ರಸ್ತೆ ದುರಸ್ತಿಗೆ ನಿಂತ ಜನಪ್ರತಿನಿಧಿ : ತಮ್ಮ ವೈಯಕ್ತಿಕ ಹಣದಿಂದ ಕಾಮಗಾರಿ
ಎರಡು ವರ್ಷಗಳ ಹಿಂದೆ ರಸ್ತೆಯ ಕಾಮಗಾರಿಯನ್ನು ಮಾಡಲಾಗಿದ್ದು, ಅದು ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಸರಗೂರು[ಸೆ.20]: ಪಟ್ಟಣದ ಹೃದಯ ಭಾಗದ ಒಂದನೇ ಮುಖ್ಯ ರಸ್ತೆಯು ಹಲವು ವರ್ಷಗಳಿಂದ ಅಧ್ವಾನಗೊಂಡು ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದ್ದನ್ನು ಮನಗಂಡ ಪಪಂ ಸದಸ್ಯರೊಬ್ಬರು ತಮ್ಮ ವೈಯಕ್ತಿಕ ಹಣದಿಂದ ರಸ್ತೆ ಸರಿಪಡಿಸಿ ಪಾದಚಾರಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಪಟ್ಟಣದ ಒಂದನೇ ಮುಖ್ಯ ರಸ್ತೆಯು ಎರಡು ವರ್ಷಗಳಿಂದ ಹಳ್ಳ ಕೊಳ್ಳಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಯಾಗಿತ್ತು. ಇದರಿಂದಾಗಿ ಸಾರ್ವಜನಿಕರು ಭಯದಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಪಪಂ ಸದಸ್ಯ ಜಿ.ವಿ. ಮಧುಸೂದನ್ ತಮ್ಮ ಸ್ವಂತ ಹಣ 35 ಸಾವಿರ ರು. ವೆಚ್ಚದಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ರಸ್ತೆಯ ಕಾಮಗಾರಿಯನ್ನು ಮಾಡಲಾಗಿದ್ದು, ಅದು ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಒಂದನೇ ಮುಖ್ಯ ರಸ್ತೆಯಿಂದ ವಿವೇಕಾನಂದ ಆಸ್ಪತ್ರೆಯ ಬಳಿ ಇರುವ ವೃತ್ತದವರೆಗೂ ಸುಮಾರು 1.5 ಕಿ.ಮೀ. ದೂರದವರೆಗೂ ರಸ್ತೆಯು ಹಳ್ಳ ಕೊಳ್ಳಗಳಿಂದ ಕೂಡಿದ್ದು, ವಾಹನಗಳು ಸಂಚಾರಕ್ಕೆ ಅಡ್ಡಿಯಾಗಿತ್ತು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ ರೂ ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸದ ಹಿನ್ನೆಲೆ ಪಪಂನ 10ನೇ ವಾರ್ಡ್ ನರ್ ಸದಸ್ಯರಾದ ಜಿ.ವಿ. ಮಧುಸೂದನ್ ಅವರು ತಮ್ಮ ಸ್ವಂತ ಹಣದಿಂದ ಮಣ್ಣು ಹಾಕಿಸಿ, ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟರು. ಇದನ್ನು ಗಮನಿಸಿದ ಸಾರ್ವಜನಿಕರು ಮಧುಸೂದನ್ ಅವರನ್ನು ಪ್ರಶಂಶಿಸಿದರು. ಈ ವೇಳೆ ಪಪಂ ಸದಸ್ಯ ಮಹಮದ್ ಉಸ್ಮಾನ್, ಯೋಗೀಶ್ ಸ್ಥಳದಲ್ಲಿ ಇದ್ದರು.