Asianet Suvarna News Asianet Suvarna News

ಧಾರವಾಡ: ಸಾರ್ವಜನಿಕ ಬೇಡಿಕೆಗಳಿಗೆ ಕಾನೂನಾತ್ಮಕವಾಗಿ ತಕ್ಷಣ ಸ್ಪಂದಿಸಿ, ನ್ಯಾ.ಬಿ.ಎಸ್.ಪಾಟೀಲ

ಮಾಲ್ ಅಡಮಿನಿಷ್ಟ್ರೇಶನ್ ತೆಗೆದು ಹಾಕುವುದು ಲೋಕಾಯುಕ್ತ ಕಾಯ್ದೆಯ ಮುಖ್ಯಉದ್ದೇಶವಾಗಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಸಹನೆಯಿಂದ ಉತ್ತರಿಸಿ ಮತ್ತು ಸರಿಯಾದ ಮಾಹಿತಿ ನೀಡುವ ಮೂಲಕ ಆಡಳಿತದಲ್ಲಿ ಜನರ ವಿಶ್ವಾಸಗಳಿಸಬೇಕು: ಬಿ.ಎಸ್.ಪಾಟೀಲ 

Respond Promptly and Legally to Public Demands Says Justice BS Patil grg
Author
First Published Dec 1, 2023, 8:32 PM IST

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಡಿ.01):  ಸಮರ್ಪಕ ಆಡಳಿತ ನಿರ್ವಹಣೆ ಮಾಡಿದರೆ ಸಾಕಷ್ಟು ಸಮಸ್ಯೆಗಳು ಸ್ಥಳದಲ್ಲಿ ಪರಿಹಾರವಾಗುತ್ತವೆ ಸಾರ್ವಜನಿಕರ ಬೇಡಿಕೆ, ಮನವಿಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸಿ ತಕ್ಷಣ ಕ್ರಮವಹಿಸುವ ಮೂಲಕ ಆಡಳಿತದಲ್ಲಿ ಧಾರವಾಡ ಜಿಲ್ಲೆಯು ಇತರ ಜಿಲ್ಲೆಗಳಿಗೆ ಮಾದರಿ ಆಗುವಂತೆ ಮಾಡಬೇಕೆಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಹೇಳಿದರು. 

ಇಂದು(ಶುಕ್ರವಾರ) ಬೆಳಗ್ಗೆ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಬಿ.ಎಸ್.ಪಾಟೀಲ ಅವರು, ಮಾಲ್ ಅಡಮಿನಿಷ್ಟ್ರೇಶನ್ ತೆಗೆದು ಹಾಕುವುದು ಲೋಕಾಯುಕ್ತ ಕಾಯ್ದೆಯ ಮುಖ್ಯಉದ್ದೇಶವಾಗಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಸಹನೆಯಿಂದ ಉತ್ತರಿಸಿ ಮತ್ತು ಸರಿಯಾದ ಮಾಹಿತಿ ನೀಡುವ ಮೂಲಕ ಆಡಳಿತದಲ್ಲಿ ಜನರ ವಿಶ್ವಾಸಗಳಿಸಬೇಕು. ಕಡತ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡಿದರೆ, ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ಸಿನಲ್ಲೂ ದಿನೇ ದಿನೇ ಭ್ರಷ್ಟಾಚಾರ ತಾಂಡವ: ಪ್ರಲ್ಹಾದ್‌ ಜೋಶಿ

ಸರಕಾರಿ ಕಚೇರಿಗಳನ್ನು ಇಲಾಖಾ ಅಥವಾ ಜಿಲ್ಲಾ ಮುಖ್ಯಸ್ಥರು ಸಶಕ್ತವಾಗಿ ನಿಭಾಯಿಸಬೇಕು ಕೆಳ ಹಂತದ ಅಧಿಕಾರಿಗಳ ಕಾರ್ಯವೈಖರಿಗಳನ್ನು ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡುವ ಮೂಲಕ ತಿಳಿದುಕೊಳ್ಳಬೇಕು ಇತರರಿಗೆ ಮಾದರಿ ಆಗುವಂತೆ ಇಲಾಖೆಗಳನ್ನು ನಿರ್ವಹಣೆ ಮಾಡಬೇಕು ಎಂದು ಅವರು ತಿಳಿಸಿದರು ಪ್ರತಿ ಇಲಾಖೆಗಳಲ್ಲಿ ಆಂತರಿಕ ಜಾಗೃತ ದಳಗಳನ್ನು ರಚಿಸಿಕೊಳ್ಳಬೇಕು.ಈ ಮೂಲಕ ಸಿಬ್ಬಂದಿಗಳ ಕಾರ್ಯಕ್ಷಮತೆ ಪರಿಶೀಲಿಸಬೇಕು.ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಳಿಗೆ ಪುರಸ್ಕರಿಸಬೇಕು ಮತ್ತು ಕೆಲಸದಲ್ಲಿ ಉದಾಸೀನತೆ, ನಿರ್ಲಕ್ಷ್ಯ ಮತ್ತು ನಿಧಾನಗತಿ ಅನುಸರಿಸುವವರಿಗೆ ಎಚ್ಚರಿಕೆ ನೀಡಬೇಕು. ಮತ್ತು ಅಗತ್ಯವಿದ್ದರೆ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಬೇಕೆಂದು ಲೋಕಾಯುಕ್ತರು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಂದ ಅವಳಿನಗರದಲ್ಲಿ ಕಸ ಸಂಗ್ರಹ, ಕಸ ವಿಂಗಡನೆ, ತ್ಯಾಜ್ಯ ನಿರ್ವಹಣೆ, ಸಾವಯವ ಗೊಬ್ಬರ ತಯಾರಿಕೆ ಕುರಿತು ಮಾಹಿತಿ ಪಡೆದು, ಮಹಾನಗರಪಾಲಿಕೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿ ತ್ಯಾಜ್ಯ ನಿರ್ವಹಣೆಯಲ್ಲಿ ಇಂದೊರ್ ಮಾದರಿ ಅಳವಡಿಸಿಕೊಂಡು ದೇಶಕ್ಕೆ ಮಾದರಿ ಆಗಬೇಕೆಂದು ಅವರು ತಿಳಿಸಿದರು ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಮೋಹನ ಶಿವಣ್ಣನವರ ಅವರಿಂದ ಜಿಲ್ಲೆಯ ಎಲ್ಲ 1206 ಕೆರೆಗಳ ಸರ್ವೆ ಮಾಡಿರುವ ಕುರಿತು ಮಾಹಿತಿ ಪಡೆದರು. ಕೆರೆಗಳ ಸರ್ವೆ ಮತ್ತು ಒತ್ತುವರಿ ತೆರವು ಕಾರ್ಯ ತಿಳಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಶ್ಲಾಘಿಸಿ, ಭೂದಾಖಲೆಗಳ ಇಲಾಖೆ ಅಧಿಕಾರಿಯನ್ನು ಅಭಿನಂದಿಸಿದರು.

ಸರ್ವೆ ಮಾಡಿರುವ 1206 ಕೆರೆಗಳಲ್ಲಿ, 156 ಕೆರೆಗಳಲ್ಲಿನ 283.38 ಎಕರೆ ಒತ್ತುವರಿ ಭೂಮಿ ಗುರುತಿಸಲಾಗಿದೆ. ಈ ಪೈಕಿ  84 ಕೆರೆಗಳ 115.21 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಇಲ್ಲಿಯವರೆಗೆ 1050 ಕೆರೆಗಳು ಒತ್ತುವರಿ ಮುಕ್ತವಾಗಿವೆ. ಮತ್ತು ಇನ್ನು 72 ಕೆರೆಗಳ ಸುಮಾರು 168 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸರಕಾರಿ ಕಟ್ಟಡ, ದೇವಸ್ಥಾನ, ಸಮುದಾಯಭವನ ಹಾಗೂ ಶಾಲಾ ಕಟ್ಟಡಗಳಿದ್ದು ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. 

ರಾಜ್ಯದಲ್ಲಿ 10 ಕೆಜಿ ಅಕ್ಕಿ ವಿತರಣೆ ಯಾವಾಗ ? ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನೆ

ಸಭೆಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರ, ನಿರಾವರಿ,ಅಬಕಾರಿ, ಪೊಲೀಸ ಇಲಾಖೆಗಳ ಕೆಲವು ದೂರು  ಪ್ರಕರಣಗಳನ್ನು ಉಲ್ಲೇಖಿಸಿ ಮಾಹಿತಿ ಪಡೆದುಕೊಂಡು ಮತ್ತು ಈ ಕುರಿತು ಸಮಗ್ರ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ಅಹವಾಲು ಸ್ವೀಕಾರ

ಸಭೆಯ ನಂತರ  ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಜಿಲ್ಲೆಯ ವಿವಿಧ ಊರುಗಳಿಂದ ಆಗಮಿಸಿದ್ದ ಸಾರ್ವಜನಿಕರು, ಸಂಘ, ಸಂಸ್ಥೆಗಳಿಂದ ದೂರುಗಳನ್ನು ಸ್ವೀಕರಿಸಿದರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಹಾನಗರ ಪೊಲೀಸ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಿವಾಸ, ಧಾರವಾಡ ಲೋಕಾಯುಕ್ತ ಎಸ್.ಪಿ.ಸತೀಶ ಚಿಟಗುಪ್ಪಿ ಅವರು ವೇದಿಕೆಯಲ್ಲಿದ್ದರು ಸಭೆಯಲ್ಲಿ ಸರಕಾರದ ಎಲ್ಲ ಇಲಾಖೆ, ನಿಗಮ,ಮಂಡಳಿಗಳ ಮುಖ್ಯಸ್ಥರು, ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios