ಎಂಪಿ ನಿಧಿ ಬಳಕೆ: ಪ್ರತಾಪ್ ನಂ.1, ಸುಮಲತಾ ನಂ.2
ಶಿವಕುಮಾರ್ ಉದಾಸಿ, ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣ ಟಾಪ್ 5 ಸಂಸದರು| ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಸರ್ಕಾರದಿಂದ 5 ಕೋಟಿ ಪ್ರದೇಶಾಭಿವೃದ್ಧಿ ನಿಧಿ| ಪ್ರತಾಪ್ ಸಿಂಹ 4.90 ಕೋಟಿ, ಸುಮಲತಾ ಅಂಬರೀಶ್ 4.95 ಕೋಟಿ ಕಾಮಗಾರಿಗೆ ಶಿಫಾರಸು| ಪ್ರತಾಪ್ ಸಿಂಹ ನಿಧಿಯಿಂದ 4.36 ಕೋಟಿ ಬಳಕೆ| ಸುಮಲತಾ ನಿಧಿಯಿಂದ 3.78 ಕೋಟಿ ವಿನಿಯೋಗ|
ಮೈಸೂರು(ಮಾ.05): ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಸಾಮಾನ್ಯವಾಗಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಸರ್ಕಾರದಿಂದ 5 ಕೋಟಿ ಪ್ರದೇಶಾಭಿವೃದ್ಧಿ ನಿಧಿ ನೀಡಲಾಗುತ್ತದೆ. ರಾಜ್ಯದ 28 ಸಂಸದರ ಪೈಕಿ ಕೇಂದ್ರ ಸರ್ಕಾರ ಪೂರ್ಣ 5 ಕೋಟಿ ಬಿಡುಗಡೆ ಮಾಡಿರುವುದು ಪ್ರತಾಪ್ ಸಿಂಹ ಹಾಗೂ ಸುಮಲತಾ ಅಂಬರೀಶ್ ಅವರಿಗೆ ಮಾತ್ರ. ಉಳಿದ 26 ಸಂಸದರಿಗೆ ತಲಾ 2.5 ಕೋಟಿಯಷ್ಟೇ ಬಿಡುಗಡೆಯಾಗಿದೆ.
ಪರಸತಿ, ಪರಧನ- ರಾಸಲೀಲೆ ಕಾಮಕಾಂಡವಾಗಿದೆ : ಸಿಎಂ ವಿರುದ್ಧ ತನ್ವೀರ್ ಸೇಠ್
ತಮಗೆ ಬಿಡುಗಡೆಯಾಗಿರುವ ತಲಾ 5 ಕೋಟಿ ಪೈಕಿ ಪ್ರತಾಪ್ ಸಿಂಹ ಅವರು 4.90 ಕೋಟಿ, ಸುಮಲತಾ ಅಂಬರೀಶ್ 4.95 ಕೋಟಿ ಕಾಮಗಾರಿಗೆ ಶಿಫಾರಸು ಮಾಡಿದ್ದಾರೆ. ಈ ಪೈಕಿ ಪ್ರತಾಪ್ ಸಿಂಹ ಅವರ ನಿಧಿಯಿಂದ 4.36 ಕೋಟಿ ಬಳಕೆಯಾಗಿದ್ದರೆ, ಸುಮಲತಾ ಅಂಬರೀಶ್ ಅವರ ನಿಧಿಯಿಂದ 3.78 ಕೋಟಿ ವಿನಿಯೋಗವಾಗಿದೆ.
ಪ್ರತಾಪ್ ಅವರ ನಿಧಿ ಬಳಕೆಯ ಪ್ರಮಾಣ ಶೇ.85.17 ಇದ್ದರೆ ಸುಮಲತಾ ಅವರ ಬಳಕೆಯ ಪ್ರಮಾಣ ಶೇ.73.66 ರಷ್ಟಿದೆ. ಪ್ರತಾಪ್ ಅವರ ನಿಧಿಯಲ್ಲಿ ಬಳಕೆಯಾಗದೆ ಉಳಿದಿರುವ ಹಣ 0.73 ಕೋಟಿ, ಸುಮಲತಾ ಅವರ ಖಾತೆಯಲ್ಲಿ 1.28 ಕೋಟಿ ಬಳಕೆಯಾಗದೆ ಹಾಗೆಯೇ ಉಳಿದಿದೆ ಎಂದು ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಕುರಿತ ಕೇಂದ್ರ ಸರ್ಕಾರದ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.