'ಧಾರವಾಡ ಅಪಘಾತದಲ್ಲಿ 11 ಜನರ ಸಾವಿಗೆ ಅಶೋಕ ಖೇಣಿ ಹೊಣೆ'
ಇಟಗಟ್ಟಿ ಬೈಪಾಸ್ ಬಳಿ ನಡೆದಿದ್ದ ಅಪಘಾತ| ಅಶೋಕ ಖೇಣಿ ಬಂಧಿಸಲು ಕೇಂದ್ರ ಗೃಹ ಸಚಿವರಿಗೆ ಆಗ್ರಹ| ರಸ್ತೆ ಅಗಲೀಕರಣ ಕುರಿತು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲು ತೀರ್ಮಾನ| ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತ ಬಂದಿರುವ ಖೇಣಿ|
ಧಾರವಾಡ(ಜ.17): ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಇಟಗಟ್ಟಿ ಕ್ರಾಸ್ ಬಳಿ ಎರಡು ದಿನಗಳ ಹಿಂದೆ ಸಂಭವಿಸಿದ ಭೀಕರ ಅಪಘಾತಕ್ಕೆ ಅದರ ಗುತ್ತಿಗೆದಾರ ಸಂಸ್ಥೆಯಾಗಿರುವ ನಂದಿ ಇನ್ಪಾಸ್ಟಕ್ಷರ್ ಕಂಪನಿ ಮಾಲೀಕ ಅಶೋಕ ಖೇಣಿ ನೇರ ಹೊಣೆ. ತಕ್ಷಣ ಖೇಣಿಯನ್ನು ಬಂಧಿಸಲು ಕೇಂದ್ರ ಗೃಹ ಸಚಿವರು ಆದೇಶಿಸಬೇಕೆಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದ್ದಾರೆ.
"
ಈ ರಸ್ತೆಯಲ್ಲಿ ಹತ್ತಾರು ವರ್ಷಗಳಿಂದ ನಿರಂತರ ಅಪಘಾತಗಳು ನಡೆದಿದ್ದು ನೂರಾರು ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ರಸ್ತೆ ಅಗಲೀಕರಣಕ್ಕೆ ಮುಂದಾದರು ಹಣದ ಆಸೆಯಿಂದ ಅದಕ್ಕೆ ತಡೆಯೊಡ್ಡುತ್ತಲೇ ಬಂದಿದ್ದಾರೆ. ಇದೀಗ ಪ್ರವಾಸಕ್ಕೆ ಹೊರಟಿದ್ದ 11 ಜನರು ಒಂದೇ ಘಟನೆಯಲ್ಲಿ ಮೃತರಾಗಿರುವುದಕ್ಕೆ ಯಾರು ಹೊಣೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಅವರು, ಅಶೋಕ ಖೇಣಿ ಅವರಿಗೆ ಈ ರಸ್ತೆ ನಿರ್ಮಾಣ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹ ಆಧಾರದ ಮೇಲೆ ನೀಡಲಾಗಿದೆ. ಹೀಗಾಗಿ ಅದಕ್ಕೆ ಅವರೇ ನೇರ ಹೊಣೆ ಹೊರಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ ಟೋಲ್ ಸಂಗ್ರಹಕ್ಕೆ ಸೀಮಿತವಾಗಿರುವ ಅಶೋಕ್ ಖೇಣಿ ಬೈಪಾಸ್ನ 26 ಕಿಲೋ ಮೀಟರ್ ರಸ್ತೆಯನ್ನು ಅಗಲೀಕರಣ ಮಾಡಲು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತ ಬಂದಿದ್ದಾರೆ. ಪ್ರತಿ ತಿಂಗಳು ಕೋಟ್ಯಂತರ ರುಪಾಯಿ ಟೋಲ್ ಸಂಗ್ರಹಿಸಿದರು ಬೈಪಾಸ್ ಅಗಲೀಕರಣ ಮಾಡಲು ಅಡ್ಡಿಯಾಗುತ್ತಿದ್ದಾರೆಂದರು.
ಭೀಕರ ಅಪಘಾತ: ಶವ ಗುರುತಿಗೆ ಸಾಕ್ಷಿ ನುಡಿದ ನಾಯಿಮರಿ ಟ್ಯಾಟೂ!
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿ -48ಕ್ಕೆ ಸೇರಿಸಲು ಅಶೋಕ ಖೇಣಿ ಈ ಹಿಂದಿನಿಂದ 800 ಕೋಟಿ ಕೇಳಿದ್ದು ಸರಿಯಲ್ಲ. ಅಲ್ಲದೆ, ರಸ್ತೆ ನಿರ್ವಹಣೆ ಸಹ ಮಾಡುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ. ಹೀಗಾಗಿ ಇದೀಗ ನಡೆದ ಅಪಘಾತ ಪ್ರಕರಣಕ್ಕೆ ನೇರವಾಗಿ ಅಶೋಕ ಖೇಣಿ ಕಾರಣವಾಗಿದ್ದು ಅವರನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ವಿಷಯದಲ್ಲಿ ಖೇಣಿ ಜತೆಗೆ ಮಾತುಕತೆ ಆಗುತ್ತಿದೆ ಎಂದು ಹಲವು ವರ್ಷಗಳಿಂದಲೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸಚಿವ ಜಗದೀಶ ಶೆಟ್ಟರ್ ಹೇಳುತ್ತಲೇ ಇದ್ದಾರೆ. ಬರೀ ಆಶ್ವಾಸನೆಯಿಂದ ಅಲ್ಲಿ ಅಪಘಾತಗಳಾಗುವುದು ತಪ್ಪುವುದಿಲ್ಲ. ಜನರ ಜೀವ ಉಳಿಸಲು ಶೀಘ್ರ ಅಗಲೀಕರಣ ಕಾರ್ಯ ಆರಂಭಿಸಿ. ಇಲ್ಲದೇ ಹೋದಲ್ಲಿ ಈ ಕುರಿತು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವುದಲ್ಲದೇ ಸ್ಥಳೀಯರೊಂದಿಗೆ ಉಗ್ರ ರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.