಯರನ್ನ ಜನರು ಥಳಿಸಿದಾಗಲು ಅದೇ ವಿಡಿಯೋ ಜೊತೆಗೆ ಮತ್ತೊಂದು ಆಡಿಯೋ ರೆಡಿ ಮಾಡಿ ಮಕ್ಕಳು ಬಂದಿದ್ದಾರೆ ಎಲ್ಲರೂ ಹುಷಾರಾಗಿರಿ, ಸಿಕ್ಕರೆ ಹಿಡಿಯಿರಿ ಎಂದು ವಾಟ್ಸಾಪ್, ಪೇಸ್ಬುಕ್ ಗಳಲ್ಲಿ ಹರಿ ಬಿಟ್ಟಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಆತಂಕ, ಗೊಂದಲದ‌ ಜೊತೆಗೆ ಅಪರಚಿತರು ತಮ್ಮ ಏರಿಯಾಗೆ ಬಂದ್ರೆ ಕಟ್ಟಿ ಹಾಕಿ ಹೊಡೆದು ಬಿಡುವ ಹಾಗೆ ಪ್ರಚೋದನೆಗೆ ಒಳಗಾಗ್ತಿದ್ದಾರೆ. 

ಹಾವೇರಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ: ಮಿಠಾಯಿ ಮಾರೋಕೆ ಬಂದವನಿಗೆ ಮನಸೋ ಇಚ್ಛೆ ಥಳಿಸಿದ ಜನ

ವದಂತಿ ಹರಡುವವರಿಗೆ ಖಡಕ್ ಎಚ್ಚರಿಕೆ ನೀಡಿದ ಎಸ್ಪಿ!
ಇನ್ನು ಮಕ್ಕಳರು ಬಂದಿದ್ದಾರೆ ಎಂದು ವಿನಾಕಾರಣ ವದಂತಿ ಹರಡುವವರ ವಿರುದ್ಧ ವಿಜಯಪುರ ಎಸ್ಪಿ ಡಾ. ಹೆಚ್ಡಿ ಆನಂದಕುಮಾರ್ ಗರಂ ಆಗಿದ್ದಾರೆ.‌ ವದಂತಿ ಹರಡುವವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.  ಪತ್ರಿಕಾ ಪ್ರಕಟಣೆ  ಹೊರಡಿಸಿರುವ ಅವರು ಅಮಾಯಕರ ಮೇಲೆ ಹಲ್ಲೆಗಳು ನಡೆದರೆ ಸುಮ್ಮನಿರಲ್ಲ, ವಿನಾಕಾರಣ ಅಪರಿಚಿತರ ಮೇಲೆ ಹಲ್ಲೆ ನಡೆಸಬಾರದು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ 112ಗೆ ಕರೆ ಮಾಡಲು ತಿಳಿಸಿದ್ದಾರೆ.. ಪೊಲೀಸರು ಸ್ಥಳಕ್ಕಾಗಮಿಸಿ ಸತ್ಯಾಸತ್ಯತೆ ಅರಿತು ಕ್ರಮ ಜರುಗಿಸಲಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios