ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ, ಸನಾತನ ಧರ್ಮಕ್ಕೆ ಆರಂಭ, ಅಂತ್ಯ ಇಲ್ಲ. ಸನಾತನ ಧರ್ಮದ ಮೇಲೆ ಈ ದೇವ ಭೂಮಿ ನಿಂತಿದೆ. ಇಂತಹ ಧರ್ಮದ ಕುರಿತು ನೀಡಿರುವ ಹೇಳಿಕೆ ಅತ್ಯಂತ ಕೆಟ್ಟದಾಗಿದೆ: ಪ್ರಮೋದ್ ಮುತಾಲಿಕ್

ಮಂಗಳೂರು(ಸೆ.05): ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಸ್ಟಾಲಿನ್ ವಿರುದ್ಧ ದಾವೆ ಹೂಡುತ್ತೇವೆ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಸೋಮವಾರ ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ, ಸನಾತನ ಧರ್ಮಕ್ಕೆ ಆರಂಭ, ಅಂತ್ಯ ಇಲ್ಲ. ಸನಾತನ ಧರ್ಮದ ಮೇಲೆ ಈ ದೇವ ಭೂಮಿ ನಿಂತಿದೆ. ಇಂತಹ ಧರ್ಮದ ಕುರಿತು ನೀಡಿರುವ ಹೇಳಿಕೆ ಅತ್ಯಂತ ಕೆಟ್ಟದಾಗಿದೆ ಎಂದಿದ್ದಾರೆ.

'ಉದಯನಿಧಿ ವಿರುದ್ಧ ದ್ವೇಷಭಾಷಣ ಕೇಸ್‌ ಯಾಕಿಲ್ಲ' ಸಿಜೆಐಗೆ ಪತ್ರ ಬರೆದ ಭಾರತದ 262 ಗಣ್ಯ ವ್ಯಕ್ತಿಗಳು!

ಪೆರಿಯಾರ್ ಸಂಸ್ಕೃತಿಯಿಂದ ಬಂದ ಇಂತಹವರ ಆಟ ನಡೆಯುವುದಿಲ್ಲ. ಸ್ಟಾಲಿನ್ ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಮಾಚಿಸಬೇಕು. ಅವರ ಹೇಳಿಕೆ ವಿರುದ್ಧ ತಮಿಳುನಾಡಿನಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದರು.

ಕ್ರಮಕ್ಕೆ ವಿಹಿಂಪ ಆಗ್ರಹ:

ಸನಾತನ ಧರ್ಮಕ್ಕೆ ಸ್ಟಾಲಿನ್ ಮಾಡಿದ ಅವಮಾನ ಖಂಡನೀಯವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಆಗ್ರಹಿಸಿದೆ. ಹಿಂದೂ ಧರ್ಮದ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧವಾಗಿದೆ. ಸ್ಟಾಲಿನ್ ನವರನ್ನು ತಕ್ಷಣ ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಸ್ವಯಂ ಪ್ರೇರಿತ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರಾದ ಪ್ರೊ.ಎಂ.ಬಿ.ಪುರಾಣಿಕ್‌ ಹಾಗೂ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.