ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಸಂವಿಧಾನ ಹಕ್ಕುಗಳಿಗೆ ಧಕ್ಕೆ ಆಗಬಾರದು ಎಂದು ಹೇಳಿದ್ದಾರೆ.
ಬೆಂಗಳೂರು (ಮೇ.18): ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಮಾಡಲು ಹೊರಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಹೊಸ ನಿಯಮ ಜಾರಿಗೆ ತಂದು ಯಾರನ್ನು ಬೇಕಾದರೂ ಮತದಾನ ಪಟ್ಟಿಯಿಂದ ತೆಗೆಯಬಹುದು ಎಂದರೆ ಅದನ್ನು ಸಂವಿಧಾನದ ಪ್ರಕಾರ ನಡೆಯುತ್ತಿದೆ ಎನ್ನಲು ಆಗುತ್ತದೆಯೇ. ಎಸ್ಐಆರ್ ಮಾಡಬೇಡಿ ಎಂದು ನಾವು ಹೇಳುವುದಿಲ್ಲ.

ಆದರೆ ಅದನ್ನು ಸರಿಯಾಗಿ ಮಾಡಬೇಕು, ಒಬ್ಬ ನಾಗರಿಕನಿಗೂ ತೊಂದರೆಯಾಗದಂತೆ ಸಂವಿಧಾನದ ಹಕ್ಕನ್ನು ನೀಡಬೇಕು ಎಂದರು.ನನ್ನ ಹೆಸರು ಪ್ರಿಯಾಂಕ್ ಎಂದಿದೆ. ಈ ಹೆಸರಿನಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಮತದಾರ ಪಟ್ಟಿಯಿಂದ ಹೆಸರು ತೆಗೆಯಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಬ್ಬ ಅಭ್ಯರ್ಥಿಯ ಹೆಸರನ್ನೇ ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ಹೆಸರನ್ನು ತೆಗೆಯಲಾಗಿದೆ ಎಂದರು.
ಎಸ್ಐಆರ್ ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಈಗಾಗಲೇ ನಡೆದಿರುವ ಮತದಾರರ ಮ್ಯಾಪಿಂಗ್ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಚುನಾವಣೆ ಆಯೋಗ ಪರಿಶೀಲಿಸಲಿ, ಲೋಪಗಳಿದ್ದರೆ ಪಾರದರ್ಶಕವಾಗಿ ತಿದ್ದುಪಡಿ ಮಾಡಲಿ, ಜೊತೆಗೆ ಈ ಸಂಬಂಧ ಜನರಿಂದ ಬಂದ ದೂರುಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬಹಳಷ್ಟು ಜನರನ್ನು ಸಂವಿಧಾನದ ಹಕ್ಕಿನಿಂದ ದೂರ ಇಟ್ಟದಂತಾಗುತ್ತೆ. ಇದರ ವಿರುದ್ದ ನ್ಯಾಯಾಂಗ ಹೋರಾಟವನ್ನಪಕ್ಷ ಹಾಗೂ ಸರ್ಕಾರದಿಂದ ಮಾಡುತ್ತೇವೆ ಎಂದರು.
ವೆಚ್ಚ ಕಡಿತ-ಸಂಪುಟದಲ್ಲಿ ಚರ್ಚೆ
ಖರ್ಚು ಕಡಿಮೆ ಮಾಡಲು ಸಚಿವರ ಬೆಂಗಾವಲು ವಾಹನಗಳ ಕಡಿತ ಮಾಡುವ ಬಗ್ಗೆ ಮೇ 21 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಕೇವಲ ಒಂದು ಬೆಂಗಾವಲು ವಾಹನ ಕಡಿತ ಮಾಡುವುದು, ಸೈಕಲ್, ಮೆಟ್ರೋ ರೈಲು ಬಳಸುವುದು ಸರಿಯಲ್ಲ. ಬಿಜೆಪಿಯವರು ಮೆಟ್ರೋ ಪ್ರಯಾಣ ಮಾಡಿರುವುದು ನಾಟಕ ಅಷ್ಟೇ. ಅವರು ಪ್ರತಿ ದಿನ ಮೆಟ್ರೋ, ಬಿಎಂಟಿಸಿ ಬಸ್ ಹತ್ತಲಿ ಎಂದು ಪ್ರಿಯಾಂಕ್ ಹೇಳಿದರು.


