Asianet Suvarna News Asianet Suvarna News

BBMP ಸಂಧಾನ ಯಶಸ್ವಿ: ಕಸ ಸಂಗ್ರಹ ಮತ್ತೆ ಶುರು

*  ಬೇಡಿಕೆಗಳ ಈಡೇರಿಕೆಗೆ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಭರವಸೆ
*  ಶನಿವಾರ ಮಧ್ಯಾಹ್ನದಿಂದಲೇ ಕಸ ವಿಲೇವಾರಿ ಆರಂಭ
*  ಬಾಕಿಯಿರುವ ಬಿಲ್‌ ಮಾರ್ಚ್‌ ಅಂತ್ಯದೊಳಗೆ ಪಾವತಿ 
 

Re Started the Garbage Collection in Bengaluru after BBMP Negotiation Successful grg
Author
Bengaluru, First Published Feb 20, 2022, 7:47 AM IST

ಬೆಂಗಳೂರು(ಫೆ.20):  ಬಾಕಿಯಿರುವ ಬಿಲ್‌ ಮಾರ್ಚ್‌ ಅಂತ್ಯದೊಳಗೆ ಪಾವತಿಸುವುದಾಗಿ ಪಾಲಿಕೆಯು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ(BBMP) ಕಸ ಗುತ್ತಿಗೆದಾರರು ಮತ್ತು ಹೊರಗುತ್ತಿಗೆ ನೌಕರರು ಪ್ರತಿಭಟನೆ(Protest) ಕೈಬಿಟ್ಟಿದ್ದು, ಕಸ ಸಂಗ್ರಹಣೆ ಮತ್ತು ವಿಲೇವಾರಿ ಕಾರ್ಯ ಪುನರಾರಂಭಿಸಿದ್ದಾರೆ.

ಶನಿವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರು, ಜಂಟಿ ಕ್ರಿಯಾ ಸಮಿತಿಯ ಸ್ವಚ್ಛತಾ ಗುತ್ತಿಗೆದಾರರು ಮತ್ತು ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯು(Waste Collection and Disposal) ದೈನಂದಿನ ಕೆಲಸವಾಗಿದ್ದು, ಇದನ್ನು ವ್ಯವಸ್ಥಿತವಾಗಿ ನಡೆಸಲು ಅನುವಾಗುವಂತೆ ಮಾಸಿಕ ನಿಗದಿತ ಸೇವಾ ಶುಲ್ಕವನ್ನು ಸಮಯಬದ್ಧವಾಗಿ ಪಾವತಿಸಬೇಕು. ಜೊತೆಗೆ ಗುತ್ತಿಗೆದಾರರು ಎದುರಿಸುತ್ತಿರುವ ತೊಡಕುಗಳನ್ನು ನಿವಾರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದರು.

MES Flyover: ಬೆಂಗ್ಳೂರಲ್ಲಿ ಮತ್ತೊಂದು ಫ್ಲೈಓವರ್‌ ಅಪಾಯದಲ್ಲಿ..!

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತಿಗೆದಾರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್‌.ಎನ್‌.ಬಾಲಸುಬ್ರಹ್ಮಣ್ಯ, ಪಾಲಿಕೆಯ ಭರವಸೆಯನ್ನು ಪರಿಗಣಿಸಿ ಗುತ್ತಿಗೆದಾರರ ಸಂಘ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಭಟನೆಯನ್ನು ಹಿಂಪಡೆದಿದೆ, ಶನಿವಾರ ಮಧ್ಯಾಹ್ನದಿಂದಲೇ ಕಸ ಸಂಗ್ರಹಣೆ ಮತ್ತು ವಿಲೇವಾರಿ ಕಾರ್ಯ ಪುನರಾರಂಭಿಸಿದೆ ಎಂದು ತಿಳಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತೆ(ಹಣಕಾಸು) ತುಳಸಿ ಮದ್ದಿನೇನಿ ಅವರು ಬಿಲ್‌ ಪಾವತಿಗೆ(Pending Bill) ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಆರು ತಿಂಗಳಿನಿಂದ ಸುಮಾರು .248 ಕೋಟಿ ಬಿಲ್‌ ಪಾವತಿಗೆ ಬಾಕಿ ಇದೆ. ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಆಗದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುತ್ತವೆ. ಆದ್ದರಿಂದ ಅನಿವಾರ್ಯವಾಗಿ ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಯಿತು. ಕಸ ವಿಲೇವಾರಿ ಗುತ್ತಿಗೆದಾರರು ಸುಮಾರು 12 ಸಾವಿರ ಕಾರ್ಮಿಕರಿಗೆ ವೇತನ ಕೊಡಬೇಕಿದೆ. ಆರು ತಿಂಗಳಿನಿಂದ ಬಾಕಿ ಬಿಡುಗಡೆ ಮಾಡದಿದ್ದರೆ ಸಂಬಳ ಕೊಡುವುದು ಹೇಗೆ? ನಿತ್ಯ ನಗರದ ಪ್ರತಿ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದೇವೆ. ನಾವು ಮಾಡಿದ ಕೆಲಸಕ್ಕೆ ಕೊಡಬೇಕಾದ ಹಣವನ್ನು ಬಿಬಿಎಂಪಿ ಅಧಿಕಾರಿಗಳು ಕೊಡದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದೆರಡು ದಿನಗಳಿಂದ ಬಾಕಿ ಬಿಲ್‌ ಪಾವತಿಸುವಂತೆ ಒತ್ತಾಯಿಸಿ ಕಸ ಗುತ್ತಿಗೆದಾರರು ಕಸ ಸಂಗ್ರಹ ಮತ್ತು ವಿಲೇವಾರಿ ಸ್ಥಗಿತಗೊಳಿಸಿದ್ದರಿಂದ ಕೆ.ಆರ್‌.ಮಾರುಕಟ್ಟೆ, ಶಿವಾಜಿ ನಗರದ ರಸೆಲ್‌ ಮಾರುಕಟ್ಟೆ, ವಿಧಾನಸೌಧದ ಸುತ್ತಮುತ್ತ, ಯಶವಂತಪುರ, ಮಡಿವಾಳ, ಮಲ್ಲೇಶ್ವರ, ರಾಜಾಜಿ ನಗರ, ಬೊಮ್ಮನಹಳ್ಳಿ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಹಲವೆಡೆ ಕಸ ಸಂಗ್ರಹವಾಗಿತ್ತು. ಕೆಲವು ಬಡಾವಣೆಗಳಲ್ಲಿ ಕಸ ಸಂಗ್ರಹಣೆಗೆ ಬಿಬಿಎಂಪಿ ಸಿಬ್ಬಂದಿ ಬರದ ಹಿನ್ನೆಲೆಯಲ್ಲಿ ಕಸವನ್ನು ಕೆಲ ಜನರು ರಸ್ತೆ ಬದಿಯಲ್ಲೇ ಸುರಿದು ಹೋಗುತ್ತಿದ್ದ ದೃಶ್ಯ ಕಂಡುಬಂದಿತ್ತು.

BBMP: ಬೆಂಗ್ಳೂರಲ್ಲಿ ಕಸ ವಿಲೇವಾರಿ ಸ್ಥಗಿತ: ಗಬ್ಬೆದ್ದು ನಾರುವ ಆತಂಕ..!

ರಸ್ತೆ ಗುಂಡಿ ಮುಚ್ಚಲು ಸೇನೆ ಕರೆಸಲಾ: ಬಿಬಿಎಂಪಿಗೆ ಹೈಕೋರ್ಟ್‌ ಖಡಕ್‌ ಎಚ್ಚರಿಕೆ

ಬೆಂಗಳೂರು ನಗರದ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಬಿಬಿಎಂಪಿ(BBMP) ಅಸಮರ್ಥವಾಗಿದ್ದರೆ, ಆ ಜವಾಬ್ದಾರಿಯನ್ನು ಸೇನೆಗೆ ವಹಿಸಲಾಗುವುದು ಎಂದು ಹೈಕೋರ್ಟ್‌(High Court) ಖಡಕ್‌ ಆಗಿ ನುಡಿದೆ. ನಗರದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ವಿಜಯನ್‌ ಮೆನನ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿಗೆ ಈ ಎಚ್ಚರಿಕೆ ನೀಡಿತ್ತು. 

ನ್ಯಾಯಾಲಯದ ಆದೇಶದ ಹೊರತಾಗಿಯೂ ವಿಚಾರಣೆಗೆ ಗೈರಾಗಿದ್ದ ಕಾರಣಕ್ಕೆ ಹೈಕೋರ್ಟ್‌ ಜಾಮೀನು ಸಹಿತ ವಾರೆಂಟ್‌ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಎಂಜಿನಿಯರ್‌ ವಿಭಾಗದ ಮುಖ್ಯಸ್ಥ ಎಸ್‌.ಪ್ರಭಾಕರ್‌ ಗುರುವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು.
 

Follow Us:
Download App:
  • android
  • ios