ಕೇಂದ್ರದಿಂದ ರೈತರಿಗೆ ಸಂತಸದ ಸುದ್ದಿ..!
ಕೇಂದ್ರ ಸರ್ಕಾರದ ರೈತ ಸಮ್ಮಾನ ನಿಧಿ ಸ್ಥಾಪಿಸಿ ಪ್ರತಿ ರೈತರ ಖಾತೆ 6 ಸಾವಿರ ಜಮೆ| ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇರಿಕೊಂಡು ರೈತರ ಖಾತೆ 10 ಸಾವಿರ ಹಣ ಜಮೆ| ಗಾಮನಗಟ್ಟಿ ಸರ್ಕಾರಿ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ ಕೇಂದ್ರ ಸಚಿವರು|
ಹುಬ್ಬಳ್ಳಿ(ಜ.17): ಕೈಗಾರಿಕೆ ಅಭಿವೃದ್ಧಿಗೆ ಜಮೀನು ನೀಡಿದ ರೈತರಿಗೆ ಮಧ್ಯವರ್ತಿಗಳು ಇಲ್ಲದಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಇಲ್ಲಿನ ಗಾಮನಗಟ್ಟಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ, ಕೆಐಎಡಿಬಿಗೆ ಜಮೀನು ನೀಡಿದ ರೈತರಿಗೆ ಭೂ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರಿಗಳು ಜಮೀನು ನೀಡಿದ ರೈತರಿಂದ ಹಣ ಪಡೆದರೆ ಪಾಪ ತಟ್ಟುತ್ತದೆ. ಕೆಲವು ಅಧಿಕಾರಿಗಳು ತಾಂತ್ರಿಕ ದೋಷ ಮುಂದಿಟ್ಟು ಪರಿಹಾರ ನೀಡಲು ಶೇ.6ರಷ್ಟು ಹಣ ಕೇಳಿದ್ದಾರೆ ಎನ್ನುವುದು ಕಿವಿಗೆ ಬಿದ್ದಿದೆ. ಅಂತಹ ಅಧಿಕಾರಿಗಳು ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರದ ರೈತ ಸಮ್ಮಾನ ನಿಧಿ ಸ್ಥಾಪಿಸಿ ಪ್ರತಿ ರೈತರ ಖಾತೆ 6 ಸಾವಿರ ಜಮೆ ಮಾಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇರಿಕೊಂಡು ರೈತರ ಖಾತೆ 10 ಸಾವಿರ ಹಣ ಜಮೆ ಮಾಡಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸಿದೆ ಎಂದ ಅವರು, ಹಿಂದಿನ ಸರ್ಕಾರ 2008ರಲ್ಲಿ ರೈತರ 60 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ವರ್ಷ 72 ಸಾವಿರ ಕೋಟಿಯನ್ನು ರೈತರಿಗಾಗಿ ಖರ್ಚು ಮಾಡುತ್ತಿದೆ ಎಂದರು. ಗಾಮನಗಟ್ಟಿ ಸರ್ಕಾರಿ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಧಾರವಾಡ ಅಪಘಾತ: 11 ಜನರ ಸಾವಿಗೆ ಅಶೋಕ ಖೇಣಿ ಹೊಣೆ
ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕೆಐಎಡಿಬಿ ವತಿಯಿಂದ ಗಾಮನಗಟ್ಟಿಹಾಗೂ ಇಟಿಗಟ್ಟಿಭಾಗದ ಜಮೀನುಗಳನ್ನು ಅಧಿಸೂಚಿಸಿ ಖರೀದಿಸದೆ ಹಾಗೆ ಬಿಡಲಾಗಿತ್ತು. ಸರ್ಕಾರದಿಂದ ರೈತರಿಗೆ ಹಣ ಪಾವತಿಸಲು 279 ಕೋಟಿ ಬಿಡುಗಡೆ ಮಾಡಲಾಗಿದೆ. ಕೆಐಎಡಿಬಿಗೆ ರೈತರು ಒದಗಿಸಬೇಕಾದ ದಾಖಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳೇ ಸಿದ್ಧಪಡಿಸಿ ನೀಡುವಂತೆ ಸೂಚಿಸಲಾಗಿತ್ತು. ಇದರಂತೆ ಪಾರದರ್ಶಕವಾಗಿ 600 ಎಕರೆ ಜಮೀನನ್ನು ಖರೀದಿಸಲಾಗಿದೆ. ರೈತರ ಹಣವನ್ನು ಖಾತೆಗೆ ಜಮೆ ಮಾಡಲಾಗುವುದು. ರೈತರು ಬೇರೆಡೆ ಜಮೀನು ಖರೀದಿಸಬೇಕು. ಅಧಿಕ ಬಡ್ಡಿ ಆಸೆಗೆ ಬಿದ್ದು ಖಾಸಗಿ ಬ್ಯಾಂಕ್ಗಳಲ್ಲಿ ಹಣ ಇಡದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಠೇವಣಿ ಇಡಿ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಇಟಗಟ್ಟಿ ಹಾಗೂ ಗಾಮನಗಟ್ಟಿ ನೋಟಿಫೈ ಮಾಡಿದ್ದರಿಂದ, ಕೃಷಿ ಸೇರಿದಂತೆ ಇತರೆ ಕಾರ್ಯಗಳಿಗೆ ಅಡಚಣೆ ಆಗಿತ್ತು. ಇದನ್ನು ಪರಿಹರಿಸಿ ಜಮೀನು ಖರೀದಿ ಮಾಡಲಾಗಿದೆ. ಮಧ್ಯವರ್ತಿ ರೈತರನ್ನು ಶೋಷಿಸದಂತೆ ವ್ಯವಹಾರವನ್ನು ಪಾರದರ್ಶಕವಾಗಿ ನಿರ್ವಹಿಸಲಾಗಿದೆ. ಇಬ್ಬರ ರೈತರ ಜಮೀನು ವಿವಾದ ನ್ಯಾಯಾಲಯದಲ್ಲಿ ಇದ್ದು, ವ್ಯಾಜ್ಯ ಬಗೆಹರಿದ ಬಳಿಕ ಹಣ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಮೀನು ನೀಡಿದ ಗಾಮಗಟ್ಟಿಹಾಗೂ ಇಟಗಟ್ಟಿಯ 26 ರೈತರಿಗೆ ಒಟ್ಟು 36.72 ಕೋಟಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಯಿತು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಉಪ ವಿಭಾಗಧಿಕಾರಿ ಗೋಪಾಲ ಕೃಷ್ಣ, ಕೆಐಎಡಿಬಿ ಅಧಿಕಾರಿಗಳಾದ ಮನೋಹರ ವಡ್ಡರ, ವಸಂತ ಕುಮಾರ, ತಹಸೀಲ್ದಾರ್ ಶಶಿಧರ ಮಾಡ್ಯಾಳ, ಮಾಜಿ ಮಹಾಪೌರ ಮಂಜುಳಾ ಅಕ್ಕೂರ, ಮಾಜಿ ಉಪ ಮಹಾಪೌರ ಚಂದ್ರಶೇಖರ ಮನಗುಂಡಿ ಉಪಸ್ಥಿತರಿದ್ದರು.