Asianet Suvarna News Asianet Suvarna News

ಐಐಟಿ ಮೀಸಲು ಜಾಗ ವಿವಾದ:ರೇವಣ್ಣ-ಪ್ರೀತಂ ಡಿಶುಂ ಡಿಶುಂ

ಹಾಸನಕ್ಕೆ ಐಐಟಿ ತರುವುದು ದೇವೇಗೌಡರ ಹಲವಾರು ವರ್ಷದ ಕನಸು. ಹಾಗಾಗಿ ಐಐಟಿಗಾಗಿ ಮೀಸಲಿಟ್ಟಿರುವ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದಲ್ಲಿ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಇರುವ ಗಾಂಧಿ​ ಪ್ರತಿಮೆ ಮುಂದೆ ಹೋರಾಟ ಮಾಡುವುದಾಗಿ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಎಚ್ಚರಿಕೆ ನೀಡಿದರು.

Revanna  Pritham  Clash Over  IIT reserved  Land dispute snr
Author
First Published Jan 19, 2023, 6:00 AM IST

  ಹಾಸನ :  ಹಾಸನಕ್ಕೆ ಐಐಟಿ ತರುವುದು ದೇವೇಗೌಡರ ಹಲವಾರು ವರ್ಷದ ಕನಸು. ಹಾಗಾಗಿ ಐಐಟಿಗಾಗಿ ಮೀಸಲಿಟ್ಟಿರುವ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದಲ್ಲಿ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಇರುವ ಗಾಂಧಿ​ ಪ್ರತಿಮೆ ಮುಂದೆ ಹೋರಾಟ ಮಾಡುವುದಾಗಿ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಎಚ್ಚರಿಕೆ ನೀಡಿದರು.

ನಗರದ ಸಂಸದರ ನಿವಾಸದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನೂ ಎಚ್‌.ಡಿ. ದೇವೇಗೌಡರು ಈ ಹಿಂದೆಯೇ ಭೇಟಿ ಮಾಡಿದ್ದರು. ಅಂದು ಜವರೇಗೌಡರು ಐಐಟಿ ಮಾಡು ಎಂದು ನನಗೆ ಹೇಳಿದ್ದರು. ಇದರಿಂದ ದೇವೇಗೌಡರನ್ನ ನಾನೇ ಕರೆದುಕೊಂಡು ಅರ್ಜುನ್‌ ಸಿಂಗ್‌ರ ಬಳಿ ಹೋಗಿದ್ದೆವು. ಅವತ್ತು ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರು ಎನ್ನುವ ಒಂದೇ ಕಾರಣಕ್ಕೆ ಐಐಟಿಯನ್ನು ರಾಜಸ್ಥಾನಕ್ಕೆ ನೀಡಲಾಯಿತು. ಈ ರಾಜ್ಯದಲ್ಲಿ ಯಾರೂ ಕೂಡ ಐಐಟಿ ಕೇಳಿರಲಿಲ್ಲ. ಈಗಾಗಲೇ ಐಐಟಿಗಾಗಿ ಹಾಸನದಲ್ಲಿ ಒಂದು ಸಾವಿರ ಎಕರ ಜಾಗ ಮೀಸಲಿಡಲಾಗಿದೆ ಎಂದರು.

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದಾಗ ಮನಮೋಹನ್‌ ಸಿಂಗ್‌ರ ಬಳಿ ಪ್ರಯತ್ನ ಪಟ್ಟಿದ್ದೆವು. ಸ್ಮೃತಿ ಇರಾನಿ ಕರ್ನಾಟಕಕ್ಕೆ ಐಐಟಿ ಕೊಡಲು ಒಪ್ಪಿಗೆ ನೀಡಿದ್ದರು. ಅಂದಿನ ರಾಜ್ಯ ಕಾಂಗ್ರೆಸ್‌ ಪಕ್ಷದವರು ಹಾಸನ ಬಿಟ್ಟು ಬೇರೆ ಹೆಸರು ಸೂಚಿಸಿದರು. ಕೆಲ ದಿನಗಳ ಹಿಂದೆ ದೇವೇಗೌಡರು ರಾಜ್ಯಸಭೆ ಭಾಷಣದಲ್ಲಿ ಐಐಟಿ ಬಗ್ಗೆ ಚರ್ಚೆ ಮಾಡಿದ್ದು, ಈ ಬಗ್ಗೆ ಮೋದಿಯವರು ಪರಿಶೀಲನೆ ನಡೆಸಿದ್ದಾರೆ. ದೇವೇಗೌಡರ ಬಳಿ ಐಐಟಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದಾರೆ. ಐಐಟಿಗಾಗಿ ಮೀಸಲಿರುವ ಜಾಗವನ್ನ ಕೆಲ ಪಟ್ಟಭದ್ರ ಹಿತಾಸಕ್ತಿಗಳಯ ಬೇರೆ ಉದ್ದೇಶಕ್ಕೆ ಬಳಸಲು ಪ್ಲಾನ್‌ ಮಾಡಿದ್ದಾರೆ. ಈ ವಿಚಾರವಾಗಿ ದೇವೇಗೌಡರು ಈ ಬಗ್ಗೆ ಮುಖ್ಯಮಂತ್ರಿ, ಸಚಿವರಿಗೆ ಪತ್ರ ಬರೆದಿದ್ದಾರೆ. ಐಐಟಿ ಜಾಗವನ್ನ ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದರಲ್ಲಿ ನನ್ನ ವೈಯಕ್ತಿಕ ಉದ್ದೇಶ ಏನಿಲ್ಲ. ಜಿಲ್ಲೆಯ, ರಾಜ್ಯದ ಯುವಕರಿಗೆ ಅನುಕೂಲ ಆಗುತ್ತದೆ ಎಂಬ ಉದ್ದೇಶ ನನ್ನದು. ಇದನ್ನು ಮೀರಿ ಬೇರೆ ಉದ್ದೇಶಕ್ಕೆ ಜಾಗ ಏನಾದರು ಬಳಸಿದರೆ ನಾವು ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಗಾಂಧಿ​ ಪ್ರತಿಮೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಐಐಟಿ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡುತ್ತೇನೆ. ಯಾರೂ ಕೂಡ ಬೇರೆ ಉದ್ದೇಶಕ್ಕೆ ಬಳಸಬಾರದು. ಪಕ್ಷಾತೀತವಾಗಿ ಈ ಬಗ್ಗೆ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.

ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ ಸಂಬಂಧ ಎಚ್‌.ಡಿ. ಕುಮಾರಸ್ವಾಮಿ ಆಡಳಿತದಲ್ಲಿ 8 ಕೋಟಿ ಹಣ ನೀಡಿದ್ದೇವೆ. ಕೇಂದ್ರ ಸಚಿವರು ನೀವು ಜಾಗ ಕೊಡಿ ಎಂದು ಕೇಳಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಹಾಸನ ಜಿಲ್ಲೆಯಲ್ಲಿ ದೇವೇಗೌಡರಿಗೆ 60 ವರ್ಷ ರಾಜಕೀಯ ಶಕ್ತಿಯನ್ನು ಇಲ್ಲಿನ ಜನತೆ ಕೊಟ್ಟಿದ್ದಾರೆ. ಈ ಜಿಲ್ಲೆಯನ್ನು ನಮ್ಮ ಕುಟುಂಬ ಯಾವತ್ತು ಮರೆಯೋದಿಲ್ಲ. ಹಾಸನಕ್ಕೆ ತಾಂತ್ರಿಕ ವಿಶ್ವವಿದ್ಯಾಲಯ ಬಜೆಟ್‌ನಲ್ಲೇ ಮಂಜೂರಾಗಿತ್ತು. ಯಡಿಯೂರಪ್ಪ ನವರು ಅದನ್ನ ತಡೆ ಹಿಡಿದಿದ್ದರು. ಮುಂದೆ ಐಐಟಿ ಮಾಡುವ ಉದ್ದೇಶವಿದ್ದು ಜಾಗ ಮೀಸಲಿರಲಿ ಎಂದು ಇದೇ ವೇಳೆ ಒತ್ತಾಯಿಸಿದರು.

Follow Us:
Download App:
  • android
  • ios