57 ವರ್ಷದ ಫೈನಾನ್ಶಿಯರ್ ಮೋಹನ್ ರಾಜ್ ಅವರು ತಮ್ಮ ಪಿಯು ಶಿಕ್ಷಣ ಪೂರ್ಣಗೊಳಿಸದ ಕೊರಗನ್ನು ನೀಗಿಸಿಕೊಂಡಿದ್ದಾರೆ. ತಮ್ಮ ಕಿರಿಯ ಮಗನ ಜೊತೆ ಪರೀಕ್ಷೆ ಬರೆದು, ಕಲಾ ವಿಭಾಗದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಮಗ ವಾಣಿಜ್ಯ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ.
ಉಳ್ಳಾಲ (ಏ.11): ಮೂವರು ಮಕ್ಕಳ ತಂದೆಯಾಗಿದ್ದರೂ ಪಿಯು ಶಿಕ್ಷಣ ಪೂರ್ಣಗೊಳಿಸದ ಕೊರಗು ಹೊಂದಿದ್ದ 57 ವರ್ಷದ ಫೈನಾನ್ಶಿಯರ್ ಇದೀಗ ತಮ್ಮ ಮಗನ ಜೊತೆಗೆ ಪರೀಕ್ಷೆ ಬರೆದು 324 ಅಂಕದೊಂದಿಗೆ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
Add Asianetnews Kannada as a Preferred Source

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೊಲ್ಯ ಕಣೀರುತೋಟ ನಿವಾಸಿ ಮೋಹನ್ ರಾಜ್ ತೇರ್ಗಡೆಯಾದ ವ್ಯಕ್ತಿ. ಚಿಟ್ಫಂಡ್ ವ್ಯವಹಾರ ನಡೆಸುತ್ತಿರುವ ಇವರು ಕಲಾ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಇದೇ ವೇಳೆ ಅವರ ಕಿರಿಯ ಮಗ ಕ್ಷಿತಿಜ್ ರಾಜ್ ಸಹ ವಾಣಿಜ್ಯ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾನೆ.
ಮೋಹನ್ ಅವರು 1984ರಲ್ಲಿ ಪ್ರಥಮ ಪಿಯುಸಿ ಪೂರ್ಣಗೊಳಿಸಿದ್ದರು. ಆರ್ಥಿಕ ಸಂಕಷ್ಟದಿಂದ ದ್ವಿತೀಯ ಪಿಯು ಮುಂದುವರಿಸಲು ಆಗಿರಲಿಲ್ಲ. 2025ರ ನವೆಂಬರ್ನಿಂದ ತೊಕ್ಕೊಟ್ಟಿನ ಖಾಸಗಿ ಟ್ಯೂಷನ್ಗೆ ತೆರಳಿ ಪರೀಕ್ಷೆಗೆ ಸಿದ್ಧತೆ ತಯಾರಾಗಿದ್ದರು. ಮೋಹನ್ರ ಪ್ರಯತ್ನಕ್ಕೆ ಪತ್ನಿ, ಮಕ್ಕಳು ಪ್ರೋತ್ಸಾಹ ನೀಡಿದ್ದರು.



