ಕರಾವಳಿಯಲ್ಲಿ ನಿರಂತರ ಮಳೆ : ಕಾಡುತ್ತಿದೆ ಆತಂಕ
- ಕಳೆದ ಹಲವು ದಿನಗಳಿಂದ ಕರಾವಳಿಯಲ್ಲಿ ನಿರಂತರವಾಗಿ ಮಳೆ
- ಭತ್ತ ಬೆಳೆಗಾರರು ಕಂಗಾಲಾಗಿದ್ದಾರೆ. ಅತ್ತ ಭತ್ತ ಕಟಾವು ಮಾಡಲೂ ಆಗದೆ, ಬಿಡಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ
ಮಂಗಳೂರು (ಅ.24): ಕಳೆದ ಹಲವು ದಿನಗಳಿಂದ ಕರಾವಳಿಯಲ್ಲಿ (Costal ) ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭತ್ತ (Paddy) ಬೆಳೆಗಾರರು (Farmers) ಕಂಗಾಲಾಗಿದ್ದಾರೆ. ಅತ್ತ ಭತ್ತ ಕಟಾವು ಮಾಡಲೂ ಆಗದೆ, ಬಿಡಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ್ದು, ನಷ್ಟದ ಭೀತಿ ಎದುರಿಸುತ್ತಿದ್ದಾರೆ.
ದಕ್ಷಿಣ ಕನ್ನಡ (Dakshina kannada) ಜಿಲ್ಲೆಯಲ್ಲಿ 11,747 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದರೆ, ಉಡುಪಿಯಲ್ಲಿ 35,726 ಹೆಕ್ಟೇರ್ ಜಮೀನಿನಲ್ಲಿ (land) ಭತ್ತ ಫಸಲು ಬೆಳೆದು ನಿಂತಿದೆ. ಸಾಂಪ್ರದಾಯಿಕ ಭತ್ತ ಕೃಷಿಗೆ (Agriculture) ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿ ಒಂದೂವರೆ ಸಾವಿರ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಕೃಷಿ ಮಾಡಲಾಗಿದೆ. ಆದರೆ ಈಗ ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತುಮಕೂರಿನ ಪ್ರಸಿದ್ಧ ‘ಸಿದ್ದು’ ಹಲಸಿಗೆ ಕರಾವಳಿಯಲ್ಲಿ ಕಸಿ..!
ಕಟಾವು ಶುರುವಾದಾಗಲೇ ಮಳೆ: ಸುಮಾರು 8-10 ದಿನಗಳ ಹಿಂದೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಭತ್ತ ಕಟಾವು ಮಾಡಲು ರೈತರು ಆರಂಭಿಸಿದ್ದರು. ಅದೇ ವೇಳೆಗೆ ವಾಯುಭಾರ ಕುಸಿತದಿಂದ ಮಳೆಯೂ (Rain) ಆರಂಭವಾಗಿತ್ತು. ಹಾಗಾಗಿ ಬಹುತೇಕರು ಕಟಾವು ಕಾರ್ಯ ಸ್ಥಗಿತಗೊಳಿಸಿದ್ದರು. ಇನ್ನೂ ಶೇ.85-90ರಷ್ಟುಪ್ರದೇಶದಲ್ಲಿ ಕಟಾವು ಬಾಕಿಯಿದೆ. ಭತ್ತ ದಿನದಿಂದ ದಿನಕ್ಕೆ ಮಾಗುತ್ತಾ ಗದ್ದೆಗೆ ಫಸಲು ಉದುರಿ ಬೀಳುವ ಹಂತ ತಲುಪಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಪ್ರವಾಹ ಹಾನಿ: ನಾಲ್ಕೈದು ದಿನಗಳ ಹಿಂದೆ ಸುರಿದ ಭೀಕರ ಮಳೆಯಿಂದಾಗಿ ಜಿಲ್ಲೆಯ ಅನೇಕ ತಗ್ಗು ಪ್ರದೇಶಗಳು, ನದಿ, ತೋಡುಗಳ ಬದಿಯ ಬತ್ತದ ಗದ್ದೆಗಳಿಗೆ ಪ್ರವಾಹ (Flood) ಬಂದು ಹಾನಿ ಸಂಭವಿಸಿದೆ. ಅಂತಹ ಗದ್ದೆಗಳಲ್ಲಿ ಇನ್ನೂ ನೀರು ನಿಂತಿದ್ದು, ಮಳೆ ಇನ್ನೂ ಮುಂದುವರಿದರೆ ಬತ್ತ ಫಸಲು ಕೈಗೂಡುವುದು ಅನುಮಾನ. ಮಳೆಯಿಂದ ಬತ್ತದ ಹುಲ್ಲು ಸರಿಯಾಗಿ ಒಣಗದೆ ಇದ್ದರೆ ಅದಕ್ಕೂ ಸರಿಯಾದ ಬೆಲೆ ಸಿಗುವುದಿಲ್ಲ ಎಂದು ರೈತ ನಾಗರಾಜ ಅಳಲು ತೋಡಿಕೊಂಡಿದ್ದಾರೆ.
ಗುಡ್ ನ್ಯೂಸ್ : ಪ್ರತಿ ರೈತರಿಗೆ ಸಾಲ ನೀಡುವ ಯೋಜನೆ
‘ಈಗ ಜಿಲ್ಲಾದ್ಯಂತ ಭತ್ತ ಕೊಯ್ಲಿಗೆ ರೆಡಿಯಾಗಿದೆ. ಕಾರ್ಮಿಕರ (Labours) ಮೂಲಕ ಕಟಾವು ಮಾಡಿಸುವುದು ಆರ್ಥಿಕವಾಗಿ ಕಷ್ಟಕರವಾಗಿರುವುದರಿಂದ ಕಟಾವು ಯಂತ್ರಗಳನ್ನು ಹೆಚ್ಚು ಬಳಸಲಾಗುತ್ತದೆ. ಆದರೆ ಮಳೆಯಿಂದಾಗಿ ಗದ್ದೆಯಲ್ಲಿ ನೀರಿನ ಅಂಶ ಇರುವುದರಿಂದ ಯಂತ್ರದ ಮೂಲಕ ಕಟಾವು ಮಾಡಲಾಗದು. ಹೀಗೇ ಮುಂದುವರಿದರೆ ಬತ್ತ ಗದ್ದೆಯಲ್ಲೇ ಮೊಳಕೆ ಬಿಡುವ ಅಪಾಯವಿದೆ’ ಎಂದು ರೈತರ ಸಂಘ (Raitha sangh) ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿಹೇಳುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಸರಾಸರಿ 13.4 ಮಿಮೀ ಮಳೆಯಾಗಿದ್ದು, ಜನವರಿಯಿಂದ ಈವರೆಗೆ ಒಟ್ಟು 3553.1 ಮಿಮೀ ಮಳೆ ದಾಖಲಾಗಿದೆ.
ದ.ಕ. ಜಿಲ್ಲೆಯಲ್ಲಿ ಈಗಾಗಲೇ ಶೇ.10ರಿಂದ 15ರಷ್ಟುಪ್ರದೇಶದಲ್ಲಿ ಭತ್ತ ಕಟಾವು ಆಗಿದೆ. ನಿರಂತರ ಮಳೆ ಸುರಿಯಲು ಆರಂಭಿಸಿದ ಬಳಿಕ ಕಟಾವು ಸ್ವಲ್ಪ ಕಡಿಮೆ ಮಾಡಿದ್ದಾರೆ. ಮಳೆ ಬಿಡುವು ನೀಡಿದಾಕ್ಷಣ ಕಟಾವು ಕಾರ್ಯ ಚುರುಕುಗೊಳ್ಳಲಿದೆ.
- ಸೀತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ