ಕಾಂಗ್ರೆಸ್ನವರು ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಸಂಪೂರ್ಣ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇದರಿಂದ ಏನು ಸಾಧನೆ ಮಾಡುತ್ತಾರೋ ಗೊತ್ತಿಲ್ಲ. ಗ್ಯಾರಂಟಿಗೆ ಅವರ ಪಕ್ಷದವರೇ ವಿರೋಧಿಸುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
ವಿಜಯಪುರ (ಏ.14): ಕಾಂಗ್ರೆಸ್ನವರು ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಸಂಪೂರ್ಣ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇದರಿಂದ ಏನು ಸಾಧನೆ ಮಾಡುತ್ತಾರೋ ಗೊತ್ತಿಲ್ಲ. ಗ್ಯಾರಂಟಿಗೆ ಅವರ ಪಕ್ಷದವರೇ ವಿರೋಧಿಸುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಗ್ಯಾರಂಟಿಗಳನ್ನು ನಿಭಾಯಿಸಲಾಗದೇ ಹೆಣಗಾಡುತ್ತಿದೆ.
ಹೀಗಾಗಿ ಗ್ಯಾರಂಟಿಯೇತರ ಯೋಜನೆಗಳನ್ನು ಸ್ಥಗಿತಗೊಳಿಸಿದ್ಧಾರೆ. ವಿವಿಧ ನಿಗಮ ಮತ್ತು ಇಲಾಖೆಗಳಲ್ಲಿ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನುದಾನ ನುಂಗಿ ನೀರು ಕುಡಿದಿರುವ ಸರ್ಕಾರ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸಿತು. ಇದೀಗ ಶಿಕ್ಷಣ ಇಲಾಖೆಗೂ ಬಾಯಿ ಹಾಕಿದ್ದು, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
2025-26ನೇ ಸಾಲಿಗೆ ರಾಜ್ಯದಲ್ಲಿ ಒಟ್ಟು 7,483 ಸಂಸ್ಥೆಗಳು ಶಾಲೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1,310 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 448 ಸಂಸ್ಥೆಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, 208 ಸಂಸ್ಥೆಗಳಿಗೆ ಮಾನ್ಯತೆ ನವೀಕರಿಸಲಾಗಿದೆ. ಆ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಮತ್ತು ಮಾನ್ಯತೆ ನವೀಕರಣಗೊಂಡ ಜಿಲ್ಲೆಗಳಲ್ಲಿ ವಿಜಯಪುರ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ ಅವರು ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಕುರಿತು ಅನುಮಾನ ವ್ಯಕ್ತಪಡಿಸಲಾಗಿ ಸಾಕಷ್ಟು ಅಕ್ರಮ ನಡೆದಿರುವುದು ಹಂತ ಹಂತವಾಗಿ ಬೆಳಕಿಗೆ ಬಂದಿದೆ. ಒಂದೊಂದು ಶಾಲೆ ನವೀಕರಣಕ್ಕೂ ಕನಿಷ್ಠ 7 ಲಕ್ಷ ರೂ. ಹಾಗೂ ಪ್ರಥಮ ಮಾನ್ಯತೆಗೆ ಅಂದಾಜು 10 ರಿಂದ 15 ಲಕ್ಷ ರೂ. ಲಂಚ ಪಡೆದಿರುವ ಆರೋಪಗಳಿವೆ. ಕೆಳ ಹಂತದಿಂದ ಮೇಲಿನ ಹಂತದವರೆಗಿನ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ ಎಂದು ಆರೋಪಿಸಿದರು.
ವಿಜಯಪುರದಲ್ಲಿ ಏನೂ ಮಾಡಿಲ್ಲ: ಜಿಗಜಿಣಗಿ
ಹಿಂದೆ ವಿರೇಂದ್ರ ಪಾಟೀಲರನ್ನು ಏಕಾಏಕಿ ಸಿಎಂ ಸ್ಥಾನದಿಂದ ತೆಗೆದರು. ಆಗಿನಿಂದಲೇ ಅಧಿಕಾರಕ್ಕಾಗಿ ಕಾಂಗ್ರೆಸ್ ಪ್ರವೃತ್ತಿಯಾಗಿದೆ, ಈಗಲೂ ಅದೇ ಆಗುತ್ತಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನಲ್ಲಿರೋವಷ್ಟು ಕಿತ್ತಾಟ ಎಲ್ಲೂ ಇಲ್ಲ. ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಪ್ರಯೋಜನ ಇಲ್ಲದ ಸರ್ಕಾರ. ಎಲ್ಲರಿಗೂ ಪುಸಗಟ್ಟೆ ಕೊಟ್ಟು ರಾಜ್ಯದ ಅಭಿವೃದ್ದಿ ಮರೆತಿದ್ದಾರೆ. ಈ ಸರ್ಕಾರ ಇರಬಾರದು ಜನರು ಜಾಣರಾಗಬೇಕು, ವಿಜಯಪುರದಲ್ಲಿ ಏನೂ ಮಾಡಿಲ್ಲ. ವಿಜಯಪುರದ ಡಿಡಿಪಿಐ ಕಚೇರಿಯಲ್ಲಿ ಕಾನೂನು ಬಾಹಿರ ಕಾರ್ಯಗಳಾಗಿವೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಡಿಡಿಪಿಐ ಕಚೇರಿಯಲ್ಲಿ ಸಮಸ್ಯೆಯಾಗಿದೆ ಎಂದಿದ್ದಾರೆ. ಸಿಎಂ ಸಹ ಸಮಸ್ಯೆ ಆಗಿದೆ ಎಂದಿದ್ದಾರೆ, ಆದರೆ, ಯಾರ ಮೇಲೂ ಕ್ರಮ ತೆಗೆದುಕೊಂಡಿಲ್ಲ. ನಿಮಗೆ ತಾತಕ್ ಇದ್ದರೆ ಕ್ರಮ ತೆಗೆದುಕೊಳ್ಳಿ.


