ಅದೊಂದು ಒಂಟಿ ಮಹಿಳೆ ವಾಸಿಸುವ ಮನೆ. ತೀರಾ ಬಡತದಲ್ಲಿರುವ ಆ ಮಹಿಳೆಗೆ ತಾನು ಕಟ್ಟುವ ಅಲ್ಪ ಸ್ವಲ್ಪ ಬೀಡಿ ಮತ್ತು ಸರ್ಕಾರದಿಂದ ಸಿಗುವ ಗೃಹಲಕ್ಷ್ಮೀ ಯೋಜನೆಯೇ ಬದುಕಿಗೆ ಆಧಾರವಾಗಿತ್ತು.

ಪುತ್ತೂರು (ಜೂ.11): ಅದೊಂದು ಒಂಟಿ ಮಹಿಳೆ ವಾಸಿಸುವ ಮನೆ. ತೀರಾ ಬಡತದಲ್ಲಿರುವ ಆ ಮಹಿಳೆಗೆ ತಾನು ಕಟ್ಟುವ ಅಲ್ಪ ಸ್ವಲ್ಪ ಬೀಡಿ ಮತ್ತು ಸರ್ಕಾರದಿಂದ ಸಿಗುವ ಗೃಹಲಕ್ಷ್ಮೀ ಯೋಜನೆಯೇ ಬದುಕಿಗೆ ಆಧಾರವಾಗಿತ್ತು. ಈ ಮನೆಗೆ ಭೇಟಿ ನೀಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಹಿಳೆಯ ಆರೋಗ್ಯ ವಿಚಾರಿಸುವುದರ ಜೊತೆಗೆ ಮನೆಯಲ್ಲಿ ಇನ್ನೂ ಗ್ಯಾಸ್ ಸ್ಟವ್ ಇಲ್ಲ ಎಂಬುದನ್ನು ಮನಗಂಡು ಆ ಮನೆಗೆ ತಕ್ಷಣವೇ ಸ್ಟವ್ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಲು ಭಾನುವಾರ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದರು. ಈ ಸಂದರ್ಭ ಒಂದಷ್ಟು ಮಹಿಳೆಯರು ಶಾಸಕರ ಮುಂದೆ ಬಂದು ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸುತ್ತಾ ನಮ್ಮ ಮನೆಯ ಮುಂಭಾಗದ ರಸ್ತೆಗೆ ಚರಂಡಿ ಇಲ್ಲದೆ ಮಳೆ ನೀರು ಮನೆಯೊಳಗಡೆ ಬರುತ್ತದೆ. ಇದನ್ನು ವೀಕ್ಷಣೆ ಮಾಡಬೇಕು ಎಂದು ಭಿನ್ನವಿಸಿಕೊಂಡಿದ್ದರು. ಅದಕ್ಕಾಗಿ ಶಾಸಕರು ಸ್ಥಳಕ್ಕೆ ತೆರಳಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭ ಶಾಸಕರಿಗೆ ಈ ಮನೆ ಗೋಚರಿಸಿತ್ತು. ಮನೆಯಲ್ಲಿ ಗಿರಿಜಾ ಎಂಬ ಮಹಿಳೆ ಒಂಟಿಯಾಗಿ ವಾಸವಾಗಿದ್ದರು. ವೃದ್ಧಾಪ್ಯದಲ್ಲಿರುವ ಆ ಮಹಿಳೆಯ ಮನೆಯೊಳಗೆ ತೆರಳಿದ ಶಾಸಕರು ಅವರ ಆರೋಗ್ಯ ವಿಚಾರಿಸಿದರು.

ಅದುವೇ ನನಗೆ ಆಧಾರ

ಈ ವೇಳೆ ಗಿರಿಜಾ ತಾನು ಈ ಮನೆಯಲ್ಲಿ 30 ವರ್ಷಗಳಿಂದ ವಾಸವಾಗಿದ್ದೇನೆ. ಮಗನಿದ್ದು ಆತ ಮನೆಗೆ ಬರುವುದಿಲ್ಲ, ಬೀಡಿ ಕಟ್ಟಿ ಬದುಕುತ್ತಿದ್ದೇನೆ. ಸರಕಾರದಿಂದ ಬರುವ ಪಂಚ ಗ್ಯಾರಂಟಿ ನನ್ನನ್ನು ಜೀವಂತವಾಗಿ ಉಳಿಸಿದೆ. ಅದುವೇ ನನಗೆ ಆಧಾರವಾಗಿದೆ ಎಂದು ತನ್ನ ನೋವುಗಳನ್ನು ಶಾಸಕರ ಮುಂದೆ ತೋಡಿಕೊಂಡರು. ಮನೆಯಲ್ಲಿ ಅಡುಗೆಗೆ ಗ್ಯಾಸ್ ಸ್ಟವ್ ಕೂಡ ಇಲ್ಲದಿರುವುದನ್ನು ಅರಿತ ಶಾಸಕರು ತಾನು ಗ್ಯಾಸ್ ಸಂಪರ್ಕ ಕೊಡಿಸುವುದಾಗಿ ಭರವಸೆ ನೀಡಿ ಹಿಂದಿರುಗಿದ್ದರು.

ಅಶಕ್ತ ಮಹಿಳೆಯ ಸಮಸ್ಯೆಗೆ ಸ್ಪಂದಿಸಿ ಗ್ಯಾಸ್ ಸ್ಟವ್ ಸಂಪರ್ಕದ ಭರವಸೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಂಗಳವಾರ ಹೊಸ ಗ್ಯಾಸ್ ಒಲೆ ಮತ್ತು ಸಿಲಿಂಡರ್ ಸಹಿತ ಮತ್ತೊಮ್ಮೆ ಸ್ವತಃ ಗಿರಿಜಾ ಅವರ ಮನೆಗೆ ತೆರಳಿ ಗ್ಯಾಸ್ ಸಂಪರ್ಕಗೊಳಿಸಿ ಹಿಂದಿರುಗಿದ್ದಾರೆ. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.