ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತ್ಯಧಿಕ ತೆರಿಗೆ ಸಂಗ್ರಹಿಸುವ ಮೂಲಕ ಶೇ. 103ರಷ್ಟು ಗುರಿ ಸಾಧಿಸಿದೆ. ಈ ಐತಿಹಾಸಿಕ ಸಾಧನೆಯೊಂದಿಗೆ, ಕಡಬ ತಾಲೂಕು ಜಿಲ್ಲೆ ಹಾಗೂ ರಾಜ್ಯದಲ್ಲೇ ತೆರಿಗೆ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ದಕ್ಷಿಣ ಕನ್ನಡ: ಜಿಲ್ಲೆಯಲ್ಲೇ ಕಡಬ ತಾಲೂಕಿನ ತೆರಿಗೆ ಸಂಗ್ರಹಣೆಯು ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಪ್ರಥಮವಾಗಿರುವುದಾಗಿ ಕಡಬ ತಾ ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.

ಹೊಸ ತಾಲೂಕಾಗಿ ಘೋಷಣೆಯಾದಲ್ಲಿಂದ ಈವರೆಗೆ ಪ್ರತೀ ವರ್ಷ ತೆರಿಗೆ ಸಂಗ್ರಹಣೆಯಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಿದೆ. ಅಂತೆಯೇ ಈ ಆರ್ಥಿಕ ವರ್ಷದಲ್ಲಿಯೂ ಕಡಬ ತಾಲೂಕು ತನ್ನ ಪ್ರಸಕ್ತ ಸಾಲಿನ ತೆರಿಗೆ ಗುರಿಯನ್ನು ಮೀರಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಯ ಪಥದಲ್ಲಿ ಕಡಬದ ಈ ಸಾಧನೆಯು ಒಂದು ಮೈಲಿಗಲ್ಲಾಗಿದೆ.

ಶೇ. 103ರ ಸಾಧನೆ ಮಾಡಿರುವ ಕಡಬ

ಕಡಬ ತಾಲೂಕಿನ 21 ಗ್ರಾಮ ಪಂಚಾಯತ್ ಗಳು ಪ್ರಸಕ್ತ ಸಾಲಿನ ಬೇಡಿಕೆಯಲ್ಲಿ ಶೇ. 100 ರಷ್ಟು ಗುರಿ ತಲುಪಿರುವುದು ಒಂದು ಐತಿಹಾಸಿಕ ಸಾಧನೆಯಾಗಿದೆ. ಪ್ರಸಕ್ತ ಸಾಲಿನ ಗುರಿಯನ್ನು ಮೀರಿ ಶೇ. 103 ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ಜಿಲ್ಲೆಯಲ್ಲೇ ಪ್ರಥಮ ಸ್ಥಾನವನ್ನು ಕಡಬ ತಾಲೂಕು ಪಡೆದಿದೆ.

3.41 ಕೋಟಿ ತೆರಿಗೆ ಸಂಗ್ರಹ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಕಟ್ಟಡಗಳು, ಮನೆಗಳು, ವಿವಿಧ ಕೈಗಾರಿಕಾ ಕಟ್ಟಡಗಳಿಗೆ ಕಾನೂನು ಬದ್ಧವಾಗಿ ವಿಧಿಸುವ ತೆರಿಗೆಗಳಿಗೆ ಸಂಬಂಧಿಸಿ ಪಂಚಾಯಿತಿಗಳಿಗೆ ಗುರಿಯನ್ನು ನೀಡಲಾಗುತ್ತದೆ. ವಾರ್ಷಿಕ ತಾಲೂಕಿಗೆ 21 ಗ್ರಾ.ಪಂ.ಗಳನ್ನು ಸೇರಿ ಒಟ್ಟು ₹3.34 ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿಯಾಗಿತ್ತು. ಆದರೆ ಈಗಾಗಲೇ ₹3.41 ಕೋಟಿಗಿಂತಲೂ ಅಧಿಕ ಮೊತ್ತವನ್ನು ಗ್ರಾಮ ಪಂಚಾಯತ್‌ಗಳು ತೆರಿಯನ್ನು ಸಂಗ್ರಹಿಸಿವೆ.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಒಂದರಿಂದಲೇ 1 ಕೋ.ರು.. ಗಿಂತ ಹೆಚ್ಚು ತೆರಿಗೆ ಸಂಗ್ರಹಣೆಯಾಗಿದೆ. ಅಲ್ಲದೆ ನೆಲ್ಯಾಡಿ ಗ್ರಾ.ಪಂ.ನಿಂದ 33 ಲಕ್ಷ., ಕೌಕ್ರಾಡಿ ಗ್ರಾ.ಪಂ.ನಿಂದ 29 ಲಕ್ಷ, ರಾಮಕುಂಜ ಗ್ರಾ.ಪಂ.ನಿಂದ 20 ಲಕ್ಷ, ಕುಟ್ರುಪಾಡಿ ಗ್ರಾ.ಪಂ.ನಿಂದ 19 ಲಕ್ಷ., ಬೆಳಂದೂರು ಗ್ರಾ.ಪಂ. ನಿಂದ 17 ಲಕ್ಷ, ಸವಣೂರು ಗ್ರಾ.ಪಂ.ನಿಂದ 16. 5 ಲಕ್ಷ, ಆಲಂಕಾರು ಗ್ರಾ.ಪಂ.ನಿಂದ 16. 4 ಲಕ್ಷ, ಬಿಳಿನೆಲೆ ಗ್ರಾ.ಪಂ. 15 ಲಕ್ಷ ಹಾಗೂ ಮರ್ಧಾಳ ಗ್ರಾ.ಪಂ.ನಿಂದ 15 ಲಕ್ಷ ರು. ಗಳಷ್ಟು ತೆರಿಗೆ ಸಂಗ್ರಹಿಸಲಾಗಿದ್ದು. ಎಲ್ಲ ಗ್ರಾ.ಪಂ.ಗಳು ಶೇ.100 ಕ್ಕಿಂತ ಹೆಚ್ಚಿನ ಸಂಗ್ರಹಣೆಯ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ನಾಗರಿಕ ಸಹಕಾರದಿಂದ ತೆರಿಗೆ ಸಂಗ್ರಹಣೆ

ಹಳೆಯ ಬಾಕಿಯನ್ನು ಹೊರತುಪಡಿಸಿ, ಪ್ರಸಕ್ತ ಸಾಲಿನ ತೆರಿಗೆಯನ್ನು ಪೂರ್ಣವಾಗಿ ವಸೂಲಿ ಮಾಡುವ ಮೂಲಕ ನಾಗರಿಕರು ಸಂಪೂರ್ಣ ಸಹಕಾರವನ್ನು ಗ್ರಾಮೀಣಾಭಿವೃದ್ಧಿಗೆ ನೀಡಿದ್ದಾರೆ. ಈ ಸಾಧನೆಯು ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್ಗಳು ಮತ್ತು ತೆರಿಗೆ ಪಾವತಿಸಿದ ಜಾಗೃತ ನಾಗರಿಕರ ಶ್ರಮಕ್ಕೆ ಸಾಕ್ಷಿಯಾಗಿದೆ. ವರ್ಷಾಂತ್ಯವಾಗುವ ಮಾರ್ಚ್ ತಿಂಗಳ ಒಂದು ತಿಂಗಳ ಮೊದಲೇ ಶೇ.100 ಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹಣೆಯನ್ನು ಮಾಡಿರುವುದು ತಾಲೂಕಿನ ಸಾಧನೆಯಾಗಿದೆ.

ತಾಲೂಕುವಾರು ಪ್ರಗತಿ

ತಾಲೂಕುವಾರ ಪ್ರಗತಿಯಲ್ಲಿ ಕಡಬ ಶೇ.103, ಮೂಡುಬಿದ್ರೆ ಶೇ.99, ಉಳ್ಳಾಲ ಶೇ.96, ಸುಳ್ಯ ಶೇ.95, ಬೆಳ್ತಂಗಡಿ ಶೇ.94, ಮೂಲ್ಕಿ ಶೇ.91, ಪುತ್ತೂರು ಶೇ.90, ಬಂಟ್ವಾಳ ಶೇ.89, ಮಂಗಳೂರು ಶೇ.85 ತೆರಿಗೆ ಸಂಗ್ರಹಣೆಯಲ್ಲಿ ಮಾಡುವ ಮೂಲಕ ಒಟ್ಟು ಜಿಲ್ಲೆಯಲ್ಲಿ ಶೇ.92 ತೆರಿಗೆ ಸಂಗ್ರಹಣೆಯನ್ನು ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಸಾಲ ಮರುಪಾವತಿಯಲ್ಲಿ ದೇಶದಲ್ಲಿಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ, ಇದು ಕರಾವಳಿಗರ ಪ್ರಾಮಾಣಿಕತೆ

----------------------------------------------

ಎಲ್ಲರ ಸಹಕಾರದಿಂದ ತೆರಿಗೆ ಸಂಗ್ರಹಣೆ ಸಾಧ್ಯ

ಗ್ರಾಮೀಣಾಭಿವೃದ್ಧಿಯನ್ನು ಹೊಂದಬೇಕಾದರೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಗಳಲ್ಲಿ ತೆರಿಗೆ ಪಾವತಿಯೂ ಒಂದು. ಇದಕ್ಕೆ ಸರ್ಕಾರ ಆರಂಭಿಕ 3 ತಿಂಗಳು ಶೇ.5 ವಿನಾಯಿತಿಯನ್ನೂ ನೀಡಿತ್ತು. ಅಲ್ಲದೆ ತೆರಿಗೆ ಸಂಗ್ರಹಣಾ ಅಭಿಯಾನವನ್ನು ಗ್ರಾಮ ಪಂಚಾಯಿತಿಗಳ ಗ್ರಾಮ ಗ್ರಾಮಗಳಲ್ಲಿ ಮಾಡುವ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಶ್ರಮದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಾಲೂಕು ಪಂಚಾಯತ್, ಕಾರ್ಯನಿರ್ವಾಹಕ ಅಧಿಕಾರಿ, ನವೀನ್ ಕುಮಾರ್ ಭಂಡಾರಿ ಹೆಚ್. ಹೇಳುತ್ತಾರೆ .

ಇದನ್ನೂ ಓದಿ: ಪ್ರೇಯಸಿಯಿಂದ ಫೋನು ಇಲ್ಲ, ಮೆಸೇಜು ಇಲ್ಲ; ಮಂಗಳೂರಿನ ಯುವಕ ವಿದೇಶದಲ್ಲಿ ಆತ್ಮ*ಹತ್ಯೆ