ಜೈಲು ಸೇರಿದ 2 ತಾಸಿಗೆ ಆರೋಪಿ ಮುನಿರೆಡ್ಡಿಗೆ ಲೋ ಬಿಪಿ ಆಗಿ ಕುಸಿದು ಬಿದ್ದಿದ್ದು, ಕೂಡಲೆ ಕಾರಾಗೃಹ ಅಧಿಕಾರಿಗಳು ಆತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಿಕಾರಿಯಾಗದೆ ಆರೋಪಿ ಸಾವನ್ನಪ್ಪಿದ್ದಾನೆ. 

ಚಿಂತಾಮಣಿ(ಡಿ.28): ವರದಕ್ಷಿಣೆ ಕಿರುಕುಳದ ಆರೋಪದಡಿ ವಾರೆಂಟ್ ಮೇಲೆ ಜೈಲಿಗೆ ಬಂದಿದ್ದ ಆರೋಪಿಯೊಬ್ಬ ೨ ತಾಸಿನಲ್ಲಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ನಗರದ ಉಪಕಾರಾಗೃಹದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

Add Asianetnews Kannada as a Preferred SourcegooglePreferred

ಮೃತ ಆರೋಪಿಯನ್ನು ಚಿಂತಾಮಣಿ ತಾಲೂಕಿನ ಗುಡಿಸಲಹಳ್ಳಿ ಗ್ರಾಮದ ಮುನಿರೆಡ್ಡಿ (೩೮) ಎಂದು ಗುರುತಿಸಲಾಗಿದೆ. ೨೦೧೬ ರಲ್ಲಿ ವರದಕ್ಷಣೆ ಕಿರುಕುಳದ ದೂರಿನಲ್ಲಿ ವಾರೆಂಟ್ ಆಗಿ ೨೦೨೩ ಡಿಸೆಂಬರ್ ೨೬ ರ ಮಂಗಳವಾರ ಸಂಜೆ ಚಿಂತಾಮಣಿ ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಉಪಕಾರಾಗೃಹಕ್ಕೆ ಸೇರಿಸಲಾಗಿತ್ತು. ಜೈಲು ಸೇರಿದ ೨ ತಾಸಿಗೆ ಆರೋಪಿ ಮುನಿರೆಡ್ಡಿಗೆ ಲೋ ಬಿಪಿ ಆಗಿ ಕುಸಿದು ಬಿದ್ದಿದ್ದು, ಕೂಡಲೆ ಕಾರಾಗೃಹ ಅಧಿಕಾರಿಗಳು ಆತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಿಕಾರಿಯಾಗದೆ ಆರೋಪಿ ಮೃತಪಟ್ಟಿರುವುದಾಗಿ ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

ಕೋಲಾರ: ಇಬ್ಬರು ಮಕ್ಕಳಿದ್ದ ಆಂಟಿ ಜತೆ ಅಕ್ರಮ ಸಂಬಂಧ, ಒಂದೇ ಮರಕ್ಕೆ ನೇಣಿಗೆ ಶರಣಾದ ಜೋಡಿ..!

ಚಿಂತಾಮಣಿ ಉಪಕಾರಾಗೃಹದಲ್ಲಿ ೧೧೨ ಖೈದಿಗಳಿದ್ದು, ಇಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಚಿಕಿತ್ಸೆಯ ವ್ಯವಸ್ಥೆ ಇಲ್ಲದಿರುವುದು ದುರದುಷ್ಟಕರವಾಗಿದೆ. ಆರೋಗ್ಯವಂತವಾಗಿದ್ದ ವ್ಯಕ್ತಿಯೋರ್ವ ಜೈಲು ಸೇರಿದ ೨ ಗಂಟೆಗಳಲ್ಲಿ ಸಾವನ್ನಪ್ಪಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಿದೆ.

ವಿಷಯ ತಿಳಿದು ಜೆ.ಎಂ.ಎಪ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಂ.ಪ್ರಕಾಶ್, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತನ ಶವ ಪರಿಶೀಲನೆ ನಡೆಸಿದ್ದು, ನಗರ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿಯಿತ್ತು, ಪರಿಶೀಲನೆ ನಡೆಸಿ ಮೃತರ ಸಂಬಂಧಿಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.