ಅಧಿಕಾರದಲ್ಲಿದ್ದವರು ತಾವು ಮಾಡಿದ್ದೇನು: ಬಿಜೆಪಿ ಸಂಸದ ಡಾ. ಜಾಧವ್‌ಗೆ ಪ್ರಿಯಾಂಕ್‌ ಪ್ರಶ್ನೆ| ಕಲಬುರಗಿಯಲ್ಲಿ ಸ್ಥಾಪನೆಯಾಗಬೇಕಿದ್ದ ಜವಳಿ ಪಾರ್ಕ್ ಕೈತಪ್ಪಿ ಹೋಗಿರುವುದಕ್ಕೆ ಶಾಸಕ ಪ್ರಿಯಾಂಕ್‌ ಖರ್ಗೆ ಆಕ್ರೋಶ ಸ್ಫೋಟ| 

ಕಲಬುರಗಿ(ಮಾ.11): ಟೆಕ್ಸಟೈಲ್‌ ಪಾರ್ಕ್ ಕಲಬುರಗಿಯಿಂದ ಕೈತಪ್ಪಿ ಹೋಗಿರುವ ವಿಚಾರವಾಗಿ ಆರಂಭವಾಗಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಹಾಗೂ ಸಂಸದ ಡಾ. ಉಮೇಶ ಜಾಧವ್‌ ನಡುವಿನ ಟ್ವಿಟ್ಟರ್‌ ವಾರ್‌ ಹಾಗೇ ಮುಂದುವರಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಬುರಗಿ ಕೈತಪ್ಪಿರುವ ಜವಳಿ ಪಾರ್ಕ್ ಮೈಸೂರಿಗೆ ಮಂಜೂರಾಗಿಲ್ಲ, ಅದು ಮಂಜೂರಾಗಿರೋದು ಯೋಜನೆಯೇ ಬೇರೆಯದ್ದು, 2 ಯೋಜನೆಗಳ ನಡುವಿನ ವ್ಯತ್ಯಾಸ ಅರಿಯಿರಿ ಎಂದು ಸಂಸದ ಡಾ. ಜಾಧವ್‌ ಟ್ವಿಟ್ಟರ್‌ ಮೂಲಕ ಪ್ರಿಯಾಂಕ್‌ಗೆ ಛೇಡಿಸಿದ್ದರು. ಡಾ. ಜಾಧವ್‌ ಅವರ ಈ ಉತ್ತರಕ್ಕೆ ಪ್ರಿಯಾಂಕ್‌ ಇದೀಗ ಮಾರುತ್ತರ ನೀಡಿ ಗಮನ ಸೆಳೆದಿದ್ದಾರೆ.

ಟೆಕ್ಸ್‌ಟೈಲ್‌ ಪಾರ್ಕ್ ಕಲಬುರಗಿ ಕೈತಪ್ಪಿದ್ದು ನಿಜವೋ ಸುಳ್ಳೋ ಎಂದು ನೇರವಾಗಿಯೇ ಪ್ರಶ್ನಿಸಿರುವ ಪ್ರಿಯಾಂಕ್‌ ಖರ್ಗೆ’ ಅಧಿಕಾರದಲ್ಲಿರುವ ತಾವು ಮಾಡಿದ್ದೇನು ಎಂಬುದನ್ನು ಪ್ರಶ್ನಿಸಿಕೊಳ್ಳಿ’ ಎಂದು ಸಂಸದ ಡಾ. ಉಮೇಶ್‌ ಜಾಧವ್‌ ಅವರಿಗೆ ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಕಲಬುರಗಿ ಟೆಕ್ಸ್‌ಟೈಲ್‌ ಪಾರ್ಕ್ ಕುರಿತು ಖರ್ಗೆ-ಜಾಧವ್‌ ಮಧ್ಯೆ ಟ್ವಿಟ್ಟರ್‌ ವಾರ್‌

ಕಲಬುರಗಿಯಲ್ಲಿ ಸ್ಥಾಪನೆಯಾಗಬೇಕಿದ್ದ ಜವಳಿ ಪಾರ್ಕ್ ಕೈತಪ್ಪಿ ಹೋಗಿರುವುದಕ್ಕೆ ಶಾಸಕ ಪ್ರಿಯಾಂಕ್‌ ಖರ್ಗೆ ಆಕ್ರೋಶ ಸ್ಫೋಟಗೊಂಡಿದೆ. ಎಸ್‌ಐಟಿಪಿ ಅಥವಾ ಮಿತ್ರಾ ಯಾವುದರಡಿಯಲ್ಲಾಗಲಿ, ಇಲ್ಲಿ ಯೋಜನೆ ಮುಖ್ಯವಲ್ಲ, ಕಲಬುರಗಿ ಜನತೆಗೆ ಬೇಕಿರುವುದು ಉದ್ಯೋಗಾವಕಾಶಗಳು. ಸಂಸದರಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮ ಪಕ್ಷದ ಆಡಳಿತವಿದ್ರೂ ಶೇ.15 (ರು.7.85 ಕೋಟಿ) ಇಕ್ವಿಟಿ ಷೇರುಗಳನ್ನು ಸಂಗ್ರಹಿಸಲಾಗದೆ ಜವಳಿ ಪಾರ್ಕನ್ನು ಬಿಟ್ಟುಕೊಟ್ಟಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಪ್ರತ್ಯೇಕ ರೈಲ್ವೆ ವಿಭಾಗ, ಏಮ್ಸ್‌, ಸಿಓಇ, ನಿಮ್ಜ್‌ ಮುಂತಾದ ಯೋಜನೆಗಳು ಜಿಲ್ಲೆಯ ಕೈಬಿಟ್ಟು ಹೋದಾಗ ಇನ್ನೊಬ್ಬರತ್ತ ಬೆರಳು ತೋರಿಸುವ ಬದಲು ಅಧಿಕಾರದಲ್ಲಿದ್ದ ನಾನು ಮಾಡಿದ್ದೇನು? ಎಂದು ತಾವು ತಮ್ಮನ್ನೇ ಪ್ರಶ್ನಿಸಿಕೊಂಡರೆ ಕಲಬುರಗಿಯ ಉದ್ಯೋಗಾಕಾಂಕ್ಷಿ ಯುವಕರಿಗೆ ಸಹಾಯವಾಗಲಿದೆ ಎಂದು ಸಂಸದ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ.