ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ ಗರ್ಭಿಣಿಯನ್ನಾಗಿಸಿ ವಂಚಿಸಿದ ಪ್ರಕರಣ ಇದಾಗಿದೆ. ಡಿಎನ್ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಎಂದು ಸಾಬೀತಾದರೂ ಮದುವೆಗೆ ನಿರಾಕರಿಸುತ್ತಿದ್ದಾನೆ.

ಪುತ್ತೂರು (ಡಿ.30): ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಎಂಬಾತ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿ ವಂಚಿಸಿದ ಪ್ರಕರಣ ಈಗ ಕಾನೂನು ಸಮರಕ್ಕೆ ತಿರುಗಿದೆ. ನ್ಯಾಯಾಲಯದ ಆದೇಶದಂತೆ ನಡೆಸಲಾದ ಡಿಎನ್​ಎ (DNA) ಪರೀಕ್ಷೆಯಲ್ಲಿ ಕೃಷ್ಣ ಜೆ. ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದ್ದರೂ, ಆತ ಯುವತಿಯನ್ನು ಮದುವೆಯಾಗಲು ಹಠ ಹಿಡಿದು ನಿರಾಕರಿಸುತ್ತಿದ್ದಾನೆ. ಸಂತ್ರಸ್ಥ ಮಗುವಿಗೆ ಜನ್ಮ ನೀಡಿದ 6 ತಿಂಗಳಿಗೂ ಹೆಚ್ಚು ಕಾಲವಾಗಿದೆ. ಇನ್ನೂ ಮಗುವಿಗೆ ನಾಮಕರಣ ಮಾಡಿಲ್ಲ. ಈ ನಡುವೆ ಇವರಿಬ್ಬರ ನಡುವೆ ಸಂಧಾನ ನಡೆಸುವ ಎಲ್ಲಾ ರೀತಿಯ ಪ್ರಯತ್ನಗಳೂ ವಿಫಲವಾಗಿದೆ. ಇನ್ನೊಂದೆಡೆ ಜಗನ್ನಿವಾಸ್‌ ರಾವ್‌ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ.

Add Asianetnews Kannada as a Preferred SourcegooglePreferred

ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಕೆ.ಪಿ. ನಂಜುಂಡಿ ಅವರ ನೇತೃತ್ವದಲ್ಲಿ ಹಲವು ಬಾರಿ ರಾಜಿ ಸಂಧಾನಕ್ಕೆ ಪ್ರಯತ್ನ ನಡೆಸಲಾಗಿತ್ತು. ಹಣದ ಆಮಿಷವನ್ನೂ ಒಡ್ಡಲಾಗಿತ್ತು ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ. ಆದರೆ, ಆರೋಪಿ ಕುಟುಂಬದ "ವಿಚಿತ್ರ ಬೇಡಿಕೆಗಳ" ಕಾರಣದಿಂದ ಸಂಧಾನ ಪ್ರಕ್ರಿಯೆ ಸಂಪೂರ್ಣ ಮುರಿದುಬಿದ್ದಿದೆ. ಇದರಿಂದಾ ನ್ಯಾಯ ಪಡೆಯಲು ಕಾನೂನು ಸಮರವೊಂದೇ ದಾರಿ ಎಂದು ಸಂತ್ರಸ್ಥ ಕುಟುಂಬ ತಿಳಿಸಿದೆ.

ಘಟನೆಯ ಹಿನ್ನಲೆ ಏನು?

ಶಾಲಾ ದಿನಗಳಿಂದಲೂ ಪರಿಚಯವಿದ್ದ ಹಿಂದೂ ಯುವತಿಯ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆಕೆ ಗರ್ಭಿಣಿ ಆದ ವಿಚಾರ ಗೊತ್ತಾದ ಬಳಿಕ ಮದುವೆಯಾಗಲು ಆತ ನಿರಾಕರಿಸಿದ್ದ. ಕೊನೆಗೆ ಎಲ್ಲರ ಒತ್ತಾಯದ ಬಳಿಕ ಮದುವೆ ಆಗುವುದಾಗಿ ಒಪ್ಪಿದ್ದ. ಆದರೆ, ಈ ಹಂತದಲ್ಲಿ ಅವನಿಗೆ 21 ವರ್ಷ ಪೂರ್ಣವಾಗಿರಲಿಲ್ಲ. 21 ವರ್ಷ ಆಗುತ್ತಿದ್ದಂತೆ ಮದುವೆ ಮಾಡೋದಾಗಿ ಬಿಜೆಪಿ ಮುಖಂಡ ಜಗನ್ನಿವಾಸ್‌ ರಾವ್‌ ಭರವಸೆ ನೀಡಿದ್ದರು. ಆದರೆ, ಮಗು ಜನಿಸುತ್ತಿದ್ದಂತೆ ಕೃಷ್ಣ ರಾವ್‌ ಮದುವೆಗೆ ನಿರಾಕರಿಸಿದಾಗ ಪ್ರಕರಣ ಪೊಲೀಸ್‌ ಠಾಣೆಗೆ ಏರಿತ್ತು.

ಈ ಹಂತದಲ್ಲಿ ಬಂಧನಕ್ಕೆ ಒಳಗಾಗಿದ್ದ ಕೃಷ್ಣ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಈ ಹಂತದಲ್ಲಿ ಮಗು ನನ್ನದಲ್ಲ ಎಂದು ನಾಟಕವಾಡಲು ಶುರು ಮಾಡಿದ್ದ. ಬಳಿಕ ಕೋರ್ಟ್‌ ಆದೇಶದಂತೆ ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು. ಆಗ ಆರೋಪಿ, ಸಂತ್ರಸ್ಥೆ ಹಾಗೂ ಮಗುವಿನ ರಕ್ತದ ಮಾದರಿಯನ್ನು ತೆಗೆದು ಪರೀಕ್ಷೆ ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಇದರ ವರದಿ ಬಂದು, ಮಗು ಕೃಷ್ಣ ಅವರದ್ದೇ ಎನ್ನುವುದು ಸಾಬೀತಾಗಿತ್ತು.

ಹೋರಾಟದ ಹಾದಿ

"ನನ್ನ ಮಗುವಿಗೆ ತಂದೆ ಮತ್ತು ನನಗೆ ಪತಿ ಸಿಗಲಿ ಎಂಬ ಆಸೆಯಿಂದ ಸಂಧಾನಕ್ಕೆ ಕಾದಿದ್ದೆ. ಆದರೆ ಈಗ ನ್ಯಾಯಾಲಯ ನೀಡುವ ತೀರ್ಪನ್ನೇ ಎದುರು ನೋಡುತ್ತಿದ್ದೇನೆ" ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಇತ್ತ ಘಟನೆಯ ಬೆನ್ನಲ್ಲೇ ಬಿಜೆಪಿ ಜಗನ್ನಿವಾಸ್ ರಾವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ಆರೋಪಿಗೆ ಕಾನೂನು ಮೂಲಕವೇ ಶಿಕ್ಷೆ ಕೊಡಿಸಲು ಸಂತ್ರಸ್ತ ಕುಟುಂಬ ನಿರ್ಧರಿಸಿದೆ.

ಪ್ರಕರಣದ ಬಗ್ಗೆ ಮಾತನಾಡಿರುವ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆಪಿ ನಂಜುಂಡಿ , ಕೋರ್ಟ್ ಮೂಲಕ ಶಿಕ್ಷೆಯಾಗಬಾರದು. ಎರಡು ಕುಟುಂಬಗಳು ಒಂದಾಗಲಿ ಎಂದು ಸಂಧಾನ ಮಾಡಿದ್ದೆವು. ಯುವಕನ‌ ಮನೆಯವರು ತೀರಾ ವಿಚಿತ್ರವಾದ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಕಾನೂನು ಮೊರೆ ಹೋಗುವ ತೀರ್ಮಾನ ಆಗಿದೆ. ಕೋರ್ಟ್ ಮೂಲಕ ಸಿಗುವ ನ್ಯಾಯವನ್ನು ತಲೆಬಾಗಿ ಸ್ವೀಕರಿಸುತ್ತೇವೆ ಎಂದಿದ್ದಾರೆ.