ಉತ್ತರ ಕನ್ನಡದ ಸರಸ್ವತಿ ರಾಮಾ ಹೆಗಡೆ ಎಂಬ 80 ವರ್ಷದ ವೃದ್ಧೆ, ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದಾಡುತ್ತಿದ್ದಾರೆ. ಆಧಾರ್ ಕೇಂದ್ರ, ನಾಡ ಕಚೇರಿ ಸೇರಿದಂತೆ ಹಲವೆಡೆ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಆಧಾರ್ ಕಾರ್ಡ್ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆಧಾರ್ ಇಲ್ಲದ ಕಾರಣ ರೇಷನ್ ಕಾರ್ಡ್ ರದ್ದಾಗಿದ್ದು, ಮರಣ ಪ್ರಮಾಣ ಪತ್ರಕ್ಕಾದರೂ ಅನುಕೂಲವಾಗಲೆಂದು ಕೋರಿದ್ದಾರೆ.

ಕಾರವಾರ, ಉತ್ತರಕನ್ನಡ (ಮಾ.21): ನಾನು ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಆಧಾರ್ ಕೇಂದ್ರ, ನಾಡ ಕಚೇರಿ, ತಹಶೀಲ್ದಾರ್ ಕಚೇರಿ, ಪೋಸ್ಟ್ ಆಫೀಸ್ ಎಲ್ಲ ಕಚೇರಿಗಳಿಗೂ ಅಲೆದಾಡಿದ್ದೇನೆ. ಆದರೆ, ನನಗೆ ಈವರೆಗೆ ಯಾರೊಬ್ಬರೂ ಆಧಾರ್ ಕಾರ್ಡ್ ಮಾಡಿಕೊಡುತ್ತಿಲ್ಲ. ಈಗ ನಮ್ಮ ದೇಶದ ಪ್ರಧಾನಿಯಾದ ನೀವೇ ನನಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 80 ವರ್ಷದ ವೃದ್ಧೆಯೊಬ್ಬರು ಪತ್ರವನ್ನು ಬರೆದಿದ್ದಾರೆ.

Add Asianetnews Kannada as a Preferred SourcegooglePreferred

ಹೌದು, ಆಧಾರ್ ಕಾರ್ಡ್‌ಗೋಸ್ಕರ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಅಜ್ಜಿ ಪತ್ರ ಬರೆದಿದ್ದಾರೆ. ತನಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾನಕೊಡ್ಲು ಗ್ರಾಮದ ನಿವಾಸಿ ಸರಸ್ವತಿ ರಾಮಾ ಹೆಗಡೆ (80) ಅವರಿಂದ ಮನವಿ ಪತ್ರ ಸಲ್ಲಿಕೆ ಮಾಡಲಾಗಿದೆ. ಈ ಪತ್ರದಲ್ಲಿ ನಾನು ಕಳೆದ ಅಧಾರ್ ಕೇಂದ್ರ, ನಾಡಕಚೇರಿ, ತಹಶೀಲ್ದಾರ್ ಕಚೇರಿ, ಪೋಸ್ಟ್ ಆಫೀಸ್ ಎಲ್ಲವನ್ನೂ ಅಲೆದಾಡಿದ್ದೇನೆ. ಆದರೂ ಆಧಾರ್ ಕಾರ್ಡ್ ಮಾಡಿಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇತ್ತೀಚೆಗೆ ಸರ್ಕಾರ ಎಲ್ಲ ಸೌಲಭ್ಯಗಳಿಗೂ ಆಧಾರ್ ಕಾರ್ಡ್ ಕೇಳುತ್ತಾರೆ. ಆದರೆ, ನನಗೆ ಆಧಾರ್ ಕಾರ್ಡ್ ಮಾತ್ರ ಯಾರೊಬ್ಬರೂ ಮಾಡಿಕೊಡುತ್ತಿಲ್ಲ. ಇದರ ಉಪಯೋಗ ನನಗೆ ಸಿಗದಿದ್ದರೂ ಪರವಾಗಿಲ್ಲ, ನು ಸತ್ತ ಮೇಲಾದರೂ ಮಕ್ಕಳಿಗೆ ಅನುಕೂಲವಾಗಲೆಂದು ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗಬಹುದು ಎಂದು ಸರಸ್ವತಿ ತಿಳಿಸಿದ್ದಾರೆ. ನಾನು ಸಾರಿಗೆ ಬಸ್‌ನ ಸೌಲಭ್ಯ ಪಡೆಯಲು ನಮ್ಮ ಮನೆಯಿಂದ 10 ಕಿ.ಮೀ. ದೂರದ ಕಾಡುದಾರಿಯಲ್ಲಿ ನಡೆದುಕೊಂಡು ಹೋಗಬೇಕು. ಇಂತಹ ಪರಿಸ್ಥಿತಿಯ ನಡುವೆಯೂ ಎಲ್ಲಾ ರೀತಿ ಪ್ರಯತ್ನಗಳನ್ನು ನಡೆಸಿದ್ದೇನೆ. ಇದೀಗ ನನಗೆ 80 ವರ್ಷ ಆಗಿದ್ದು, ಓಡಾಡುವುದಕ್ಕೆ ಶಕ್ತಿಯೂ ಇಲ್ಲದಂತಾಗಿದೆ ಎಂದು ಮನನೊಂದ ವೃದ್ಧೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ವಿಧಾನಸಭೆ: ಸ್ಪೀಕರ್ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರು ಅಮಾನತು! ಇಲ್ಲಿದೆ ಪಟ್ಟಿ..

ನಾನು ಆಧಾರ್ ಕಾರ್ಡ್ ಮಾಡಿಸಲು ಹೋದರೆ ಜನ್ಮ ದಾಖಲೆಯ ಸಲುವಾಗಿ ಶಾಲಾ ಟಿಸಿಯನ್ನು ತೆಗೆದುಕೊಂಡು ಬನ್ನಿ ಎಂದು ಸಿಬ್ಬಂದಿ ಹೇಳುತ್ತಾರೆ. 80 ವರ್ಷದ ಹಿಂದಿನ ಶಾಲಾ ದಾಖಲೆ ಹುಡುಕುವುದೇ ಕಷ್ಟವಾಗಿತ್ತು. ಆದರೂ, ಕಷ್ಟಪಟ್ಟು ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರು ನೀಡಿದ ಜನ್ಮ ದಾಖಲೆ ಪತ್ರವನ್ನು ಹಾಗೂ ಚುನಾವಣಾ ಗುರುತು ಚೀಟಿ ತೆಗೆದುಕೊಂಡು ಹೋದರೆ, ಈ ದಾಖಲೆ ಸಾಕಾಗುವುದಿಲ್ಲ ಎಂದು ಹೇಳುತ್ತಾರೆ. ಇದೀಗ ಆಧಾರ್ ಕಾರ್ಡ್ ಜೋಡಣೆ ಮಾಡದ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ಕೂಡ ರದ್ದಾಗಿದೆ ಎಂದು ನೋವು ಹಂಚಿಕೊಂಡಿದ್ದಾರೆ.

ಇದೀಗ ಆಧಾರ್ ಕಾರ್ಡ್ ನನ್ನ ಮರಣದ ನಂತರ 'ಮರಣ ಪ್ರಮಾಣ ಪತ್ರ' ಮಾಡಿಸುವುದಕ್ಕಾದರೂ ಮಗನಿಗೆ ಅನುಕೂಲವಾಗಲೆಂದು ಆಧಾರ್ ಕಾರ್ಡ್ ಮಾಡಿಸಿಕೊಡಿ. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ನನ್ನಂತೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲಾಗದೇ ಇರುವವರು ಹಲವರಿದ್ದಾರೆ. ಅವರಿಗೂ ಈ ಸೌಲಭ್ಯ ಕಲ್ಪಿಸಿಕೊಡುವಂತೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನು ಆಧಾರ್ ಕಾರ್ಡ್‌ಗಾಗಿ ವೃದ್ಧೆ ಜಿಲ್ಲಾಧಿಕಾರಿಗೂ ಸಾಕಷ್ಟು ಬಾರಿ ಕರೆ ಮಾಡಿದ್ದರೂ, ಅವರು ಕರೆ ಸ್ವೀಕರಿಸಿಲ್ಲ. ಆದ್ದರಿಮದ ಅಂತಿಮ ದಾರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ ಎಂದು ವೃದ್ಧೆ ಸರಸ್ವತಿ ರಾಮಾ ಹೆಗಡೆ ಹೇಳಿದ್ದಾರೆ.

ಇದನ್ನೂ ಓದಿ: ಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!