ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಎಸಿಬಿಯಲ್ಲಿದ್ದ ಹಿರಿಯ ಅಧಿಕಾರಿಗಳ ಜತೆ ನಿಕಟ ಸಂಕರ್ಪದಲ್ಲಿದ್ದ ಪ್ರಶಾಂತ್‌, ಬೆಂಗಳೂರು ಜಲಮಂಡಳಿಯಲ್ಲಿದ್ದುಕೊಂಡು ಲೋಕಾಯುಕ್ತದಲ್ಲಿ ಹುದ್ದೆ ಪಡೆಯಲು ಪ್ರಯತ್ನಿಸುತ್ತಿದ್ದರು. 

ಬೆಂಗಳೂರು(ಮಾ.05):  ಈ ಮೊದಲು ಅಸ್ತಿತ್ವದಲ್ಲಿದ್ದ ಭ್ರಷ್ಟಚಾರ ನಿಗ್ರಹ ದಳದಲ್ಲಿ (ಎಸಿಬಿ) ಹಣಕಾಸು ಸಲಹೆಗಾರರಾಗಿ ಕೆಲಸ ಮಾಡಿದ್ದ ಪ್ರಶಾಂತ್‌ ಮಾಡಾಳ್‌, ಮರುಸ್ಥಾಪನೆಯಾದ ಲೋಕಾಯುಕ್ತ ಸಂಸ್ಥೆಯಲ್ಲಿ ಅದೇ ಹುದ್ದೆ ಪಡೆಯಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಎಸಿಬಿಯಲ್ಲಿದ್ದ ಹಿರಿಯ ಅಧಿಕಾರಿಗಳ ಜತೆ ನಿಕಟ ಸಂಕರ್ಪದಲ್ಲಿದ್ದ ಪ್ರಶಾಂತ್‌, ಬೆಂಗಳೂರು ಜಲಮಂಡಳಿಯಲ್ಲಿದ್ದುಕೊಂಡು ಲೋಕಾಯುಕ್ತದಲ್ಲಿ ಹುದ್ದೆ ಪಡೆಯಲು ಪ್ರಯತ್ನಿಸುತ್ತಿದ್ದರು ಎಂದು ಗೊತ್ತಾಗಿದೆ.

ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳುಗಾಗಿ ಲೋಕಾ ಬೇಟೆ..!

ಕೆಎಎಸ್‌ ಅಧಿಕಾರಿಯಲ್ಲ:

ಬಂಧಿತ ಪ್ರಶಾಂತ್‌ ಕೆಎಎಸ್‌ ಅಧಿಕಾರಿಯಲ್ಲ. ಕೆಪಿಎಸ್‌ಸಿ ನಡೆಸುವ ಕರ್ನಾಟಕ ರಾಜ್ಯ ಲೆಕ್ಕಪತ್ರ ಸೇವೆಯ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿದ್ದರು. ಬೆಂಗಳೂರು ಜಲಮಂಡಳಿಗೆ ನಿಯೋಜನೆ ಮೇರೆಗೆ ಆಗಮಿಸಿದ್ದರು. ಇದೇ ವೇಳೆ ಕೆಎಎಸ್‌ ಅಧಿಕಾರಿಗಳ ಸಂಘವು ಸಹ ಪ್ರಶಾಂತ್‌ ಕೆಎಎಸ್‌ ಅಧಿಕಾರಿ ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ಅಮಾನತಿಗೆ ಕ್ರಮ:

ಈ ನಡುವೆ, ಪ್ರಶಾಂತ್‌ ಲಂಚ ಸ್ವೀಕಾರ ಆರೋಪದ ಮೇಲೆ ಬಂಧಿತವಾಗಿರುವ ಹಿನ್ನೆಲೆಯಲ್ಲಿ ಮತ್ತು ನಿವಾಸದಲ್ಲಿ ಕೋಟ್ಯಂತರ ರು. ಪತ್ತೆಯಾದ ಕಾರಣ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. ಹೀಗಾಗಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲು ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.