Asianet Suvarna News Asianet Suvarna News

ಈದ್ಗಾ ಮೈದಾನದಲ್ಲಿ ಈ ಸಲ ಗಣೇಶೋತ್ಸವ ಆಚರಿಸಿಯೇ ಸಿದ್ಧ: ಸನಾತನ ಸಂಸ್ಥೆ

ಗಣೇಶೋತ್ಸವಕ್ಕೆ ವಿರೋಧಿಸಿದರೆ ಜಮೀರ್‌ ಅಹಮದ್‌ ಮನೆಯಲ್ಲೇ ಗಣೇಶ ಪ್ರತಿಷ್ಠಾಪನೆ ಎಚ್ಚರಿಕೆ
 

Ready to Celebrate Ganeshotsava at Idgah Maidan in Bengaluru grg
Author
Bengaluru, First Published Aug 9, 2022, 9:43 AM IST

ಬೆಂಗಳೂರು(ಆ.09): ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸುತ್ತೇವೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಶಾಸಕ ಜಮೀರ್‌ ಮನೆಯೊಳಗೂ ಗಣೇಶನನ್ನು ಕೂರಿಸುತ್ತೇವೆ ಎಂದು ಸನಾತನ ಧರ್ಮದ ಅಧ್ಯಕ್ಷ ಭಾಸ್ಕರನ್‌ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಧಾರ್ಮಿಕ ಹಬ್ಬಗಳಿಗೆ ಅನುಮತಿ ಇಲ್ಲ ಎಂಬ ಶಾಸಕ ಜಮೀರ್‌ ಅಹಮದ್‌ಖಾನ್‌ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜಮೀರ್‌ ಒಬ್ಬ ಶಾಸಕ ಅಷ್ಟೇ. ಗಣೇಶೋತ್ಸವ ಮಾಡಲು ಅವಕಾಶ ಇಲ್ಲ ಎನ್ನುವುದಕ್ಕೆ ಅವರಾರ‍ಯರು? ನಾವು ಈ ಬಾರಿ ಅದ್ಧೂರಿಯಾಗಿ ಗೌರಿ, ಗಣೇಶ ಹಬ್ಬ ಆಚರಿಸತ್ತೇವೆ. ಅನುಮತಿಗಾಗಿ ಸಂಬಂಧಪಟ್ಟಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.

ಆಟದ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಶಾಸಕ ಜಮೀರ್‌ ಅಹಮದ್‌ ತಮ್ಮ ಹಿಂಬಾಲಕರ ಮಾತು ಕೇಳಿಕೊಂಡು ತರಕಾರು ತೆಗೆಯಬಾರದು. ಇಲ್ಲದಿದ್ದರೆ ಚುನಾವಣೆಯಲ್ಲಿ ಚಾಮರಾಜಪೇಟೆಯ ಜನತೆ ಬುದ್ಧಿ ಕಲಿಸುತ್ತದೆ. ಅವರೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರು ಕೇವಲ ಮುಸ್ಲಿಂ ಮತಗಳಿಂದ ಶಾಸಕರಾಗಿಲ್ಲ. ಹಿಂದೂಗಳು ಕೂಡ ಮತ ಚಲಾಯಿಸಿದ್ದಾರೆ. ಮಾತನಾಡುವ ಭರಾಟೆಯಲ್ಲಿ ಬಿದ್ದು ಅಥವಾ ನಾಲಿಗೆ ಚಪಲಕ್ಕೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಕತ್ತಿದ್ದರೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಿಲ್ಲಿಸಿ: ಮುತಾಲಿಕ್‌

ಗಣೇಶ ಹಬ್ಬ ಮಾತ್ರವಲ್ಲ, ಹಿಂದೂ, ಜೈನ ಧರ್ಮದ ಎಲ್ಲ ಹಬ್ಬಗಳನ್ನು ಇದೇ ಮೈದಾನದಲ್ಲಿ ಆಚರಿಸುತ್ತೇವೆ. ಜಮೀರ್‌ ಚಾಮರಾಜಪೇಟೆಯ ಜನಪ್ರತಿನಿಧಿ ಅಷ್ಟೇ. ಯಾವುದೇ ಪಾಳೇಗಾರ ಅಲ್ಲ. ಈಗಾಗಲೇ ತಮಿಳುನಾಡಿನಲ್ಲಿ ಶಿವಲಿಂಗ ಮಾಡಲು ಹೇಳಿದ್ದೇನೆ. ರಾತ್ರೋರಾತ್ರಿ ಮೈದಾನದ ಮಧ್ಯೆ ಶಿವಲಿಂಗ ಪ್ರತಿಪ್ಠಾಪನೆ ಮಾಡುತ್ತೇನೆ. ಆಗ ಇವರೆಲ್ಲ ಏನು ಮಾಡುತ್ತಾರೆ. ಜಮೀರ್‌ಗೆ ತಾಕತ್ತು ಇದ್ದರೆ ಶಿವಲಿಂಗ ತೆಗೆಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈದ್ಗಾ ಮೈದಾನದಲ್ಲಿ ಈಗ ‘ಆಚರಣೆ’ ಗದ್ದಲ!

ಚಾಮರಾಜಪೇಟೆ ಆಟದ ಮೈದಾನ ಕಂದಾಯ ಇಲಾಖೆ ಸ್ವತ್ತು ಎಂದು ಘೋಷಣೆಯಾದರೂ ವಿವಾದ ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ. ಇದೀಗ ಮೈದಾನದಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸಬೇಕೋ, ಬೇಡವೋ ಎಂಬ ಹೊಸ ವಿವಾದ ಸೃಷ್ಟಿಯಾಗಿದೆ.

ಆಟದ ಮೈದಾನದಲ್ಲಿ ಈ ಬಾರಿ ಗೌರಿ, ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತೇವೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿವೆ. ಇದಕ್ಕೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವವನ್ನು ಬೇಕಾದರೆ ಆಚರಿಸಲಿ. ಧ್ವಜಾರೋಹಣ ಮಾಡಲಿ. ಆದರೆ ಯಾವುದೇ ಕಾರಣಕ್ಕೂ ಬೇರೆ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶ ಕೊಡಬಾರದೆಂದು ಮುಸ್ಲಿಂ ನಾಯಕರು ಆಗ್ರಹಿಸಿದ್ದಾರೆ. ಹೀಗಾಗಿ ಎರಡು ಕೋಮುಗಳ ನಡುವೆ ತಿಕ್ಕಾಟ ಆರಂಭಗೊಂಡಿದೆ.

ಚಾಮರಾಜಪೇಟೆ ಆಟದ ಮೈದಾನ ಸದ್ಯಕ್ಕೆ ಕಂದಾಯ ಇಲಾಖೆಯ ಆಸ್ತಿಯಾಗಿದೆ. ಇಲ್ಲಿ ಯಾವ ಕಾರ್ಯಕ್ರಮ ನಡೆಯಬೇಕು ಅಥವಾ ನಡೆಯಬಾರದು ಎಂಬುದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾವನ್ನು ಯಾರು ಹಾರಿಸುತ್ತಾರೆ ಮತ್ತು ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಬಗ್ಗೆಯೂ ಸರ್ಕಾರದ ತೀರ್ಮಾನವೇ ಅಂತಿಮ. ಈ ಕುರಿತು ಈವರೆಗೂ ಇಲಾಖೆಗೆ ಯಾರೂ ಕೂಡ ಅರ್ಜಿಯನ್ನು ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕಂದಾಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಈದ್ಗಾ ಗೋಡೆ ನೆಲಸಮಕ್ಕೆ ಪಟ್ಟು

ಈ ನಡುವೆ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತೆಂದ ಮೇಲೆ ಈದ್ಗಾ ಗೋಡೆಯನ್ನು ನೆಲಸಮ ಮಾಡಿ ಎಂದು ಕೆಲವು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿವೆ. ಗೋಡೆ ನೆಲಸಮ ಮಾಡಬೇಕು, ಮೈದಾನದಲ್ಲಿ ಸಭೆ, ಸಮಾರಂಭ ನಡೆಸಲು ಅನುಮತಿ ನೀಡಬೇಕು. ಆಟದ ಮೈದಾನವನ್ನು ಪ್ರತಿಯೊಬ್ಬ ನಾಗರಿಕರು ಬಳಕೆ ಮಾಡಲು ಪಾಲಿಕೆ ಅನುಮತಿ ನೀಡಬೇಕು. ಅದನ್ನು ಬಿಟ್ಟು ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡಲು ಮುಂದಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೆಲ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಈದ್ಗಾ ಮೈದಾನ: ಬಿಬಿಎಂಪಿ ಸ್ವತ್ತು ಎಂದು ಘೋಷಿಸದೇ ಕಂದಾಯ ಇಲಾಖೆಗೆ ವರ್ಗಾಯಿಸಿದ್ದೇಕೆ.?

ಪೊಲೀಸ್‌ ಬಂದೋಬಸ್ತ್‌

ಚಾಮರಾಜಪೇಟೆ ಆಟದ ಮೈದಾನದ ಆಸ್ತಿ ಕಂದಾಯ ಇಲಾಖೆಗೆ ಸೇರಿದ್ದು ಎಂದು ಘೋಷಣೆಯಾದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್‌್ತ ಕೈಗೊಂಡಿದೆ. ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ, ಮೂವರು ಪಿಎಸ್‌ಐ, ನಾಲ್ವರು ಎಸ್‌ಐ ಸಬ್‌ಇನ್‌ಸ್ಪೆಕ್ಟರ್‌, 10ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಒಳಗೊಂಡ ತಂಡವು ಭದ್ರತೆ ಕೈಗೊಂಡಿದ್ದು, ಎರಡು ಹೊಯ್ಸಳ ವಾಹನಗಳನ್ನು ಗಸ್ತಿಗೆಂದು ನೇಮಕ ಮಾಡಲಾಗಿದೆ.

ಸದ್ಯ ಚಾಮರಾಜಪೇಟೆ ಆಟದ ಮೈದಾನದಲ್ಲಿ ಯಾವುದೇ ಆಚರಣೆಗೆ ಅವಕಾಶ ನೀಡಿಲ್ಲ. ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದ್ದು, ಗಲಾಟೆ, ಗದ್ದಲಗಳಿಗೆ ಅನುವು ಮಾಡಿಕೊಟ್ಟಿಲ್ಲ. ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಭದ್ರತಾ ಕಾರ್ಯ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಸ್ವಾತಂತ್ರ್ಯ ದಿನ ಸೇರಿದಂತೆ ಇತರೆ ಹಬ್ಬ, ಹರಿದಿನಗಳ ಆಚರಣೆ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

Follow Us:
Download App:
  • android
  • ios