Asianet Suvarna News Asianet Suvarna News

ಹಿತ್ತಲಲ್ಲಿ 8 ತೆಂಗಿನ ಮರಗಳಿದ್ರೆ ವರ್ಷಕ್ಕೆ ಲಕ್ಷ ಆದಾಯ..!

ಮನೆ ತೋಟದಲ್ಲಿ 8 ತೆಂಗಿನ ಮರಗಳಿದ್ದರೇ ಯಾವುದೇ ಶ್ರಮ ಇಲ್ಲದೇ ವರ್ಷಕ್ಕೆ 1 ಲಕ್ಷ ರು. ಆದಾಯ ಪಡೆಯಬಹುದು. ಸ್ವಲ್ಪ ಶ್ರಮ ಪಡುವುದಕ್ಕೆ ಸಿದ್ಧ ಇದ್ದರೆ ವರ್ಷಕ್ಕೆ 2.40 ಲಕ್ಷ ರು. ಲಾಭ ಪಡೆಯಬಹುದು. ಹೇಗೆ, ಏನು.? ಇಲ್ಲಿ ಓದಿ

 

producing kalparasa brings lakh of profit to farmers
Author
Bangalore, First Published Mar 3, 2020, 11:38 AM IST

ಉಡುಪಿ(ಮಾ.03): ಮನೆ ತೋಟದಲ್ಲಿ 8 ತೆಂಗಿನ ಮರಗಳಿದ್ದರೇ ಯಾವುದೇ ಶ್ರಮ ಇಲ್ಲದೇ ವರ್ಷಕ್ಕೆ 1 ಲಕ್ಷ ರು. ಆದಾಯ ಪಡೆಯಬಹುದು. ಸ್ವಲ್ಪ ಶ್ರಮ ಪಡುವುದಕ್ಕೆ ಸಿದ್ಧ ಇದ್ದರೆ ವರ್ಷಕ್ಕೆ 2.40 ಲಕ್ಷ ರು. ಲಾಭ ಪಡೆಯಬಹುದು.

ಇದು ಉಡುಪಿಯ ಭಾರತೀಯ ಕಿಸಾನ್‌ ಸಂಘ ಮತ್ತು ಕಾಸರಗೋಡಿನ ಕೇಂದ್ರೀಯ ತೋಟದ ಬೆಳಗಳ ಸಂಶೋಧನಾ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಆರಂಭವಾಗಿರುವ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಬಾರ ಉತ್ಪಾದಕರ ಕಂಪೆನಿ ಯೋಜನೆ.

ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ..!

ತೆಂಗಿನ ಮರಗಳಿಂದ ಕಲ್ಪರಸ ಎಂಬ ಆರೋಗ್ಯವರ್ಧಕ ಪಾನೀಯವನ್ನು ತಯಾರಿಸುವ ರಾಜ್ಯದ 2ನೇ ಘಟಕ ಉಡುಪಿಯ ಕುಂದಾಪುರ ಜಪ್ತಿ ಎಂಬಲ್ಲಿ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಕಲ್ಪರಸ ಯಶಸ್ವಿಯಾಗಿ ತಯಾರಿಸಲಾಗಿದೆ. ಏಪ್ರಿಲ್‌ ಮೊದಲ ವಾರದಿಂದ ಮಾರುಕಟ್ಟೆಯಲ್ಲಿ ಈ ಕಲ್ಪರಸ ಮಾರುಕಟ್ಟೆಪ್ರವೇಶಿಸಲಿದೆ.

ಕಲ್ಪರಸಕ್ಕೆ ಅಮಲು ಇಲ್ಲ

ಕಲ್ಪರಸ ಎಂಬುದು ನೀರಾದ ಸಿಹಿರೂಪ. ಅದು ಹುಳಿಯಾದರೆ ಅಮಲು ಪದಾರ್ಥವಾಗುತ್ತದೆ. ಅದನ್ನು ತೆಂಗಿನ ಮರದಿಂದ ನೀರಾವನ್ನು ತೆಗೆದು ಬಾಟಲಿಗಳಲ್ಲಿ ತುಂಬಿ, ಹುಳಿಯಾಗದಂತೆ ತಾಪಮಾನ ನಿಯಂತ್ರಣ ವ್ಯವಸ್ಥೆಯಲ್ಲಿ ಮಾರುವುದೇ ಈ ಉಕಾಸ ಉತ್ಪಾದಕರ ಕಂಪೆನಿಯ ಯೋಜನೆಯಾಗಿದೆ.

ಈ ಉತ್ಪಾದಕರ ಕಂಪೆನಿ ಸ್ಥಾಪನೆಗೆ ಭಾರತೀಯ ಕಿಸಾನ್‌ ಸಂಘದ ಪ್ರಾಯೋಜಕತ್ವದಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ 54 ತೆಂಗು ಬೆಳಗಾರರ ಸೊಸೈಟಿಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 4820 ಮಂದಿ ಸದಸ್ಯರಿದ್ದಾರೆ. ಪ್ರತಿಯೊಬ್ಬರ ಮನೆಯ 8 ತೆಂಗಿನ ಮರಗಳಂತೆ ಒಟ್ಟು 38, 560 ಮರಗಳಿಂದ ಕಲ್ಪರಸ ಇಳಿಸಲಾಗುತ್ತದೆ.

8 ಮರಕ್ಕೆ ಲಕ್ಷ ರು. ಲಾಭ

ಈ ಕಂಪೆನಿಗೆ ಕಲ್ಪರಸ ಇಳಿಸಲು ರೈತರು 8 ಮರಗಳನ್ನು ನೀಡಿದರೆ ಕಂಪನಿ ವರ್ಷಕ್ಕೆ 1 ಲಕ್ಷ ರು. ನೀಡುತ್ತದೆ. ರೈತರೇ ಸ್ವತಃ ತರಬೇತಿ ಪಡೆದು ತಾವೇ ತಮ್ಮದೇ 8 ತೆಂಗಿನ ಮರಗಳಿಂದ ದಿನಕ್ಕೆ 2 ಬಾರಿ ಕಲ್ಪರಸವನ್ನು ಇಳಿಸಿದರೆ ಅಂತಹವರಿಗೆ ಕಂಪೆನಿ 2.40 ಲಕ್ಷ ರು. ನೀಡುತ್ತದೆ. ಮರ ಹತ್ತುವುದಕ್ಕೆ ಏಣಿ, ಕಲ್ಪರಸವನ್ನು ಇಳಿಸುವ ವಿಶಿಷ್ಟರೀತಿಯಲ್ಲಿ ವಿನ್ಯಾಸಗೊಳಿಸಿರುವ ಪಾತ್ರೆ, ಅದನ್ನು ಸಂಗ್ರಹಿಸಿಡಲು ತಾಪಮಾನ ನಿಯಂತ್ರಿಕ ಬಾಕ್ಸ್‌ಗಳನ್ನು ಕಂಪನಿಯೇ ನೀಡುತ್ತದೆ.

ಬೋನಸ್‌ ಲಾಭವೂ ಇದೆ

ತೆಂಗಿನ ಮರಗಳನ್ನು ನೀಡುವ ರೈತರಿಗೆ ಕುಳಿತಲ್ಲಿಯೇ ಲಕ್ಷ ರು. ಲಾಭ ಸಿಗುತ್ತದೆ. ಜೊತೆಗೆ ಕಲ್ಪರಸವನ್ನು ತೆಗೆದ ತೆಂಗಿನ ಮರದಲ್ಲಿ ಇಳುವರಿಯೂ ಶೇ. 50ರಷ್ಟುಹೆಚ್ಚುತ್ತದೆ. ಇದು ರೈತರಿಗೆ ಬೋನಸ್‌ ಲಾಭ.

ವರ್ಷದಾದ್ಯಂತ ಕಲ್ಪರಸ ತೆಗೆಯುವುದಕ್ಕೆ ಅವಕಾಶ ಇರುವುದರಿಂದ ನಿರಂತರ, ಸ್ಥಿರವಾದ ಆದಾಯ ಸಿಗುತ್ತದೆ. ರೈತನಿಗೆ ಮಾರುಕಟ್ಟೆಯ ತಲೆನೋವೂ ಇರುವುದಿಲ್ಲ. ತೆಂಗಿನ ಮರಗಳಿಗೆ ಮಂಗಗಳ ಕಾಟವೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಭಾರತೀಯ ಕಿಸಾನಂ ಸಂಘದ ಪ್ರ. ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ

ಎಳನೀರಿಗಿಂತ 3 ಪಟ್ಟು ಪೌಷ್ಟಿಕ ಸಾಬೀತಾಗಿದೆ

ತಿಳಿ ಚಿನ್ನದ ಬಣ್ಣವನ್ನು ಹೊಂದಿರುವ ಈ ಕಲ್ಪರಸವನ್ನು 1 ರಿಂದ 4 ಡಿಗ್ರಿ ತಾಪಮಾನದಲ್ಲಿ ಈ ಕಲ್ಪರಸವನ್ನು ಎಷ್ಟುದಿನಗಳವರೆಗೂ ಸಂಗ್ರಹಿಸಿಡಬಹುದು. ಇದು ಎಳನೀರಿಗಿಂತಲೂ ಹೆಚ್ಚು ಸ್ವಾದಿಷ್ಟವಾಗಿದೆ. ಮಾತ್ರವಲ್ಲ 3 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕೊಲೆಸ್ಟರಾಲ್‌ ನಿಯಂತ್ರಿಸುತ್ತದೆ. ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಕಿಡ್ನಿ ಸ್ಟೋನ್‌ ಗಳನ್ನು ನಿವಾರಿಸುತ್ತದೆ. ಚರ್ಮ, ಕಣ್ಣು, ಲೀವರ್‌ ಆರೋಗ್ಯ ಹೆಚ್ಚಿಸುತ್ತದೆ. ದೇಹಕ್ಕೆ ಹೇಳಿದ ಪ್ರಮಾಣದಲ್ಲಿ ವಿಟಮಿನ್‌ ನೀಡುತ್ತದೆ. ಮಧುಮೇಹಿಗಳೂ ಕಲ್ಪರಸವನ್ನು ನಿರಾತಂಕವಾಗಿ ಕುಡಿಯಬಹುದು ಎಂದು ಕೇಂದ್ರೀಯ ಸಂಶೋಧನಾ ಸಂಸ್ಥೆ ತನ್ನ ಸಂಶೋಧನೆಯಿಂದ ದೃಢಪಡಿಸಿದೆ.

ಕಲ್ಪರಸ ತಂತ್ರಜ್ಞರು, ಇದು ಗ್ರೀನ್‌ ಕಾಲ್‌ ಜಾಬ್‌

ಉಕಾಸ ಕಂಪೆನಿಯಿಂದ ತೆಂಗಿನ ಮರ ಹತ್ತಿ ಕಲ್ಪರಸವನ್ನು ಇಳಿಸುವ ತಂತ್ರಜ್ಞಾನದ ಬಗ್ಗೆ 500 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಮುಂದೆ 5 ವರ್ಷಗಳಲ್ಲಿ 2, 500 ಮಂದಿ ಕಲ್ಪರಸ ತಂತ್ರಜ್ಞರನ್ನು ತರಬೇತುಗೊಳಿಸಿ ಅವರಿಗೆ ಹಸಿರು ಕಾಲರ್‌ ರೀತಿಯ ಉದ್ಯೋಗದ ಭದ್ರತೆ ನೀಡಲಾಗುತ್ತದೆ. ಈ ತಂತ್ರಜ್ಞರು ದಿನಕ್ಕೆ 2 ಬಾರಿ ರೈತರ ಮನೆಗೆ ಹೋಗಿ ಕಲ್ಪರಸವನ್ನು ಇಳಿಸಿ ಕಂಪೆನಿಗೆ ಪೂರೈಕೆ ಮಾಡುತ್ತಾರೆ. ಅಲ್ಲಿಂದ ಅದು ಸಂಸ್ಕರಣೆಗೊಂಡು ಬಾಟಲಿಯಲ್ಲಿ ಮಾರುಕಟ್ಟೆಪ್ರವೇಶಿಸುತ್ತದೆ ಎಂದು ಭಾಕಿಸಂ ಪ್ರ. ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಹೇಳಿದ್ದಾರೆ.

Follow Us:
Download App:
  • android
  • ios