ಶಿವಮೊಗ್ಗದ ತ್ಯಾವರೆಕೊಪ್ಪ ಸಫಾರಿಯಲ್ಲಿರುವ ಗರ್ಭಿಣಿ ನೀರಾನೆ 'ಹಂಸಿನಿ'ಯ ಗರ್ಭದಲ್ಲಿನ ಮರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಎರಡು ಮರಿಗಳನ್ನು ಕಳೆದುಕೊಂಡಿದ್ದ ಹಂಸಿನಿಯ ಆರೋಗ್ಯದ ಮೇಲೆ ತಜ್ಞ ವೈದ್ಯರು ನಿಗಾ ಇಟ್ಟಿದ್ದು, ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ಈ ಘಟನೆಯು ಇತ್ತೀಚೆಗೆ ವೈದ್ಯೆಯೊಬ್ಬರ ಮೇಲೆ ದಾಳಿ ಮಾಡಿ ಕೊಂದಿದ್ದ ದುರಂತದ ಹಿನ್ನೆಲೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹ ಧಾಮದಲ್ಲಿ ಗರ್ಭಿಣಿ ನೀರಾನೆ “ಹಂಸಿನಿ” ಕುರಿತು ಮೂಡಿರುವ ಆತಂಕ ಇದೀಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಹಂಸಿನಿಯ ಗರ್ಭದಲ್ಲಿದ್ದ ಮರಿ ಸಾವನ್ನಪ್ಪಿದೆಯೇ ಎಂಬ ಅನುಮಾನ ಪ್ರಾಣಿಪ್ರೇಮಿಗಳು ಹಾಗೂ ಅಧಿಕಾರಿಗಳಲ್ಲಿ ಕಳವಳ ಉಂಟುಮಾಡಿದೆ.

ಎರಡು ಬಾರಿ ಮಗು ಕಳೆದುಕೊಂಡಿದ್ದ ಹಂಸಿನಿ

ಹಂಸಿನಿ ಈಗಾಗಲೇ ಮೂರನೇ ಬಾರಿ ತನ್ನ ಮರಿಯನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಈ ಹಿಂದೆಯೂ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿದ್ದರೂ, ಹುಟ್ಟಿದ ಕೆಲವೇ ದಿನಗಳಲ್ಲಿ ಅವುಗಳನ್ನು ಕಳೆದುಕೊಂಡಿತ್ತು. ಈ ಬಾರಿ ಆದರೂ ಮರಿ ಸುರಕ್ಷಿತವಾಗಿ ಬದುಕಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದ್ದರೂ, ಪ್ರಸ್ತುತ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ.

ಆದರೆ, ಮೃಗಾಲಯದ ನಿರ್ದೇಶಕ ಅಮರಾಕ್ಷರ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಹಂಸಿನಿಯ ಗರ್ಭದಲ್ಲಿರುವ ಮರಿ ಸಾವನ್ನಪ್ಪಿದೆಯೆಂಬುದು ಇನ್ನೂ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳಿಂದ ಆಗಮಿಸಿದ ಪರಿಣಿತ ಪಶುವೈದ್ಯರು ಹಂಸಿನಿಯ ಆರೋಗ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳು ನಡೆಸಲಾಗಿದ್ದು, ಇದುವರೆಗೆ ಮರಿ ಸಾವನ್ನಪ್ಪಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಇದರಿಂದಾಗಿ ಹೆಚ್ಚಿನ ಪರೀಕ್ಚೆಗೆ ಹಂಸಿನಿಯ ರಕ್ತದ ಮಾದರಿ ಹಾಗೂ ದೇಹದ ಫ್ಲೂಯಿಡ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮಾತ್ರ ತಾಯಿ ಮತ್ತು ಮರಿಯ ಆರೋಗ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಹಂಸಿನಿಯ ಆರೋಗ್ಯದ ಮೇಲೆ ಅರಣ್ಯ ಇಲಾಖೆಯ ಪಶುವೈದ್ಯರು ತೀವ್ರ ನಿಗಾವಹಿಸಿದ್ದಾರೆ. ಒಂದು ವೇಳೆ ಗರ್ಭದಲ್ಲಿರುವ ಮರಿಯನ್ನು ಹೊರತೆಗೆದು ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಬಂದರೆ, ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಹಂಸಿನಿಯ ಜೀವಕ್ಕೆ ಯಾವುದೇ ಅಪಾಯವಾಗದಂತೆ ವೈದ್ಯಕೀಯ ತಂಡ ಅತ್ಯಂತ ಜಾಗ್ರತೆಯಿಂದ ಕಾರ್ಯನಿರ್ವಹಿಸುತ್ತಿದೆ.

ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ದಾಳಿ ಮಾಡಿ ಕೊಂದಿದ್ದ ಹಂಸಿನಿ

ಇದರ ನಡುವೆಯೇ, ಕಳೆದ ಒಂದು ತಿಂಗಳಿನಿಂದ ತ್ಯಾವರೆಕೊಪ್ಪ ಸಫಾರಿಯಲ್ಲಿ ಸರಣಿ ದುರಂತಗಳು ನಡೆಯುತ್ತಿರುವುದು ಗಮನಾರ್ಹವಾಗಿದೆ. ಮಾರ್ಚ್ 19ರಂದು ಸಫಾರಿಯಲ್ಲಿ ಕರ್ತವ್ಯದಲ್ಲಿದ್ದ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೇಲೆ ಗರ್ಭಿಣಿ ನೀರಾನೆ ಹಂಸಿನಿ ಏಕಾಏಕಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಈ ಘಟನೆ ನಂತರ ಸಫಾರಿಯ ಭದ್ರತೆ, ಪ್ರಾಣಿಗಳ ಆರೈಕೆ ಹಾಗೂ ವೈದ್ಯಕೀಯ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಮೂಡಿದ್ದು, ಇದೀಗ ಹಂಸಿನಿಯ ಆರೋಗ್ಯದ ವಿಚಾರ ಮತ್ತಷ್ಟು ಗಂಭೀರ ಚರ್ಚೆಗೆ ಕಾರಣವಾಗಿದೆ. ಹಂಸಿನಿ ಮತ್ತು ಅದರ ಮರಿಯ ಸ್ಥಿತಿ ಬಗ್ಗೆ ಅಂತಿಮ ವರದಿ ಬರಬೇಕಿದ್ದು, ಪ್ರಾಣಿಪ್ರೇಮಿಗಳು ಆತಂಕದ ಮಧ್ಯೆ ನಿರೀಕ್ಷೆಯಲ್ಲಿದ್ದಾರೆ.