ಯಾವುದೇ ಕಾನೂನು ಜಾರಿಗೆ ಇದ್ದರೇ ಅದು ರೈತರಿಗೆ ಅನುಕೂಲವಾಗಿರಬೇಕು| ಕೋವಿಡ್‌-19, ಎಪಿಎಂಸಿಯ ಕಾಯಿದೆ ತಿದ್ದುಪಡಿ ಕುರಿತು ವಿಚಾರ ಸಂಕಿರಣದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷರ ಪ್ರಶ್ನೆ|

ಹಾಸ​ನ(ಜು.01): ಕೊರೋನಾ ಎಂಬ ಮಹಾಮಾರಿ ಹರಡಿ ಭಯ ಮೂಡಿಸಿ, ರೈತನ ಬಾಯಿಗೆ ಬಟ್ಟೆ ಕಟ್ಟಿಸುವಂತಹ ಕಾನೂನು ಈ ರಾಜ್ಯಕ್ಕೆ ಅವಶ್ಯಕತೆ ಇತ್ತಾ? ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಪ್ರಶ್ನೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ನಡೆದ ಕೋವಿಡ್‌-19, ಎಪಿಎಂಸಿಯ ಕಾಯಿದೆ ತಿದ್ದುಪಡಿ ಕುರಿತು ಮುಂಜಾಗ್ರತ ಕ್ರಮಗಳ ಬಗ್ಗೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಕ​ಲೇ​ಶ​ಪುರ: ವೃದ್ಧೆಗೆ ಕೊರೋನಾ ಶಂಕೆ, ಮೂಗಲಿ ಗ್ರಾಮ ಸೀಲ್‌ಡೌನ್‌

ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದಿರುವುದು ಒಂದು ಸಮಸ್ಯೆ ಒಂದಾದರೆ, ಹಳ್ಳಿಗಳಲ್ಲಿರುವ ರೈತರ ಬದುಕು ದಿನೆ ದಿನೆ ಕ್ಷೀಣಿಸುತ್ತಿರುವಾಗ ಜೊತೆಯಲ್ಲಿ ಕೊರೋನಾ ಎಂಬ ದೊಡ್ಡ ರೋಗಾಣು ಇಡೀ ಪ್ರಪಂಚಕ್ಕೆ ಹರಡಿ ನಮ್ಮ ದೇಶಕ್ಕೆ ವ್ಯಾಪಿಸಿದೆ. ಕಳೆದ ಒಂದು ದಿನಗಳ ಹಿಂದೆ ದೇಶದ ಪ್ರಧಾನಿ ಮನ್ಕಿಬಾತ್‌ನಲ್ಲಿ ರೈತರ ಕಷ್ಟದ ಬಗ್ಗೆ ಸಂಬಂಧವಿಲ್ಲ ಎಂದು ಹೇಳಿ​ದ​ರು.

ರೈತರು ಏತಕ್ಕಾಗಿ ಸಾಯುತ್ತಿರುವ ಬಗ್ಗೆ ಒಂದು ಮಾತನ್ನು ಆಡುವುದಿಲ್ಲ. ಆ ಕಡೆ ಪಾಕಿಸ್ತಾನ, ಈ ಕಡೆ ಚೀನಾ, ಭಾರತ ದೇಶದೊಳಗೆ ಕೊರೋನಾ ಇಷ್ಟೆ ಮಾತನಾಡಬೇಕು ಇದನ್ನ ಬಿಟ್ಟು ಬೇರೆ ಮಾತನಾಡುವುದಿಲ್ಲ ಎಂದರು. ಇನ್ನು ಮುಂದೆ ಪ್ರತಿ ಭಾನುವಾರ ಕರ್ನಾಟಕ ಲಾಕ್‌ಡೌನ್‌ ಆದೇಶವಾಗಿದೆ. ರೈತರಲ್ಲಿ ಭಯ ಮೂಡಿಸಿದೆ. ರೈತನ ಬಾಯಿಗೆ ಬಟ್ಟೆ ಕಟ್ಟಿಸಿ ತರುವಂತಹ ಕಾನೂನು ಈ ರಾಜ್ಯಕ್ಕೆ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿ​ದ್ದಾರೆ.

ಭೂಸ್ವಾಧೀನ ಕಾಯಿದೆ-2019ರಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಯಿತು. ಮಸೂದೆ ಇಂದು ಜಾರಿಗೊಳ್ಳುತ್ತಿದ್ದು, ಎಪಿಎಂಸಿ ಕಾಯಿದೆಯನ್ನು ರಾಜ್ಯ ಸರಕಾರ ಬಹಳ ತರಾತುರಿಯಲ್ಲಿ ಜಾರಿಗೊಳಿಸಿದ್ದಾರೆ. ಇದರ ಅವಶ್ಯಕತೆ ಏನು ಇತ್ತು? ಜಾಗೃತ ಸಂದರ್ಭದಲ್ಲಿ ಯಾರು ಹೆದರಬೇಡಿ, ಧೈರ್ಯವಾಗಿ ಎದುರಿಸೋಣ, ನೀವು ಜಾಗೃತರಾಗಿ, ಈ ದೇಶದಿಂದಲೇ ಕೊರೋನಾವನ್ನು ಓಡಿಸೋಣ ಎಂಬ ದಿಟ್ಟವಾಗಿ ಹೇಳಬೇಕಾದ ಸರಕಾರಗಳು ಗಾಬರಿಗೊಳ್ಳುವ ಕಾನೂನುಗಳನ್ನು ಏಕೆ ತರಲಾಗಿದೆ ಎಂದು ಕಿಡಿಕಾರಿದರು.

ಭೂಸ್ವಾಧೀನ, ಭೂಸುಧಾರಣೆ ಹಾಗೂ ಎಪಿಎಂಸಿ ಕಾಯಿದೆ ಎಲ್ಲವನ್ನು ಕಠಿಣವಾಗಿ ಜಾರಿಗೆ ತರುವುದಕ್ಕೆ ಹಾಗೂ ಗುತ್ತಿಗೆ ಕರಾರು-2016 ಈ ಪ್ರಸ್ತಾಪವನ್ನು ತ್ವರಿತವಾಗಿ ಜಾರಿ ತರುವುದಕ್ಕೆ ಭಾರತ ಸರ್ಕಾರ ಜರೂರಾಗಿ ಜಾರಿಗೆ ತರಲು ಈ ತೀರ್ಮಾನ ಕೈಗೊಳ್ಳಲು ನಿರ್ದೇಶನ ನೀಡಿದೆ ಎಂದು ಹೇಳಿದರು. ಯಾವುದೇ ಕಾನೂನು ಜಾರಿಗೆ ಇದ್ದರೇ ಅದು ರೈತರಿಗೆ ಅನುಕೂಲವಾಗಿರಬೇಕು ಎಂದು ತಮ್ಮ ನಿರ್ಧಾರವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ರೈತ ಸಂಘದವರು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರದಲ್ಲಿ ಕೂರುವಂತೆ ಹಸಿರು ಸೇನೆ ರಾಜ್ಯಾಧ್ಯಕ್ಷರು ಸೂಚನೆ ನೀಡಿದರು. ಈ ವೇಳೆ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು ಪಾಷ, ಬೈರೇಗೌಡ, ಮೀಸೆ ಮಂಜಣ್ಣ ಇತರರು ಇದ್ದ​ರು.